ನೇಮಂ ಕ್ಷೇತ್ರದ ನೂತನ ಶಾಸಕ ರಾಜೀವ್ ಚಂದ್ರಶೇಖರ್, ತಮ್ಮ ಕ್ಷೇತ್ರದಲ್ಲಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಶಾಸಕರ ಕಚೇರಿಯನ್ನು ಘೋಷಿಸಿದ್ದಾರೆ. ಇದರೊಂದಿಗೆ, ತುರ್ತು ಆರೋಗ್ಯ ಸೇವೆಗಾಗಿ ದಿನವಿಡೀ ಲಭ್ಯವಿರುವ ಆ್ಯಂಬುಲೆನ್ಸ್ ಸೇವೆಯನ್ನು ಜೂನ್ನಿಂದ ಆರಂಭಿಸುವುದಾಗಿ ತಿಳಿಸಿದ್ದಾರೆ.
ತಿರುವನಂತಪುರ: ಕೇರಳದ ನೂತನ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ತಾವು ಗೆದ್ದ ನೇಮಂ ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆ ತರಲು ಮುಂದಾಗಿದ್ದಾರೆ. 24 ಗಂಟೆಗಳೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು 24 ಗಂಟೆಗಳ ಶಾಸಕರ ಕಚೇರಿ ಘೋಷಣೆ ಮಾಡಿದ್ದಾರೆ.

ಇದಲ್ಲದೆ ಕ್ಷೇತ್ರದೊಳಗೆ ದಿನವಡೀ ಜನರ ತುರ್ತು ಆರೋಗ್ಯಕ್ಕೆ ಆ್ಯಂಬುಲೆನ್ಸ್ ಸೇವೆ ಒದಗಿಸಲು ಉದ್ದೇಶಿಸಲಾಗಿದ್ದು, ಆ್ಯಂಬುಲೆನ್ಸ್, ಶಾಸಕರ ಕಚೇರಿಯಿಂದಲೇ ಕಾರ್ಯನಿರ್ವಹಿಸಲಿದೆ. ಜೂನ್ನಿಂದ ಸೇವೆ ಆರಂಭಿಸಲಿದೆ.
ಕಚೇರಿಯಿಂದ ತುರ್ತು ಸೇವೆ
ಕ್ಷೇತ್ರದ ಕರುಮಂ ಮತ್ತು ಕಡಾಡಿ ವಾರ್ಡ್ಗಳಲ್ಲಿ ಗುರುವಾರ ನಡೆದ ‘ನಂದಿ ನೇಮಂ’ ಸಾರ್ವಜನಿಕ ಸ್ವಾಗತ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ರಾಜೀವ್ ಚಂದ್ರಶೇಖರ್, ‘ಕಚೇರಿಯಿಂದ ತುರ್ತು ಸೇರಿ ಯಾವುದೇ ಸಮಯದಲ್ಲಿ ಜನರು ಸಹಾಯ ಪಡೆಯಬಹುದು. ಆ್ಯಂಬುಲೆನ್ಸ್ ತಡರಾತ್ರಿ ಆರೋಗ್ಯ ಸಮಸ್ಯೆಗೆ ಸಕಾಲಿಕ ಸಾರಿಗೆ ಒದಗಿಸಲಿದೆ. ನೇಮಂ ಜನರು ತಮ್ಮ ಜೀವನದಲ್ಲಿ ಬದಲಾವಣೆಗೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಶಾಸಕರ ಕಚೇರಿ ಜನರು ಹಗಲು, ರಾತ್ರಿ ಎನ್ನದೆ ಯಾವುದೇ ಹಿಂಜರಿಕೆಯಿಲ್ಲದೆ ತಲುಪುವ ಸ್ಥಳವಾಗಬೇಕು’ ಎಂದರು. ಅಲ್ಲದೆ ಜನರು ತಮ್ಮನ್ನು ಫೋನ್, ಇ-ಮೇಲ್ ಮೂಲಕ ಸಂಪರ್ಕಿಸಬಹುದು ಎಂದು ಹೇಳಿದರು.
ಕೇರಳ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ 3 ಬಿಜೆಪಿ ಶಾಸಕರಲ್ಲಿ ರಾಜೀವ್ ಚಂದ್ರಶೇಖರ್ ಸಹ ಒಬ್ಬರು.


