ಲಕ್ಷದ್ವೀಪ ಅಭಿವೃದ್ಧಿಗೆ ರೂಪಿಸಲಾದ ಹೊಸ ನಿಯಮದ ವಿರುದ್ಧ ಪ್ರತಿಭಟನೆ ಸಮುದ್ರ, ನದಿ ಸೇರಿದಂತೆ ನೀರಿನೊಳಗೆ ಪ್ರತಿಭಟಿಸಿದ ಜನ ಲಕ್ಷದ್ವೀಪ ನಿವಾಸಿಗಳಿಂದ 12 ಗಂಟೆ ಉಪವಾಸ ಸತ್ಯಾಗ್ರಹ 

ಲಕ್ಷದ್ವೀಪ(ಜೂ.08): ದೇಶದಲ್ಲಿ ಕೊರೋನಾ ವಿರುದ್ಧ ಹೋರಾಟವಾದರೆ, ಲಕ್ಷದ್ವೀಪದಲ್ಲಿ ಜಾರಿಗೆ ತರಲು ಹೊರಟಿರುವ ಹೊಸ ನಿಯಮದ ವಿರುದ್ಧ ಹೋರಾಟ ಜೋರಾಗುತ್ತಿದೆ. ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಪುಲ್ ಪಟೇಲ್ ಖೋಡಾ ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ. ಪರಿಣಾಮ ಭಾರಿ ವಿರೋಧ ವ್ಯಕ್ತವಾಗಿದೆ. ಇದೀಗ ಜನ ತಮ್ಮ ತಮ್ಮ ಮನೆ ಮುಂದೆ, ಸಮುದ್ರದೊಳಗೆ ಸೇರಿದಂತೆ ನೀರಿನೊಳಗೆ ಕಪ್ಪು ಬಾವುಟ, ಸೇವ್ ಲಕ್ಷದ್ವೀಪ ಎಂಬ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಲಕ್ಷದ್ವೀಪದಲ್ಲಿ ನೋ ಚೇಂಜಸ್: ಅಮಿತ್ ಶಾ...

ಲಕ್ಷದ್ವೀಪವನ್ನ ಮಾಲ್ಡೀವ್ಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಹಾಗೂ ಪ್ರವಾಸೋದ್ಯಮದ ಮಟ್ಟ ಹೆಚ್ಚಿಸಲು ರೋಪಿಸಲಾದ ಹೊಸ ಕರಡು ನಿಯಮ ಜನ ವಿರೋಧಿ ಎಂದು ದ್ವೀಪ ಸಮೂಹದ ಜನ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ರಾಜ್ಯಗಳು ಆರೋಪಿಸಿದೆ. ಇದಕ್ಕಾಗಿ ಲಕ್ಷದ್ವೀಪದಲ್ಲಿ ಪ್ರತಿಭಟನೆ ಕಾವು ಜೋರಾಗುತ್ತಿದೆ. ನೀರಿನೊಳಗೆ ಸೇವ್ ಲಕ್ಷದ್ವೀಪ, ಗೋ ಬ್ಯಾಕ್ ಪ್ರಪುಲ್ ಪಟೇಲ್ ಖೋಡಾ ಎಂಬ ಬರಹದ ಪ್ಲೇ ಕಾರ್ಡ್ ಪ್ರದರ್ಶಿಸಿದ್ದಾರೆ.

ನೀರಿನೊಳಗೆ ವಿನೂತನವಾಗಿ ಪ್ರತಿಭಟಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ನೀರಿನೊಳಗೆ ಪ್ರತಿಭಟನೆ ಜೊತೆಗೆ 12 ಗಂಟೆಗಳ ಸತತ ಉಪಾವಾಸ ಸತ್ಯಾಗ್ರಹವನ್ನು ಮಾಡಿದ್ದಾರೆ. ಇನ್ನು ಲಕ್ಷದ್ವೀಪದೊಂದಿಗೆ ನಿಕಟ ಸಂಪರ್ಕವಿರುವ ಕೇರಳದಲ್ಲೂ ಪ್ರತಿಭಟನೆ ನಡೆದಿದೆ. ಜೊತೆಗೆ ಲಕ್ಷದ್ವೀಪ ಜನರಿಗೆ ಸಂಪೂರ್ಣ ಬೆಂಬಲ ನೀಡಿದೆ.

ಲಕ್ಷದ್ವೀಪ ಅಭಿವೃದ್ಧಿ ಪ್ರಾದಿಕಾರ ನಿಯಂತ್ರಣ, ಲಕ್ಷದ್ವೀಪ ಸಮಾಜ ವಿರೋಧಿ ಚಟುವಟಿಕೆ ಮತ್ತು ನಿಯಂತ್ರಣ ಕಾಯ್ದೆ. ಪ್ರಾಣಿ ಸರಂಕ್ಷಣೆ ಮತ್ತು ಉತ್ತೇಜನ, ಪಂಚಾಯತ್ ನಿಯಮಗಳ ಕಾಯ್ದೆಗಳಿಗೆ ತಿದ್ದುಪಡಿ ತರಲು ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಪುಲ್ ಪಟೇಲ್ ಖೋಡಾ ಮುಂದಾಗಿದ್ದಾರೆ. ಇನ್ನು ಸ್ಥಳೀಯ ಮೀನುಗಾರಿಕಾ ಬೋಟ್‌ಗಳಲ್ಲಿ ಸರ್ಕಾರಿ ಅಧಿಕಾರಿಗಳ ನೇಮಕ ಸೇರಿದಂತೆ ಕೆಲ ಪ್ರಮುಖ ನಿರ್ಧಾರಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಇದೇ ಕರಡು ನಿಯಮವನ್ನು ಇದೀಗ ಜನವಿರೋಧಿ ನೀತಿ ಎಂದು ಪ್ರತಿಭಟಿಸುತ್ತಿದ್ದಾರೆ.