ಕೋಲ್ಕತಾದಲ್ಲಿ 14 ಜನರ ಬಲಿ ಪಡೆದ ರಾಮನವಮಿ ಹಿಂಸಾಚಾರದ ತನಿಖೆಯನ್ನು ಎನ್‌ಐಎಗೆ ವಹಿಸಿದ್ದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.

ನವದೆಹಲಿ: ಕೋಲ್ಕತಾದಲ್ಲಿ 14 ಜನರ ಬಲಿ ಪಡೆದ ರಾಮನವಮಿ ಹಿಂಸಾಚಾರದ ತನಿಖೆಯನ್ನು ಎನ್‌ಐಎಗೆ ವಹಿಸಿದ್ದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಹೀಗಾಗಿ ಬಂಗಾಳ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕಳೆದ ರಾಮನವಮಿಯಂದು ಹೂಗ್ಲಿ ಜಿಲ್ಲೆಯಲ್ಲಿ ನಡೆದ ಗಲಭೆಯನ್ನು ಎನ್‌ಐಎಗೆ ವಹಿಸುವಂತೆ ಬಿಜೆಪಿಯ ಸುವೇಂದು ಅಧಿಕಾರಿ ಹಾಗೂ ಇನ್ನಿತರರು ಕಲ್ಕತಾ ಹೈಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಹೈಕೋರ್ಟ್ ಎನ್‌ಐಎಗೆ ತನಿಖೆ ಹೊಣೆ ವಹಿಸಿತ್ತು. ಆದರೆ ಇದು ರಾಜಕೀಯ ಪ್ರೇರಿತ ಘರ್ಷಣೆ, ಇದರಲ್ಲಿ ಬಾಂಬ್‌ ಬಳಕೆಯಾಗಿಲ್ಲ. ಹೀಗಾಗಿ ತನಿಖೆಯನ್ನು ಎನ್‌ಐಎನಿಂದ ರಾಜ್ಯ ಪೊಲಿಸರಿಗೆ ವರ್ಗಾಯಿಸುವಂತೆ ಮಮತಾ ಸರ್ಕಾರ ಅರ್ಜಿ ಸಲ್ಲಿಸಿತ್ತು.

ಮುಸ್ಲಿಮರಿದ್ದ ಕಡೆ ರಾಮನವಮಿ ಏಕೆ : ಮಮತಾ ಬ್ಯಾನರ್ಜಿ

ರಾಜ್ಯದ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಅನುಮತಿ ಪಡೆಯದೆ ಉದ್ದೇಶಪೂರ್ವಕವಾಗಿಯೇ ಬಿಜೆಪಿಯು ರಾಮನವಮಿ ಮೆರವಣಿಗೆ ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈ ಹಿಂದೆ ಆರೋಪಿಸಿದ್ದರು. ಹೂಗ್ಲಿ ಜಿಲ್ಲೆಯ ರಿಶ್ರಾ ಮತ್ತು ಸೆರಾಂಪೂರ್‌ಗಳಲ್ಲಿ ರಾಮನವಮಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಬೆನ್ನಲ್ಲೇ ಮಮತಾ ಈ ಆರೋಪ ಮಾಡಿದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಮನವಮಿ ಮೆರವಣಿಗೆ 5 ದಿನಗಳ ಕಾಲ ಏಕೆ ನಡೆಯುತ್ತದೆ. ಆಚರಣೆಯ ಒಂದು ದಿನ ನೀವು ಅಂತಹ ಹಲವಾರು ಮೆರವಣಿಗೆಯನ್ನು ಆಯೋಜಿಸಿ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ನಿಮ್ಮೊಂದಿಗೆ ಶಸ್ತ್ರಾಸ್ತ್ರ ಕೊಂಡೊಯ್ಯಬೇಡಿ ಎಂದಿದ್ದಾರೆ. ಅಲ್ಲದೇ ಅವರು (ಬಿಜೆಪಿ) ಉದ್ದೇಶಪೂರ್ವಕವಾಗಿಯೇ ಅನುಮತಿಯಿಲ್ಲದೆ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ರಾಮನವಮಿ ಮೆರವಣಿಗೆ ಮಾಡುತ್ತಿದ್ದಾರೆ. ರಿಶ್ರಾದಲ್ಲಿ ಜನ ಶಸ್ತ್ರಾಸ್ತ್ರಗಳೊಂದಿಗೆ ಕಂಡುಬಂದಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

 ಪಶ್ಚಿಮ ಬಂಗಾಳದ (West Bengal) ಹೂಗ್ಲಿ ಜಿಲ್ಲೆಯ ರಿಶ್ರಾ (Rishra) ಮತ್ತು ಸ್ರೆರಾಂಪೋರ್‌ನಲ್ಲಿ (Srerampore) ರಾಮನವಮಿ ಆಚರಣೆ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು.

ಬಂಗಾಳ, ಬಿಹಾರದಲ್ಲಿ ರಾಮನವಮಿ ಬೆಂಕಿ; ಶಾಂತವಾಗಿದ್ದ ಯುಪಿಯಲ್ಲಿ ಹೇಗಿತ್ತು ಗೊತ್ತಾ ಯೋಗಿ ಪ್ಲ್ಯಾನ್‌?

ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಕೂಡ ರಾಮನವಮಿ ವೇಳೆ ಹಿಂಸಾಚಾರ ನಡೆದಿತ್ತು. . ಆದರೆ,ಯೋಗಿ ಆದಿತ್ಯನಾಥ್‌ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಸಾವಿರಾರು ರಾಮನವಮಿ ಶೋಭಾಯಾತ್ರೆಗಳೂ ನಡೆದರೂ ಎಲ್ಲಿಯೂ ಕೂಡ ಶಾಂತಿ ಕದಡಲಿಲ್ಲ. ಗಲಭೆ, ಹೊಡೆದಾಟ, ಊಹುಂ ಒಂದು ಸಣ್ಣ ವಿಚಾರಕ್ಕೂ ಉತ್ತರ ಪ್ರದೇಶ ಸಾಕ್ಷಿಯಾಗಲಿಲ್ಲ. ದೇಶದ ಅತೀದೊಡ್ಡ ರಾಜ್ಯ ಗರಿಷ್ಠ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದ್ದರೂ ಉತ್ತರ ಪ್ರದೇಶ ರಾಮನವಮಿ ಸಂದರ್ಭದಲ್ಲಿ ಶಾಂತವಾಗಿರೋದಕ್ಕೆ ಕಾರಣ ಸಿಎಂ ಯೋಗಿ ಆದಿತ್ಯನಾಥ್‌ ಅವರ ಸ್ಪಷ್ಟ ಆದೇಶ.

ಅದೇನೆಂದರೆ, ಯಾರೇ ಆಗಿರಲಿ ಈಗಾಗಲೇ ಇರುವ ಸಂಪ್ರದಾಯದಲ್ಲಿಯೇ ತಮ್ಮ ಆಚರಣೆಗಳನ್ನು ಮಾಡಬೇಕು. ಹೊಸ ಆಚರಣೆಗಳನ್ನು ಯಾವುದೇ ಕಾರಣಕ್ಕೂ ಮಾಡುವಂತಿಲ್ಲ. ಶಾಂತಿ ಸಮಿತಿಯಲ್ಲಿರುವ ಎರಡೂ ಕಡೆಯ ಧಾರ್ಮಿಕ ನಾಯಕರೊಂದಿಗೆ ಸಭೆ, ಧರ್ಮ-ತಟಸ್ಥ ಧೋರಣೆ, ಹಾಗೇನಾದರೂ ಹಿಂಸಾಚಾರದಲ್ಲಿ ಭಾಗಿಯಾದಲ್ಲಿ ಗಂಭೀರ ಪರಿಣಾಮದ ಎಚ್ಚರಿಕೆ ನೀಡಲಾಗುತ್ತದೆ' ಎಂದು ಉತ್ತರ ಪ್ರದೇಶದ ಪೊಲೀಸ್‌ ಸಹಾಯಕ ನಿರ್ದೇಶಕ (ಕಾನೂನು ಸುವ್ಯವಸ್ಥೆ) ಪ್ರಶಾಂತ್‌ ಕುಮಾರ್‌ ಹೇಳುವ ಮಾತು.