Rahul Gandhi Disqualified: ಜರ್ಮನಿಗೆ ಥ್ಯಾಂಕ್ಸ್ ಹೇಳಿದ ದಿಗ್ವಿಜಯ್, ಕಪಿಲ್ ಸಿಬಲ್ ಕೆಂಡ!
ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಿದ ವಿಚಾರವಾಗಿ ಜರ್ಮನಿ ಪ್ರತಿಕ್ರಿಯೆ ನೀಡಿದೆ. ಇದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಜರ್ಮನಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಆದರೆ, ಹಿರಿಯ ಸುಪ್ರೀಂ ಕೋರ್ಟ್ ವಕೀಲ ಹಾಗೂ ಕಾಂಗ್ರೆಸ್ ಮಾಜಿ ನಾಯಕ ಕಪಿಲ್ ಸಿಬಲ್, ದಿಗ್ವಿಜಯ್ ವಿರುದ್ಧ ಕಿಡಿಕಾರಿದ್ದಾರೆ.
ನವದೆಹಲಿ (ಮಾ.31): ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಂದಿರುವ ವಿಚಾರ ನಮ್ಮ ಗಮನದಲ್ಲಿದೆ ಎಂದು ಜರ್ಮನಿಯ ವಿದೇಶಾಂಗ ಇಲಾಖೆಯ ಅಧಿಕಾರಿ ಹೇಳಿದ ಮಾತಿಗೆ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಥ್ಯಾಂಕ್ಸ್ ಎಂದು ಟ್ವೀಟ್ ಮಾಡಿದ್ದರು. ದಿಗ್ವಿಜಯ್ ಸಿಂಗ್ ಅವರ ಟ್ವೀಟ್ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ಟೀಕಿಸಿದ್ದರೆ, ಕಾಂಗ್ರೆಸ್ ಪಕ್ಷ ಮಾತ್ರ ಈ ವಿವಾದದಿಂದ ದೂರ ಉಳಿದುಕೊಂಡಿದೆ. ಭಾರತದ ಪ್ರಜಾಪ್ರಭುತ್ವಕ್ಕೆ ಇರುವ ಆತಂಕವನ್ನು ನಾವು ಅಂತರಿಕವಾಗಿಯೇ ಬಗೆಹರಿಸಿಕೊಳ್ಳಬಲ್ಲೆವು ಎಂದು ಕಾಂಗ್ರೆಸ್ ಪಕ್ಷ ಹೇಳುತ್ತಾ ಬಂದಿದೆ. ಹಲವು ವಿವಾದಗಳ ಕೇಂದ್ರಬಿಂದುವಾಗಿರುವ ಸಿಂಗ್ನಿಂದ ವಿಚಾರದಲ್ಲಿ ಮತ್ತೆ ಕಾಂಗ್ರೆಸ್ ಸಿಟ್ಟಾಗಿದ್ದು, ಕೂಡಲೇ ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನ ಮಾಡಿದೆ. ಹಿರಿಯ ಸುಪ್ರೀಂ ಕೋರ್ಟ್ ವಕೀಲ ಹಾಗೂ ಕಾಂಗ್ರೆಸ್ನ ಮಾಜಿ ನಾಯಕ ಕಪಿಲ್ ಸಿಬಲ್, ದಿಗ್ವಿಜಯ್ ಸಿಂಗ್ ಅವರ ಟ್ವೀಟ್ಗೆ ತಕ್ಷಣವೇ ಕಿಡಿಕಾರಿದ್ದು, 'ವಿದೇಶಿ ಶಕ್ತಿಗಳ ಯಾವುದರ ಅಗತ್ಯವೂ ಭಾರತಕ್ಕೆ ಬೇಕಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಕಪಿಲ್ ಸಿಬಲ್ ಬರೆದುಕೊಂಡಿದ್ದು, "ದಿಗ್ವಿಜಯ ಸಿಂಗ್: "ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಗಮನಿಸಿದ ಬರ್ಲಿನ್ಗೆ ಧನ್ಯವಾದ" ಎಂದು ಬರೆದಿದ್ದಾರೆ. ಆದರೆ, ನನ್ನ ಅಭಿಪ್ರಾಯ ಏನೆಂದರೆ, ಮುಂದೆ ನಡೆಯಲು ನಮಗೆ ಯಾರೊಬ್ಬರ ಸಹಾಯವೂ ಬೇಡ. ವಿದೇಶದ ಶಕ್ತಿಗಳ ಸಹಾಯದ ಅಗತ್ಯವಿಲ್ಲ ಎಂದು ಬರೆದಿದ್ದಾರೆ.
ವಿವಾದಕ್ಕೆ ಕಾರಣವಾದ ದಿಗ್ವಿಜಯ್ ಸಿಂಗ್ ಟ್ವೀಟ್: ಪಕ್ಷದ ಸಹೋದ್ಯೋಗಿ ರಾಹುಲ್ ಗಾಂಧಿ ಅವರ ಅನರ್ಹತೆಯ ಬಗ್ಗೆ ಗಮನವಹಿಸಿದ ಕಾರಣಕ್ಕೆ ದಿಗ್ವಿಜಯ ಸಿಂಗ್ ಜರ್ಮನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಧನ್ಯವಾದ ಹೇಳಿದ್ದಾರೆ. "ರಾಹುಲ್ ಗಾಂಧಿಯವರಿಗೆ ಕಿರುಕುಳ ನೀಡುವ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವವು ಹೇಗೆ ರಾಜಿಯಾಗುತ್ತಿದೆ ಎಂಬುದನ್ನು ಗಮನಿಸಿ" ಜರ್ಮನಿಯ ವಿದೇಶಾಂಗ ಸಚಿವಾಲಯ ಮತ್ತು ಡಾಯ್ಚ್ ವೆಲ್ಲೆಯ ಮುಖ್ಯ ಅಂತರರಾಷ್ಟ್ರೀಯ ಸಂಪಾದಕ ರಿಚರ್ಡ್ ವಾಕರ್ ಅವರಿಗೆ ಸಿಂಗ್ ಧನ್ಯವಾದ ಹೇಳಿದರು. ಗಾಂಧಿಯವರ ಅನರ್ಹತೆಗೆ ಜರ್ಮನ್ ವಿದೇಶಾಂಗ ಸಚಿವಾಲಯದ ವಕ್ತಾರರು ಪ್ರತಿಕ್ರಿಯಿಸುವ ವೀಡಿಯೊವನ್ನು ಹಿರಿಯ ಪತ್ರಕರ್ತರು ಪೋಸ್ಟ್ ಮಾಡಿದ್ದರು ಇದನ್ನು ದಿಗ್ವಿಜಯ್ ಸಿಂಗ್ ಪೋಸ್ಟ್ ಮಾಡಿದ್ದಾರೆ.
ಬಿಜೆಪಿಯಿಂದ ಟೀಕೆ: ಇದೇ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿ ಟೀಕಾಪ್ರಹಾರ ಮಾಡಿದೆ. ದೇಶದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿಗರನ್ನು ಕಾಂಗ್ರೆಸ್ ಪಕ್ಷ ಆಹ್ವಾನಿಸುತ್ತಿದೆ ಎಂದು ಆರೋಪ ಮಾಡಿದೆ. ಸಿಂಗ್ ಅವರ ಟ್ವೀಟ್ನ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, "ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ವಿದೇಶಿ ಶಕ್ತಿಗಳನ್ನು ಆಹ್ವಾನಿಸಿದ್ದಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳು" ಎಂದು ಬರೆದಿದ್ದಾರೆ. "ನೆನಪಿಡಿ, ಭಾರತೀಯ ನ್ಯಾಯಾಂಗವು ವಿದೇಶಿ ಹಸ್ತಕ್ಷೇಪದಿಂದ ಪ್ರಭಾವಿತವಾಗುವುದಿಲ್ಲ. ಭಾರತವು ಇನ್ನು ಮುಂದೆ 'ವಿದೇಶಿ ಪ್ರಭಾವ'ವನ್ನು ಸಹಿಸುವುದಿಲ್ಲ ಏಕೆಂದರೆ ನಮ್ಮ ಪ್ರಧಾನಿ ಈಗ ನರೇಂದ್ರ ಮೋದಿ' ಎಂದು ಬರೆದಿದ್ದಾರೆ.
ದಿಗ್ವಿಜಯ್ ಸಿಂಗ್ ಹೇಳಿಕೆ ಒಪ್ಪಲ್ಲ ಎಂದ ರಾಹುಲ್ ಗಾಂಧಿ, ಸೇನೆಯ ಕಾರ್ಯಾಚರಣೆಗಳಿಗೆ ಸಾಕ್ಷಿ ಬೇಕಿಲ್ಲ ಎಂದ ರಾಗಾ!
ಸಿಂಗ್ ಟ್ವೀಟ್ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, "ಇದು ರಾಷ್ಟ್ರಕ್ಕೆ ಅವಮಾನ, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರು ದೇಶದೊಳಗೆ ಭಾರತದ ಪ್ರಜಾಪ್ರಭುತ್ವ, ರಾಜಕೀಯ ಮತ್ತು ಕಾನೂನು ಹೋರಾಟದಲ್ಲಿ ಹೋರಾಡಲು ನಂಬುವುದಿಲ್ಲ, ಆದ್ದರಿಂದ, ನಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ವಿದೇಶಿ ಶಕ್ತಿಗಳನ್ನು ಆಹ್ವಾನಿಸಿದ್ದಾರೆ. ಆದರೆ ನರೇಂದ್ರ ಮೋದಿ ನೇತೃತ್ವದ ನವ ಭಾರತವು ಯಾವುದೇ ವಿದೇಶಿ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಬರೆದಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸರ್ಕಾರ ಇನ್ನೂ ದಾಖಲೆ ಕೊಟ್ಟಿಲ್ಲ: ಪ್ರೂಫ್ ಕೇಳಿದ ಕಾಂಗ್ರೆಸ್ ನಾಯಕ