ವಿಧಾನಸಭೆಯಲ್ಲೇ ರಾಜ್ಯಪಾಲರಿಗೆ ಮುತ್ತಿಗೆ: ಸಿಎಎ ಪ್ರಸ್ತಾಪ ಬಂದಾಗ ಮಾತು ನಿಲ್ಲಿಸಿದ ಆರೀಫ್!
ತಾರಕಕ್ಕೇರಿದ ಕೇರಳ ಸರ್ಕಾರ-ರಾಜ್ಯಪಾಲರ ನಡುವಿನ ಸಂಘರ್ಷ| ವಿಧಾನಸಭೆಯಲ್ಲೇ ಆರೀಫ್ ಮೊಹ್ಮದ್ ಖಾನ್ ಅವರಿಗೆ ಘೇರಾವ್| ಕೇರಳ ಬಜೆಟ್ ಕಲಾಪದ ವೇಳೆ ನಡೆದ ಘಟನೆ| ಸದನವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲ ಆರೀಫ್ ಮೊಹ್ಮದ್ ಖಾನ್| ಸಿಎಎ ಕುರಿತಾದ ವಿರೋಧ ಉಲ್ಲೇಖವನ್ನು ತಮ್ಮ ಅಭಿಪ್ರಾಯ ಅಲ್ಲ ಎಂದು ಹೇಳಿದ ಓದಿದ ರಾಜ್ಯಪಾಲ| ಮಾರ್ಷಲ್ ಭದ್ರತೆಯಲ್ಲಿ ಸದನ ಪ್ರವೇಶಿಸಿದ ಕೇರಳ ರಾಜ್ಯಪಾಲ|
ತಿರುವನಂತಪುರಂ(ಜ.29): ಕೇರಳ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ವಿಧಾನಸಭೆಯಲ್ಲೇ ರಾಜ್ಯಪಾಲ ಆರೀಫ್ ಮೊಹ್ಮದ್ ಖಾನ್ ಅವರಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ.
ಕೇರಳ ವಿಧಾನಸಭೆಯಲ್ಲಿ ಬಜೆಟ್ ಕಲಾಪ ಆರಂಭವಾಗಿದ್ದು, ಇದಕ್ಕೂ ಮೊದಲು ರಾಜ್ಯಪಾಲ ಆರೀಫ್ ಮೊಹ್ಮದ್ ಖಾನ್ ಸದನವನ್ನುದ್ದೇಶಿಸಿ ಭಾಷಣ ಮಾಡಿದರು.
ಈ ವೇಳೆ ಸರ್ಕಾರ ಸಿದ್ಧಪಡಿಸಿದ ಭಾಷಣದ ಪ್ರತಿಯನ್ನು ಓದುತ್ತಿದ್ದ ರಾಜ್ಯಪಾಲರು, ಒಂದು ಕ್ಷಣ ವಿರಾಮ ಪಡೆದು ಸಿಎಎ ಕುರಿತಾದ ವಿರೋಧ ಟಿಪ್ಪಣಿಯನ್ನು ಓದುತ್ತಿರುವುದಾಗಿ ತಿಳಿಸಿದರು.
ಇದು ಸರ್ಕಾರ ಬರೆದುಕೊಟ್ಟ ಭಾಷಣವಾಗಿದ್ದು, ನನ್ನ ವೈಯಕ್ತಿಕ ಅಭಿಪ್ರಾಯವಲ್ಲ ಎಂದು ಸ್ಪಷ್ಟನೆ ನೀಡಿ ಬಳಿಕ ರಾಜ್ಯಪಾಲ ಆರೀಫ್ ಮೊಹ್ಮದ್ ಖಾನ್ ತಮ್ಮ ಭಾಷಣವನ್ನು ಮುಂದುವರೆಸಿದರು.
ಮುಖ್ಯಮಂತ್ರಿಗಳ ಮೇಲಿನ ಗೌರವದಿಂದಾಗಿ ಈ ಉಲ್ಲೇಖವನ್ನು ಓದುತ್ತಿರುವುದಾಗಿ ಹೇಳಿ, ಸಿಎಎ ಕಾನೂನು ಸಾಂವಿಧಾನಿಕ ಮೌಲ್ಯಗಳನ್ನು ಉಲಲಂಘಿಸುತ್ತದೆ ಎಂದು ರಾಜ್ಯಪಾಲರು ಹೇಳಿದರು.
ಇದಕ್ಕೂ ಮೊದಲು ಭಾಷಣ ಮಾಡಲು ಸದನಕ್ಕೆ ಆಗಮಿಸಿದ ರಾಜ್ಯಪಾಲರಿಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶಾಸಕರು ಘೇರಾವ್ ಹಾಕಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ರಾಜ್ಯಪಾಲರ ವಿರುದ್ಧವೇ ಕೇರಳದಲ್ಲಿ ಗೊತ್ತುವಳಿ?
ಮಾರ್ಷಲ್’ಗಳು ಶಾಸಕರನ್ನು ಬದಿಗೆ ಸರಿಸಿ ರಾಜ್ಯಪಾಲರಿಗೆ ಭದ್ರತೆ ನೀಡಿದರು. ಈ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸ್ಪೀಕರ್ ರಾಜ್ಯಪಾಲ ಆರೀಫ್ ಮೊಹ್ಮದ್ ಖಾನ್ ರಕ್ಷಣೆಗೆ ಧಾವಿಸಿದರು.