ಶುಕ್ರವಾರ ಆಗ್ರಾದಲ್ಲಿ ನಡೆದ ಪ್ಯಾರಾಚೂಟ್ ತರಬೇತಿ ವೇಳೆ ಕರ್ನಾಟಕ ಮೂಲದ ವಾಯುಪಡೆಯ ವಾರಂಟ್ ಅಧಿಕಾರಿ ಮಂಜುನಾಥ್ ಪ್ರಾಣ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ. 

ಆಗ್ರಾ (ಫೆ.08): ಶುಕ್ರವಾರ ಆಗ್ರಾದಲ್ಲಿ ನಡೆದ ಪ್ಯಾರಾಚೂಟ್ ತರಬೇತಿ ವೇಳೆ ಕರ್ನಾಟಕ ಮೂಲದ ವಾಯುಪಡೆಯ ವಾರಂಟ್ ಅಧಿಕಾರಿ ಮಂಜುನಾಥ್ ಪ್ರಾಣ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ. ವಾರಂಟ್ ಅಧಿಕಾರಿ ಮಂಜುನಾಥ್, ವಿಂಗ್ ಕಮಾಂಡರ್ ರೋಹಿತ್ ದಹಿಯಾ ಸೇರಿದಂತೆ 12 ತರಬೇತಿದಾರರು ಬೆಳಿಗ್ಗೆ 8:30ಕ್ಕೆ ವಾಯುಪಡೆಯ ವಿಮಾನದಿಂದ ತರಬೇತಿಯ ಭಾಗವಾಗಿ ಕೆಳಗೆ ಹಾರಿದ್ದರು. 

ಈ ಪೈಕಿ 11 ಮಂದಿ ಸುರಕ್ಷಿತವಾಗಿ ಇಳಿದಿದ್ದರು. ಆದರೆ ಮಂಜುನಾಥ್ ಮಾತ್ರ ಕೆಳಗಿಳಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಮೀಪದ ಪ್ರದೇಶಗಳಲ್ಲಿ ತಪಾಸಣೆ ನಡೆಸಿದಾಗ ಗೋಧಿ ಹೊಲದಲ್ಲಿ ಮಂಜುನಾಥ್‌ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ವೇಳೆ ಪ್ಯಾರಾಚೂಟ್‌ ಬಿಚ್ಚಿಕೊಳ್ಳದೇ ಅವರು 1500 ಅಡಿ ಎತ್ತರದಿಂದ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ವಿಮಾನದಿಂದ ಹಾರಿದ 5 ಸೆಕೆಂಡ್‌ನಲ್ಲಿ ಪ್ಯಾರಾಚೂಟ್‌ ತಂತಾನೆ ಬಿಚ್ಚಿಕೊಳ್ಳಬೇಕು. ಅದು ಆಗದೇ ಹೋದಲ್ಲಿ, ತುರ್ತು ಸಂದರ್ಭಕ್ಕೆಂದು ಮೀಸಲಿಟ್ಟ ಇನ್ನೊಂದು ಪ್ಯಾರಾಚೂಟ್‌ ಅನ್ನು ಸ್ವತಃ ತೆರೆಯಬೇಕಾಗುತ್ತದೆ. 

ಆದರೆ ಅದು ಕೂಡಾ ತೆರೆಯದೇ ಇದ್ದ ಪರಿಸ್ಥಿತಿಯಲ್ಲಿ ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ಮಂಜುನಾಥ್ ಕರ್ನಾಟಕದವರಾಗಿದ್ದು, ಆಗ್ರಾ ಏರ್ಫೋರ್ಸ್ ಬೇಸ್‌ನಲ್ಲಿ ಕರ್ತವ್ಯದಲ್ಲಿದ್ದರು. ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗಿದೆ ಎಂದು ಮಲ್ಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಮೋದ್ ಶರ್ಮಾ ತಿಳಿಸಿದ್ದಾರೆ.

ಹಾಸ್ಟೆಲ್‌ ಗೆಳೆಯನಿಗೆ ₹500 ಕೋಟಿ ಆಸ್ತಿ ಬರೆದಿಟ್ಟ ಟಾಟಾ: ಈ ಹೆಸರು ಕಂಡು ಎಲ್ಲರಿಗೂ ಅಚ್ಚರಿ!

ಕ್ರೇನ್ ಬಕೆಟ್ ಕಳಚಿ ಬಿದ್ದು ವ್ಯಕ್ತಿ ಸಾವು: ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಸಂದರ್ಭದಲ್ಲಿ ಕ್ರೇನ್‌ಗೆ ಕಟ್ಟಿದ್ದ ಬಕೆಟ್ ಕಳಚಿ ಬಿದ್ದು ಓರ್ವ ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಹಾನಗಲ್ಲ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಈ ಅವಘಡದಲ್ಲಿ ಗ್ರಾಮದ ಮಂಜುನಾಥ ಪಾಟೀಲ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡ ಮಂಜುನಾಥ ಬಡಿಗೇರ ಹಾಗೂ ಕುಸನೂರಿನ ತಿಪ್ಪೇಸ್ವಾಮಿ ಮಠದ ಜ್ಯೋತಿರ್ಲಿಂಗ ಸ್ವಾಮೀಜಿ ಅವರನ್ನು ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಗುರುವಾರ ಸಂಭ್ರಮದಿಂದ ಕುಂಭ ಮೆರವಣಿಗೆ ನಡೆಸಲಾಗಿತ್ತು. 

ಶುಕ್ರವಾರ ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿತ್ತು. ಕಳಸಾರೋಹಣ ಕಾರ್ಯಕ್ರಮಕ್ಕಾಗಿ ಗ್ರಾಮಸ್ಥರು ಕ್ರೇನ್ ತರಿಸಿದ್ದರು. ದೇವಾಲಯದ ಪೂಜೆ ಬಳಿಕ ಕ್ರೇನ್‌ನ ಬಕೆಟ್‌ನಲ್ಲಿ ೭ರಿಂದ ೮ ಜನ ಎತ್ತುವಂತಹ ಕಳಸ ಹಾಗೂ ಮಂಜುನಾಥ ಪಾಟೀಲ, ಕುಸನೂರಿನ ತಿಪ್ಪೇಸ್ವಾಮಿಮಠದ ಜ್ಯೋತಿರ್ಲಿಂಗ ಸ್ವಾಮೀಜಿ, ಮಂಜುನಾಥ ಬಡಿಗೇರ ಇದ್ದರು. ಕ್ರೇನ್ ಕಬ್ಬಿಣದ ಬಕೆಟ್‌ನ್ನು ದೇವಸ್ಥಾನದ ಗೋಪುರದ ಸಮೀಪ ತೆಗೆದುಕೊಂಡು ಹೋಗುವಾಗ ಏಕಾಏಕಿ ಬಕೆಟ್ ಕಳಚಿ ಕೆಳಕ್ಕೆ ಬಿದ್ದಿದೆ. ಇದರ ಪರಿಣಾಮ ಕಬ್ಬಿಣದ ಬಕೆಟ್‌ನಲ್ಲಿದ್ದ ಮೂವರ ಪೈಕಿ ಮಂಜುನಾಥ ಪಾಟೀಲ ಎದೆಗೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದೆ.