ಪಿಎಫ್ಐ ಸದಸ್ಯರಿಗೆ ಮರಣದಂಡನೆ ವಿಧಿಸಿದ ಜಡ್ಜ್ಗೆ ಕೊಲೆ ಬೆದರಿಕೆ, ನಿಷೇಧಿತ ಉಗ್ರ ಸಂಘಟನೆ ಸಕ್ರಿಯ!
ಕೇರಳದಲ್ಲಿ ನಿಷೇಧಿತ ಪಿಎಫ್ಐ ಉಗ್ರ ಸಂಘಟನೆ ಸಕ್ರಿಯವಾಗಿದೆ. ತೆರೆ ಮರೆಯಲ್ಲಿ ತನ್ನ ಕೆಲಸ ನಡೆಸುತ್ತಿರುವುದು ಮತ್ತೆ ಬೆಳಕಿಗೆ ಬಂದಿದೆ. ಇದೀಗ ಬಿಜೆಪಿ ನಾಯಕನ ಹತ್ಯೆಗೈದ 15 ಪಿಎಫ್ಐ ಸದಸ್ಯರಿಗೆ ಮರಣದಂಡನೆ ವಿಧಿಸಿದ್ದ ಕೇರಳ ಜಡ್ಜ್ಗೆ ಕೊಲೆ ಬೆದರಿಕೆ ಬಂದಿದೆ.
ತಿರುವನಂತಪುರಂ(ಫೆ.01) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಇಸ್ಲಾಂ ಮೂಲಭೂತವಾದಿ ಸಂಘಟನೆಯನ್ನು UAPA ಕಾಯ್ದೆ ಅಡಿ ಕೇಂದ್ರ ಸರ್ಕಾರ ನಿಷೇಧಿಸಿದೆ. ಈ PFI ಉಗ್ರ ಸಂಘಟನೆ ನಿಷೇಧ ಗೊಂಡು ಸರಿಸುಮಾರು 2 ವರ್ಷಗಳು ಉರುಳಿದೆ. ಆದರೆ ಕೇರಳ ಹಾಗೂ ಕೆಲ ಭಾಗದಲ್ಲಿ ನಿಷೇಧಿತ ಸಂಘಟನೆ ಸಕ್ರಿಯವಾಗಿರುವ ಶಂಕೆ ಬಲವಾಗುತ್ತಿದೆ. ಇದೀಗ ಕೇರಳದ ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಅವರನ್ನು ಕುಟುಂಬ ಸದಸ್ಯರ ಮುಂದೆ ಬರ್ಬರವಾಗಿ ಹೈತ್ಯೆಗೈದ ಪಿಎಫ್ಐ ಸದಸ್ಯರಿಗೆ ಮರಣದಂಡನೆ ವಿಧಿಸಲಾಗಿದೆ. ಈ ತೀರ್ಪು ನೀಡಿದ ಆಲಪುಝಾ ಜಿಲ್ಲಾ ನ್ಯಾಯಾಲಯ ನ್ಯಾಯಮೂರ್ತಿ ಶ್ರೀದೇವಿಗೆ ಕೊಲೆ ಬೆದರಿಕೆ ಹಾಕಲಾಗಿದೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಜಡ್ಜ್ಗೆ ಕೊಲೆ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಬೆನ್ನಲ್ಲೇ ಕೇರಳ ಪೊಲೀಸರು ಜಡ್ಜ್ ಶ್ರೀದೇವಿ ಅವರ ಭದ್ರತೆ ಹೆಚ್ಚಿಸಲಾಗಿದೆ. ಮನೆ ಹಾಗೂ ಕೋರ್ಟ್ ಆವರಣದಲ್ಲೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕೆಲ ಮತೀಯ ವ್ಯಾಟ್ಸ್ಆ್ಯಪ್ ಗ್ರೂಪ್ಗಳಲ್ಲೂ ಈ ಕುರಿತು ಪೋಸ್ಟ್ಗಳು ಹರಿದಾಡುತ್ತಿದೆ. ಸೇಡು ತೀರಿಸಿಕೊಳ್ಳುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಮತ್ತು ಎಸ್ಡಿಪಿಐ ಸಂಘಟನೆಗಳ 15 ಸದಸ್ಯರು ಡಿ.19, 2021ರಂದು ರಂಜಿತ್ ಶ್ರೀನಿವಾಸನ್ ಅವರ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಅವರ ಕುಟುಂಬದ ಎದುರಿನಲ್ಲೇ ಬರ್ಬರವಾಗಿ ಹತ್ಯೆಗೈದಿದ್ದರು. ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾ. ಶ್ರೀದೇವಿ, ‘ಇದು ವಿರಳಾತಿವಿರಳ ಪ್ರಕರಣವಾಗಿದ್ದು, ಅಪರಾಧದಲ್ಲಿ ಭಾಗಿಯಾದ ಎಎಲ್ಲ 15 ಮಂದಿಗೆ ಮರಣದಂಡನೆ ವಿಧಿಸಲಾಗಿದೆ’ ಎಂದು ತೀರ್ಪು ಪ್ರಕಟಿಸಿದರು. 15 ಮಂದಿಯಲ್ಲಿ 8 ಮಂದಿ ನೇರವಾಗಿ, ಉಳಿದವರು ಪರೋಕ್ಷವಾಗಿ ಭಾಗಿಯಾಗಿದ್ದಾರೆ ಎಂದು ಕೋರ್ಟ್ ಹೇಳಿತು. ಇವರನ್ನು ನ್ಯಾಯಾಲಯ ಜ.20ರಂದು ದೋಷಿ ಎಂದು ಪ್ರಕಟಿಸಿತ್ತು. ತೀರ್ಪಿನ ಬಗ್ಗೆ ಬಿಜೆಪಿ ನಾಯಕರು ಹಾಗೂ ಶ್ರೀನಿವಾಸನ್ ಆಪ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
ಎಸ್ಡಿಪಿಐ, ಪಿಎಫ್ಐ ಕೇಸ್ ವಾಪಸ್, ಹಿಂದೂ ಸಂಘಟನೆ ಕೇಸ್ ರೀ ಓಪನ್: ಸಿ.ಟಿ.ರವಿ ಕೆಂಡಾಮಂಡಲ
ಪಾಪ್ಯುಲರ್ ಫ್ರಂಟ್ ಇಂಡಿಯಾ ಉಗ್ರ ಸಂಘಟನೆಯನ್ನು 2022ರ ಸೆಪ್ಟೆಂಬರ್ 28 ರಂದು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿದೆ. ಸಿಮಿ ಉಗ್ರ ಸಂಘಟನೆ ನಿಷೇಧದ ಬಳಿಕ ಈ ಸಂಘಟನೆ ಸದಸ್ಯರು ಪಿಎಫಿಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. 2006ರಲ್ಲಿ ಆರಂಭಗೊಂಡ ಪಿಎಫ್ಐ ಸಂಘಟನೆ ಜೊತೆಗೆ ಇತರ ಕೆಲ ಸಂಘಟನೆಗಳು ವಿಲೀನಗೊಂಡಿತ್ತು. ಆದರೆ ದೇಶ ವಿರೋಧಿ ಚಟುವಟಿಕೆ, ಇಸ್ಲಾಂ ಮೂಲಭೂತವಾದದ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕಾರ್ಯದಲ್ಲಿ ನಿರತವಾಗಿತ್ತು. ಹೀಗಾಗಿ ಈ ಸಂಘಟನೆಯನ್ನು ನಿಷೇಧಿಸಲಾಗಿದೆ.