ಕಾಶಿ ವಿಶ್ವನಾಥನ ಕಾರಿಡಾರ್‌ಗಿಂತ ನಾಲ್ಕು ಪಟ್ಟು ಬೃಹತ್‌ ಆದ ಮಧ್ಯಪ್ರದೇಶದ ಉಜ್ಜಯನಿಯ ಮಹಾಕಾಳ ಕಾರಿಡಾರ್‌ ಅನಾವರಣಕ್ಕೆ ಸಿದ್ಧವಾಗಿದೆ. ಅತ್ಯಂತ ಆಕರ್ಷಕವಾಗಿ ನಿರ್ಮಾಣ ಮಾಡಲಾಗಿರುವ ಈ ಕಾರಿಡಾರ್‌ಅನ್ನು ಅಕ್ಟೋಬರ್‌ 11 ರಂದು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಲಿದ್ದಾರೆ.

ನವದೆಹಲಿ (ಸೆ. 20): ಈವರೆಗೂ ಬರೀ 2 ಹೆಕ್ಟೆರ್‌ ಆವರಣದಲ್ಲಿದ್ದ ಮಹಾಕಾಳ ಸಂಕೀರ್ಣವನ್ನು ಮಧ್ಯಪ್ರದೇಶದ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ 20 ಹೆಕ್ಟೇರ್‌ ಪ್ರದೇಶಕ್ಕೆ ವಿಸ್ತರಿಸಿದೆ. ಉತ್ತರ ಪ್ರದೇಶದಲ್ಲಿ ಐದು ಹೆಕ್ಟೆರ್‌ ವಿಸ್ತೀರ್ಣದಲ್ಲಿರುವ ಕಾಶಿ ವಿಶ್ವನಾಥ ಕಾರಿಡಾರ್‌ಗಿಂತ ನಾಲ್ಕು ಪಟ್ಟು ಬೃಹತ್‌ ಆದ ಕಾರಿಡಾರ್‌ ಇದಾಗಿದೆ. ಮಹಾಕಾಳ ಕಾರಿಡಾರ್‌ನ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್‌ 11 ರಂದು ಉದ್ಘಾಟನೆ ಮಾಡಲಿದ್ದಾರೆ. ಇದು ಮಧ್ಯಪ್ರದೇಶಕ್ಕೆ ಒಂದು ತಿಂಗಳ ಒಳಗಾಗಿ ಪ್ರಧಾನಿ ಮೋದಿಯ 2ನೇ ಭೇಟಿ ಎಂದನಿಸಿಕೊಳ್ಳಲಿದೆ. ಸೋಮವಾರ ಉಜ್ಜಯನಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಈ ಮಾಹಿತಿ ನೀಡಿದ್ದಾರೆ. ಮಹಾಕಲ್ ಕಾರಿಡಾರ್ ದೇಶದ ಮೊದಲ ಧಾರ್ಮಿಕ ಕ್ಯಾಂಪಸ್ ಆಗಿದೆ, ಇದನ್ನು ಪೌರಾಣಿಕ ಸರೋವರ ರುದ್ರಸಾಗರದ ದಡದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದನ್ನು ಸುಮಾರು 200 ಶಿಲ್ಪಗಳು ಮತ್ತು ಶಿವ, ಶಕ್ತಿ ಮತ್ತು ಇತರ ಧಾರ್ಮಿಕ ಕಥೆಗಳಿಗೆ ಸಂಬಂಧಿಸಿದ ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ. ಭಕ್ತರು ಕೇಳಿರದ ಶಿವನ ಕಥೆಗಳನ್ನು ಈ ಕಾರಿಡಾರ್‌ನಿಂದ ತಿಳಿಯುತ್ತಾರೆ. ಸಪ್ತ ಋಷಿಗಳು, ನವಗ್ರಹ ಮಂಡಲ, ತ್ರಿಪುರಾಸುರ ವಧೆ, ಕಮಲದ ಕೊಳದಲ್ಲಿ ಪ್ರತಿಷ್ಠಾಪಿಸಲಾದ ಶಿವ, ಶಿವನ ಆನಂದ ಉತ್ಸಾಹವನ್ನು ಬಿಂಬಿಸುವ 108 ಕಂಬಗಳು, ಶಿವ ಸ್ತಂಭ, ಭವ್ಯ ದ್ವಾರದಲ್ಲಿ ಪ್ರತಿಷ್ಠಾಪಿಸಲಾದ ನಂದಿಯ ಬೃಹತ್ ಪ್ರತಿಮೆಗಳು. ದೇಶದ ಮೊದಲ ರಾತ್ರಿ ಉದ್ಯಾನವನ್ನೂ ಇಲ್ಲಿ ನಿರ್ಮಿಸಲಾಗಿದೆ.

Scroll to load tweet…

 793 ಕೋಟಿ ವೆಚ್ಚದ ಮಹಾಕಾಳ ವಿಸ್ತರಣೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಬಹುತೇಕ ಅಂತಿಮ ಸ್ಪರ್ಶ ನೀಡಲಾಗಿದೆ. ಇದರಲ್ಲಿ ಮಹಾಕಾಳ ಪಥ, ಮಹಾಕಾಳ ವಟಿಕಾ, ರುದ್ರಸಾಗರ ಕೊಳದ ದಡಗಳ ಅಭಿವೃದ್ಧಿಯೂ ಸೇರಿದೆ. ಯೋಜನೆಯು ಚಿತ್ರವನ್ನು ಎರಡು ರೀತಿಯಲ್ಲಿ ಬದಲಾಯಿಸುತ್ತದೆ. ಮೊದಲನೆಯದು ಮಹಾಕಾಳ ದರ್ಶನ ತೀರಾ ಸುಲಭವಾಗಲಿದೆ, ಎರಡನೆಯದು ಜನರು ದರ್ಶನದ ಜೊತೆಗೆ ಧಾರ್ಮಿಕ ಪ್ರವಾಸೋದ್ಯಮವನ್ನು ಸಹ ಮಾಡಲು ಸಾಧ್ಯವಾಗುತ್ತದೆ. ಕ್ಯಾಂಪಸ್ ವಾಕಿಂಗ್, ವಸತಿ, ವಿಶ್ರಾಂತಿಯಿಂದ ಹಿಡಿದು ಎಲ್ಲಾ ಸೌಲಭ್ಯಗಳನ್ನು ಹೊಂದಿರುತ್ತದೆ.

ಮಹಾಕಾಳ ಕಾರಿಡಾರ್‌ಗೂ ಕಾಶಿ ಕಾರಿಡಾರ್‌ಗೂ ಇರುವ ಅಂತರ: ಕಾಶಿ ವಿಶ್ವನಾಥ ಕಾರಿಡಾರ್‌ಗೆ ಸರ್ಕಾರ 800 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಮೊದಲು 3 ಸಾವಿರ ವರ್ಗ ಫೀಟ್‌ ಇದ್ದ ಈ ಕಾಶಿ ಕಾರಿಡಾರ್‌ಅನ್ನ 5 ಹೆಕ್ಟೇರ್‌ಗೆ ವಿಸ್ತರಿಸಲಾಗಿದೆ. 300 ಮೀಟರ್‌ನ ಕಾರಿಡಾರ್‌ ಇದಾಗಿದ್ದು, ದೇವಸ್ಥಾನವನ್ನು ಗಂಗಾ ನದಿಗೆ ಜೋಡಿಸಲಾಗಿದೆ. ಇನ್ನು ಮಹಾಕಾಳ ಕಾರಿಡಾರ್‌ಗೆ 793 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಮೊದಲು 2.28 ಹೆಕ್ಟೆರ್‌ ಇದ್ದ ಪ್ರದೇಶವನ್ನು 20.23 ಹೆಕ್ಟೆರ್‌ಗೆ ವಿಸ್ತರಿಸಲಾಗಿದೆ. ಒಟ್ಟು 900 ಮೀಟರ್‌ನ ಕಾರಿಡಾರ್‌ ಇದಾಗಿದೆ. ಮಂದಿರವನ್ನು ಶಿಪ್ರಾ ನದಿಗೆ ಜೋಡಿಸಲಾಗಿದೆ.

ಮಹಿಳೆಯರು ನೋಡೋಂಗಿಲ್ಲ ಮಹಾಕಾಳನ ಭಸ್ಮಾರತಿ!

ಇನ್ನು ಮಹಾಕಾಳ ಕಾರಿಡಾರ್‌ನ ಮುಖ್ಯದ್ವಾರದಿಂದ ಮಂದಿರದ ಗೇಟ್‌ನ ವರೆಗೆ 92 ಶಿವನ ಕಥೆಗಳನ್ನು ಹೇಳುವ ಪ್ರತಿಮೆಗಳನ್ನು ಸ್ಥಾಪನೆ ಮಾಡಲಾಗಿದೆ. ಪ್ರತ ಪ್ರತಿಮೆಯಲ್ಲೂ ಕ್ಯೂಆರ್‌ ಕೋಡ್‌ ಇರಲಿದೆ. ಪ್ರತಿಮೆಯಲ್ಲಿನ ಕೋಡ್‌ಅನ್ನು ಸ್ಕ್ಯಾನ್‌ ಮಾಡಿದ ಕೂಡಲೇ, ಅದರ ವಿವರಗಳು ಮೊಬೈಲ್‌ನಲ್ಲಿ ಬಿತ್ತರವಾಗಲಿದೆ. ಇನ್ನು ಕಾರಿಡಾರ್‌ನ ಲೋಕಾಪರ್ಣೆಯನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸಲು ಸರ್ಕಾರ ತೀರ್ಮಾನ ಮಾಡಿದೆ.

ಮಹಾಕಾಳಿಯ ಭವ್ಯಮಂದಿರ ಉದ್ಘಾಟನೆ, ತಾಯಿಯ 100ನೇ ಹುಟ್ಟುಹಬ್ಬದಂದೇ ಮೋದಿ ಮಹತ್ಕಾರ್ಯ!

ಕೇಂದ್ರದಿಂದ 271 ಕೋಟಿ ರೂಪಾಯಿ:
ಈ ಯೋಜನೆಗೆ ಮಧ್ಯಪ್ರದೇಶ ಸರ್ಕಾರ 421 ಕೋಟಿ ರೂಪಾಯಿ ಖರ್ಚು ಮಾಡಿದ್ದರೆ, ಕೇಂದ್ರ ಸರ್ಕಾರ 271 ಕೋಟಿ ರೂಪಾಯಿ ಖರ್ಚು ಮಾಡಿದೆ. ಇನ್ನು ಫ್ರಾನ್ಸ್‌ ಸರ್ಕಾರ ಈ ಯೋಜನೆಗೆ 80 ಕೋಟಿ ರೂಪಾಯಿ ನೀಡಿದೆ. ಇನ್ನು ಮಂದಿರದ ಸಮಿತಿಯಿಂದ 21 ಕೋಟಿ ಖರ್ಚಾಗಿದೆ. ಮಧ್ಯಪ್ರದೇಶದಲ್ಲಿ ಈ ಹಿಂದೆ ಇದ್ದ ಕಮಲ್‌ನಾಥ್‌ ಸರ್ಕಾರ 300 ಕೋಟಿಯ ಈ ಯೋಜನೆಯನ್ನು ಸಿದ್ಧ ಮಾಡಿತ್ತು. ಅಂದಿನಿಂದ ಕಮಲ್‌ನಾಥ್‌ ಅವರು ಮೃದು ಹಿಂದುತ್ವ ಧೋರಣೆಯತ್ತ ಸಾಗುತ್ತಿದ್ದಾರೆ ಎಂದು ವರದಿಯಾಗಿದ್ದವು. 2020ರಲ್ಲಿ ಮಾರ್ಚ್‌ನಲ್ಲಿ ಅಧಿಕಾರಕ್ಕೆ ಬಂದ ಶಿವರಾಜ್‌ ಸಿಂಗ್‌ ಚೌಹಾಣ್ ಸರ್ಕಾರ ಇಡೀ ಯೋಜನೆಗೆ ಮತ್ತಷ್ಟು ಹೊಸ ರೂಪ ನೀಡಿತ್ತು.