ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಂತ್ರಿ ಮಗನಿಂದ ರೈತರಿಗೆ ಗುಂಡೇಟು!
* ರೈತರ ಮೇಲೆ ಕಾರು ಹರಿದ ವಿಡಿಯೋ ವೈರಲ್
* ಉತ್ತರ ಪ್ರದೇಶದ ಲಖೀಂಪುರ ಖೇರಿ ದುರ್ಘಟನೆಯ ದೃಶ್ಯಾವಳಿ ಬಹಿರಂಗ
* ಹಠಾತ್ ಮೈಮೇಲೆರಗಿದ ಕಾರು
* ಕಾರಲ್ಲಿ ಮಗ ಇದ್ದರೆ ರಾಜೀನಾಮೆ: ಕೇಂದ್ರ ಸಚಿವ ಮಿಶ್ರಾ
* ಕಾರಲ್ಲಿ ಮಿಶ್ರಾ ಪುತ್ರ ಇದ್ದ, ಗುಂಡು ಹಾರಿಸಿದ: ಎಫ್ಐಆರ್
ಲಖನೌ(ಅ 06): ಉತ್ತರ ಪ್ರದೇಶದ(Uttar Pradesh) ಲಖೀಂಪುರ ಖೇರಿಯಲ್ಲಿ(Lakhimpur Kheri) ರೈತರ ಮೇಲೆ ಹರಿದಿದೆ ಎನ್ನಲಾದ ಎಸ್ಯುವಿ(SUV) ಕಾರಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ನಡುವೆಯೇ ಘಟನೆಯ ಎಫ್ಐಆರ್ನಲ್ಲಿ(FIR) ‘ರೈತರ ಮೇಲೆ ಹರಿದ ಕಾರಿನಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ(Ajay Mishra) ಮಗ ಇದ್ದರು. ಅವರು ರೈತರ ಮೇಲೆ ಗುಂಡು ಕೂಡ ಹಾರಿಸಿದರು(Firing)’ ಎಂದು ಉಲ್ಲೇಖಿಸಲಾಗಿದೆ. ಇದು ದೊಡ್ಡ ರಾಜಕೀಯ ಬಿರುಗಾಳಿ ಎಬ್ಬಿಸಿದೆ.
25 ಸೆಕೆಂಡಿನ ವಿಡಿಯೋ ಕ್ಲಿಪ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಎಸ್ಯುವಿ ಕಾರೊಂದು ಗುದ್ದಿಕೊಂಡು ಹೋಗಿದೆ. ಈ ಸಮಯದಲ್ಲಿ ಕೆಲವರು ಕಾರಿನ ಅಡಿಗೆ ಸಿಲುಕಿಕೊಂಡರೆ, ಹಲವರು ತಪ್ಪಿಸಿಕೊಳ್ಳಲು ಓಡಿದ್ದಾರೆ.
"
‘ಈ ಕಾರಿನಲ್ಲಿ ಕೇಂದ್ರ ಮಂತ್ರಿ ಅಜಯ್ ಕುಮಾರ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ(Ashish Mishra) ಹಾಗೂ ಅವರ ಸಹಚರರು ಇದ್ದರು. ಕಾರು 100 ಕಿ.ಮೀ. ವೇಗದಲ್ಲಿ ನುಗ್ಗಿಬಂತು. ಇದು ನಮ್ಮ ಕೊಲೆಗೆ ನಡೆದ ಸಂಚಾಗಿತ್ತು’ ಎಂದು ಗಾಯಾಳು ರೈತ ತೇಜಿಂದರ್ ವಿರ್ಕ್ ಆರೋಪಿಸಿದ್ದಾರೆ. ದೃಶ್ಯದಲ್ಲಿ ಕಾರು ಚಾಲನೆ ಮಾಡುತ್ತಿದ್ದವರು ಯಾರು ಎಂಬ ಸ್ಪಷ್ಟತೆ ಇಲ್ಲ. ಆದರೆ ಎಫ್ಐಆರ್ನಲ್ಲಿ ‘ಕಾರಲ್ಲಿ ಮಿಶ್ರಾ ಪುತ್ರ ಆಶಿಷ್ ಇದ್ದರು’ ಎಂದು ಬರೆದಿರುವುದು ಈ ದೃಶ್ಯಕ್ಕೆ ಪುಷ್ಟಿನೀಡುವಂತಿದೆ.
ವಿಡಿಯೋ ಬಗ್ಗೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪ್ರತಿಕ್ರಿಯಿಸಿದ್ದು, ‘ನನ್ನ ಮಗನ ವಿರುದ್ಧ ಒಂದೇ ಒಂದು ಸಾಕ್ಷ್ಯ ದೊರಕಿದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಆ ಕಾರು ನಮ್ಮದೇ ಹೌದು. ಆದರೆ ಅದರಲ್ಲಿ ನನ್ನ ಮಗ ಇರಲಿಲ್ಲ’ ಎಂದು ತಿಳಿಸಿದ್ದಾರೆ.
ಈ ನಡುವೆ, ವಿಡಿಯೋವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಟ್ವೀಟರ್ನಲ್ಲಿ ಹಂಚಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
3 ರೈತರ ಅಂತ್ಯಕ್ರಿಯೆ:
ಕಾರು ಹರಿದು ಮೃತಪಟ್ಟಮೂವರು ರೈತರ ಅಂತ್ಯಕ್ರಿಯೆ ಮಂಗಳವಾರ ನಡೆಯಿತು. ಆದರೆ ನಾಲ್ಕನೇ ರೈತನ ಕುಟುಂಬದವರು ಪೋಸ್ಟ್ ಮಾರ್ಟಂನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದು, 2ನೇ ಬಾರಿ ಮರಣೋತ್ತರ ಪರೀಕ್ಷೆಗೆ ಆಗ್ರಹಿಸಿದ್ದಾರೆ. ಬೇಡಿಕೆ ಈಡೇರಿಕೆವರೆಗೆ ಅಂತ್ಯಕ್ರಿಯೆ ನೆರವೇರಿಸಲು ನಿರಾಕರಿಸಿದ್ದಾರೆ.
Close