ಕಾಶ್ಮೀರದ ಮುಸ್ಲಿಮರಿಂದ ಯುದ್ಧ ಪೀಡಿತ ಇರಾನ್ಗೆ ದೇಣಿಗೆ ಸಂಗ್ರಹ, ಟೆಹ್ರಾನ್ ಭಾವುಕ, ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಅತೀ ಬಡವರು ಬಟ್ಟೆ, ಪಾತ್ರೆಗಳನ್ನು ಮಾರಾಟ ಮಾಡಿ ಹಣ ನೀಡಿದ್ದಾರೆ.
ಕಾಶ್ಮೀರ (ಮಾ.23) ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ದ ಹಲವು ದೇಶಗಳ ಆತಂಕ ಹೆಚ್ಚುತ್ತಿದೆ. ಇರಾನ್ ಸಿಕ್ಕ ಸಿಕ್ಕ ದೇಶಗಳ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಇರಾನ್ ಪ್ರಮುಖ ನಾಯಕರನ್ನೇ ಇಸ್ರೇಲ್ ಹಾಗೂ ಅಮೆರಿಕ ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ಸಿಂಪತಿ ಗಿಟ್ಟಿಸಿಕೊಂಡಿರುವ ಇರಾನ್ಗೆ ಇದೀಗ ಭಾರತದ ಕಾಶ್ಮೀರ ಮುಸ್ಲಿಮರಿಂದ ನೆರವು ಹರಿದು ಬಂದಿದೆ. ಕಾಶ್ಮೀರದ ಶಿಯಾ ಮುಸ್ಲಿಮರು ಮನೆ ಮನೆಗೆ ತೆರಳಿ ಯುದ್ಧ ಪೀಡಿ ಇರಾನ್ ದೇಶಕ್ಕೆ ದೇಣಿಗೆ ಸಂಗ್ರಹ ಮಾಡಿದ್ದಾರೆ. ಕಾಶ್ಮೀರಿ ಮುಸ್ಲಿಮರ ನಡೆಯಿಂದ ಇರಾನ್ ಭಾವುಕಗೊಂಡಿದೆ. ಈ ನೆರವು, ಸಂಕಷ್ಟದಲ್ಲಿರುವವರಿಗೆ ಮಿಡಿಯುತ್ತಿರುವ ಹೃದಯದ ಬಗ್ಗೆ ಇರಾನ್ ರಾಯಭಾರ ಕಚೇರಿ, ನಿಮ್ಮ ನೆರವು ಯಾವತ್ತೂ ಮರೆಯಲ್ಲ ಎಂದಿದೆ.
ಈದ್ ಹಬ್ಬದ ಮರುದಿನ ಅಂದರೆ ಭಾನುವಾರದಿಂದ ಕಾಶ್ಮೀರದಲ್ಲಿ ದೇಣಿಗೆ ಸಂಗ್ರಹ ಆರಂಭಗೊಂಡಿದೆ. ಶಿಯಾ ಮುಸ್ಲಿಮರ ಸಂಖ್ಯೆ ಹೆಚ್ಚಿರುವ ಬದ್ಗಾಮ್, ಬಾರಮುಲ್ಲಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ದೇಣಿಗೆ ಸಂಗ್ರಹ ಮಾಡಿದೆ. ಉದ್ಯಮಿ, ವ್ಯಾಪಾರಿಗಳು ಲಕ್ಷ ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಕಳೆದ ನಾಲ್ಕೈದು ದಿನಗಳಲ್ಲಿ ಲಕ್ಷಾಂತರ ರೂಪಾಯಿ ದೇಣಿಗೆ ಸಂಗ್ರಹ ಮಾಡಲಾಗಿದೆ. ಈ ಹಣವನ್ನು ಇರಾನ್ ರಾಯಭಾರ ಕಚೇರಿಗೆ ಹಸ್ತಾಂತರ ಮಾಡಲಾಗುತ್ತಿದೆ.
ಚಿನ್ನ ಸೇರಿದಂತೆ ಆಭರಣ ಬಿಚ್ಚಿಕೊಟ್ಟ ಮಹಿಳೆಯರು
ಯುದ್ಧ ಪೀಡಿತ ಇರಾನ್ ಸ್ಥಿತಿ ನೋಡಿ ಹಲವರು ಕಣ್ಣೀರಿಟ್ಟಿದ್ದಾರೆ. ನಮ್ಮವರು ಜೀವ ಕೈಯಲ್ಲಿ ಹಿಡಿದುಕೊಂಡು ಇರಾನ್ನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹಣದ ಮದ, ಅಧಿಕಾರದ ಮದಗಳಿಂದ ಅಮರಿಕ ಹಾಗೂ ಇಸ್ರೇಲ್ ದರ್ಪ ತೋರಿಸುತ್ತಿದೆ. ಇರಾನ್ನಲ್ಲಿರುವ ನಮ್ಮ ಜನರ ರಕ್ಷಣೆಗೆ ನಾವು ಸದಾ ಸಿದ್ದ ಎಂದು ಹಲವು ಮುಸ್ಲಿಂ ಮಹಿಳೆಯರು ತಮ್ಮ ಚಿನ್ನ ಸೇರಿದಂತೆ ಮೌಲ್ಯಯುತ ಆಭರಣಗಳನ್ನೇ ಬಿಚ್ಚಿ ದೇಣಿಗೆಯಾಗಿ ಕೊಟ್ಟಿದ್ದಾರೆ.
ಹಣ ನೀಡಲು ಸಾಧ್ಯವಾಗದ ಹಲವು ಮುಸ್ಲಿಂ ಕುಟುಂಬಗಳು ತಮ್ಮ ಮನೆಯಲ್ಲಿದ್ದ ತಾಮ್ರದ ಪಾತ್ರೆ ಸೇರಿದಂತೆ ಇತರ ಪಾತ್ರೆಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಪಾತ್ರೆಗಳನ್ನು ಮಾರಾಟ ಮಾಡಿ ಅದರ ಹಣವನ್ನು ಇರಾನ್ ದೇಶಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ. ಕಾಶ್ಮೀರದಲ್ಲಿ ಇದೀಗ ದೇಣಿಗೆ ಸಂಗ್ರಹ ಚುರುಕಾಗಿದೆ. ಶಿಯಾ ಮುಸ್ಲಿಮ್ ಕುಟುಂಬಗಳು ಸ್ವಯಂ ಪ್ರೇರಿತರಾಗಿ ಈ ದೇಣಿಗೆ ಸಂಗ್ರಹದಲ್ಲಿ ಕೈ ಜೋಡಿಸಿದೆ. ಕಾಲ್ನಡಿಗೆ ಮೂಲಕ ತೆರಳಿ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ.


