ಪ್ಲಾಸ್ಮಾ ಬ್ಯಾಂಕ್ ಶುರು: ದಾನ ಮಾಡಿ, ಮತ್ತೊಬ್ಬರ ಜೀವ ಉಳಿಸಿ!
ಕೊರೋನಾ ಪೀಡಿತರ ಚಿಕಿತ್ಸೆಗೆ ದೆಹಲಿಯಲ್ಲಿ ರಕ್ತ ಬ್ಯಾಂಕ್ ರೀತಿಯಲ್ಲಿ ದೇಶದ ಮೊದಲ ‘ಪ್ಲಾಸ್ಮಾ ಬ್ಯಾಂಕ್’ ಸ್ಥಾಪಿಸಲಾಗುವುದು ಎಂದು ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಘೋಷಣೆ ಮಾಡಿದ್ದಾರೆ.
ಡೆಲ್ಲಿ ಮಂಜು
ನವದೆಹಲಿ(ಜೂ.30): ಪ್ಲಾಸ್ಮಾ ದಾನ ಮಾಡಿ, ಮತ್ತೊಬ್ಬರ ಜೀವ ಉಳಿಸಿ...!
ದೆಹಲಿಯ ಸರ್ಕಾರ ಕೊರೊನಾ ಸೋಂಕಿತರ ಮುಂದಿಟ್ಟಿರುವ ಮನವಿ ಇದು. ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳುವ ಮುನ್ನ ನಿಮ್ಮ ಪ್ಲಾಸ್ಮಾ ದಾನ ಮಾಡಿ. ಇದರಿಂದಾಗಿ ಮತ್ತೊಬ್ಬ ಸೋಂಕಿತನ ಜೀವ ಉಳಿಯುತ್ತೆ ಅನ್ನೋದು ಈ ಮನವಿಯ ವಿವರ.
ಪ್ಲಾಸ್ಮಾ ಬ್ಯಾಂಕ್ ಆರಂಭ;
ಸುದ್ದಿಗೋಷ್ಠಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡುವ ನಿರ್ಧಾರ ಪ್ರಕಟಿಸಿದರು. ಅಲ್ಲದೇ ಎರಡು ದಿನಗಳಲ್ಲಿ ಈ ಬ್ಯಾಂಕ್ ಕಾರ್ಯಾರಂಭ ಮಾಡಲಿದೆ. ಇಂಥದೊಂದು ಬ್ಯಾಂಕ್ ಆರಂಭವಾಗುತ್ತಿರುವುದು ಭಾತರದಲ್ಲೇ ಇದೇ ಮೊದಲು. ಕೋವಿಡ್ ಸೋಂಕಿತರ ಜೀವ ಉಳಿಸುವಲ್ಲಿ ಪ್ಲಾಸ್ಮಾ ಥೆರಪಿ ಕೂಡು ಒಂದು. ದೇಶದಲ್ಲಿ ಮೊದಲ ಬಾರಿಗೆ ಈ ಥೆರಪಿ ಜಾರಿಗೆ ತಂದು, ದೆಹಲಿಯಲ್ಲಿ ಯಶಸ್ಸು ಕಾಣಲಾಗುತ್ತಿದೆ ಎಂದರು.
ದೇಶ ತುಂಬಿಕೊಂಡ ಮೂರು 'ಸಿ', ಒಬ್ಬರಿಗೊಬ್ಬರ ಮಸಿ!
ಆರೋಗ್ಯ ಸಚಿವರ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗ ;
ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರಜೈನ್ ಅವರು ಕೂಡ ಕೊರೊನಾ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರು. ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾದಾಗ ಚಿಕಿತ್ಸೆಯ ಭಾಗವಾಗಿ ಸಚಿವರಿಗೂ ಪ್ಲಾಸ್ಮಾ ಥೆರಪಿ ಮಾಡಲಾಯಿತು. ನಂತರ ಆರೋಗ್ಯ ಸಚಿವರು ಗುಣಮುಖರಾಗಿ ಮನೆಗೆ ಮರಳಿದ್ರು.
ಪ್ಲಾಸ್ಮಾ ಥೆರಪಿಯ ಬಗ್ಗೆ ವಿವರಣೆ ನೀಡಿದ ಸಿಎಂ ಕೇಜ್ರಿವಾಲ್, ಈತನಕ ಒಟ್ಟು 29 ಮಂದಿಗೆ ಥೆರಪಿ ಮಾಡಲಾಗಿದ್ದು ಬಹುತೇಕ ಸೋಂಕಿತರು ಗುಣಮುಖರಾಗಿದ್ದಾರೆ ಎಂದರು. ಪ್ಲಾಸ್ಮಾ ದಾನ ಮಾಡುವವರಿಗಾಗಿ ಪ್ರತ್ಯೇಕ ಸಹಾಯವಾಣಿ ಆರಂಭವಾಗಲಿದ್ದು, ದಾನ ಮಾಡುವವರಿಗೆ ಎಲ್ಲಾ ಮಾಹಿತಿ ನೀಡಲಾಗುತ್ತದೆ. ಪ್ಲಾಸ್ಮಾ ದಾನ ಮಾಡುವುದು ಒಂದು ರೀತಿ ದೇವರ ಸೇವೆ ಮಾಡಿದಂತೆ ಆಗುತ್ತೆ ಎಂದಿದ್ದಾರೆ