Labour son clears NEET: ಕೂಲಿ ಕಾರ್ಮಿಕನ ಮಗ ವೈದ್ಯನಾದ ಕಥೆ
ಜೈಪುರ(ನ.̄26): ಪ್ರತಿಭೆಗೆ ಬಡತನದ ಹಂಗಿಲ್ಲ. ಸಾಧಿಸುವ ಛಲದ ಜೊತೆ ಸಮರ್ಪಣಾ ಮನೋಭಾವವಿದ್ದರೆ ಕಂಡ ಕನಸನ್ನು ನನಸಾಗಿಸಿಕೊಳ್ಳುವುದು ಕಷ್ಟವೇನಲ್ಲ. ದಿನಗೂಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರೊಬ್ಬರ ಪುತ್ರನೋರ್ವ ಈಗ ಎನ್ಇಇಟಿ(NEET)ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಪಾಸ್ ಮಾಡಿದ್ದು ಪ್ರತಿಭೆಗೆ ಬಡತನವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ರಾಜಸ್ಥಾನ(Rajasthan)ರಾಜ್ಯದ ಬರ್ಮೇರ್ನ ಕಮ್ಥೈ(Kamthai)ಗ್ರಾಮದ ನಿವಾಸಿಯಾಗಿರುವ ದುಧುರಾಮ್(Dudharam) ಈ ಸಾಧನೆ ಮಾಡಿರುವ ಯುವಕ. ಈತ 2021 ರ ಎನ್ಇಇಟಿ(NEET UG 2021) ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಪಾಸ್ ಆಗಿದ್ದಾನೆ. ಈತ 720 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ 626 ಅಂಕ ಗಳಿಸಿದ್ದಾನೆ. ಈ ಮೂಲಕ ತನ್ನ ಹಳ್ಳಿಗೆ ಮೊದಲ ವೈದ್ಯನಾಗಿ ಈತ ಸೇವೆ ಸಲ್ಲಿಸಲಿದ್ದಾನೆ. ಈಗ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ ಪಾಸಾದಲ್ಲಿ ನೀವು ವೈದ್ಯರಾಗಿ ಸೇವೆ ಸಲ್ಲಿಸಬಹುದಾಗಿದೆ. ಹೀಗಾಗಿ ಇದೊಂದು ಪಾಸು ಮಾಡಲು ತುಂಬಾ ಕಠಿಣವೆನಿಸಿದ ಪರೀಕ್ಷೆಯಾಗಿದೆ. ತುಂಬಾ ವಿದ್ಯಾರ್ಥಿಗಳು ಇದನ್ನು ಪಾಸ್ ಮಾಡುವುದಕ್ಕಾಗಿ ಹಲವು ವರ್ಷಗಳ ಕಾಲ ಪ್ರತ್ಯೇಕ ತರಬೇತಿ ಪಡೆಯುತ್ತಾರೆ. ಆದರೆ ದುಧುರಾಮ್ನ ಕುಟುಂಬದ ಆರ್ಥಿಕ ಸ್ಥಿತಿ ತುಂಬಾ ಶೋಚನೀಯವಾಗಿದ್ದರಿಂದ ಆತ ಯಾವುದೇ ತರಬೇತಿ ಇಲ್ಲದೇ ತುಂಬಾ ಕಠಿಣ ಪರಿಶ್ರಮದಿಂದ ಈ ಪರೀಕ್ಷೆಯನ್ನು ಪಾಸು ಮಾಡಿದ್ದು, ಬಡತನದ ಹಿನ್ನೆಲೆಯಿಂದ ಬಂದು ಇಂತಹ ದೊಡ್ಡ ಸಾಧನೆ ಮಾಡಿದ್ದಕ್ಕೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.
ಮೈಸೂರು : ವಕೀಲನಾದ ಕೂಲಿ ಕಾರ್ಮಿಕನ ಮಗ
ಕೆಲ ಬಲ್ಲ ಮೂಲಗಳ ಪ್ರಕಾರ ದುಧುರಾಮ್ ಕುಟುಂಬದಲ್ಲಿ ಐವರು ಸದಸ್ಯರಿದ್ದು, ಇವರು ಯಾವುದೇ ಸ್ಥಿರ ಆದಾಯದ ಮೂಲವನ್ನು ಹೊಂದಿಲ್ಲ. ಈತನ ತಂದೆ ಹಾಗೂ ಸಹೋದರ ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇವರು ಕೇವಲ ಸಣ್ಣ ಪ್ರಮಾಣದ ಆಸ್ತಿಯನ್ನು ಹೊಂದಿದ್ದು, ಇದರಲ್ಲಿ ಕುಟುಂಬವನ್ನು ಪೋಷಿಸುವ ಸಲುವಾಗಿ ಕೇವಲ ರಾಗಿಯನ್ನು ಬೆಳೆಯುತ್ತಿದ್ದಾರೆ. ತಮ್ಮ ಸಾಧನೆ ಬಗ್ಗೆ ಮಾತನಾಡಿದ ದುಧುರಾಮ್, ನಾನು ವೈದ್ಯನಾಗಬೇಕೆಂದು ಬಯಸಿದ್ದೆ ಹಾಗೂ ಅದಕ್ಕಿಂತ ಕಡಿಮೆ ಅರ್ಹತೆಯ ಶಿಕ್ಷಣ ಪಡೆಯುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ನಾನು 2018ರಲ್ಲಿ ನಾನೇ ಸ್ವತಃ ಅಧ್ಯಯನ(self-study)ಮಾಡಲು ಶುರು ಮಾಡಿದೆ. ಹಾಗೂ 440 ಅಂಕ ಗಳಿಸಿದೆ. 2019ರಲ್ಲಿ ಎರಡನೇ ಬಾರಿಯ ಪ್ರಯತ್ನದಲ್ಲಿ ನನಗೆ 558 ಅಂಕ ಬಂತು. ನಂತರ 2020ರಲ್ಲಿ ನಾನು 3ನೇ ಬಾರಿ ಪರೀಕ್ಷೆ ಬರೆಯುವ ಸಲುವಾಗಿ ಕೋಟಾ(Kota)ಗೆ ಬಂದು ಅಲ್ಲಿನ ಅಲೆನ್ ಕೆರಿಯರ್ ಇನ್ಸ್ಟಿಟ್ಯೂಟ್ನಲ್ಲಿ ಪ್ರವೇಶ ಪಡೆದೆ. ಬಳಿಕ ಬರೆದ ಪರೀಕ್ಷೆಯಲ್ಲಿ ನನಗೆ 593 ಮಾರ್ಕ್ನೊಂದಿಗೆ ಅಖಿಲ ಭಾರತ ಶ್ರೇಣಿಯಲ್ಲಿ 23082 ಗ್ರೇಡ್ ಬಂತು ಎಂದರು.
ಇನ್ನು ದುಧುರಾಮ್ ಇರುವ ಗ್ರಾಮವೂ ಕುಗ್ರಾಮವಾಗಿದ್ದು, ಈ ಹಳ್ಳಿಗೆ ಉತ್ತಮ ನೀರು ಹಾಗೂ ವಿದ್ಯುತ್ ಪೂರೈಕೆ ಇಲ್ಲ. ಆತನ ಕುಟುಂಬದವರು ಕೂಡ ಅನಕ್ಷರಸ್ಥರು ಆಗಿರುವುದರಿಂದ ಆತನ ಶಿಕ್ಷಣಕ್ಕೆ ಸಹಾಯ ಮಾಡುವ ಮಾರ್ಗ ಅವರಿಗೆ ತಿಳಿದಿಲ್ಲ. ಹೀಗಿದ್ದರೂ ದುಧುರಾಮ್ ಮಾಡಿರುವ ಸಾಧನೆಯಿಂದಾಗಿ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರು.
ಹೈದ್ರಾಬಾದ್ ಕಾರ್ಮಿಕರಿಗೆ ನೆರವಾಗಿ ಮಾನವೀಯತೆ ಮೆರೆದ ಕರ್ನಾಟಕ ಪೊಲೀಸರು
ಎಲ್ಲಾ ಇದ್ದೂ ಏನೂ ಮಾಡಲಾಗದೇ ಇರುವವರೇ ಹೆಚ್ಚಿರುವಾಗ ಏನೂ ಇಲ್ಲದೆಯೂ ಇಷ್ಟೊಂದು ದೊಡ್ಡ ಸಾಧನೆ ಮಾಡಿರುವ ದುಧುರಾಮ್ ಸಾಧಿಸುವ ಛಲವಿರುವ ಯುವ ಸಮುದಾಯಕ್ಕೆ ದೊಡ್ಡ ಸ್ಪೂರ್ತಿಯ ಸೆಲೆಯಾಗಬಲ್ಲರು ಎಂದರೆ ತಪ್ಪಾಗಲಾರದು.