ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ವಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡೋದಿಲ್ಲ ಎಂದು ರಾಹುಲ್ ಗಾಂಧಿಯ ಆರೋಪಕ್ಕೆ, ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವಾಲಯದ ಸಲಹೆಗಾರರಾಗಿರುವ ಕಾಂಚನ್ ಗುಪ್ತಾ ದಾಖಲೆ ಸಹಿತ ತಿರುಗೇಟು ನೀಡಿದ್ದಾರೆ. ಇಂಥ ಆರೋಪ ಮಾಡಿರುವ ರಾಹುಲ್ ಗಾಂಧಿ, ಸಂಸತ್ ಕಲಾಪಕ್ಕೆ ಎಷ್ಟು ಬಾರಿ ಹಾಜಾರಾಗಿದ್ದಾರೆ ಅನ್ನೋದನ್ನ ದಾಖಲೆ ಸಮೇತ ಟ್ವೀಟ್ ಮಾಡಿದ್ದಾರೆ.
ನವದೆಹಲಿ (ಮಾ.7): ಭಾರತದಲ್ಲಿ ಪ್ರಜಾಪ್ರಭುತ್ವ ಸರಿ ಇಲ್ಲ. ಅದು ಆತಂಕದಲ್ಲಿದೆ. ಚೀನಾ ಭಾತೃತ್ವವನ್ನು ಬಯಸುವ ದೇಶ ಅಂತೆಲ್ಲಾ ಕೆಂಬ್ರಿಜ್ ವಿವಿಯಲ್ಲಿ ಪುಂಖಾನುಪುಂಖವಾಗಿ ಮಾತನಾಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಇದರ ನಡುವೆ ವಿಪಕ್ಷಗಳಿಗೆ ಸಂಸತ್ನಲ್ಲಿ ಮಾತನಾಡಲು ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಹೇಳಿದ್ದರು. ರಾಹುಲ್ ಗಾಂಧಿಯವರ ಈ ಆರೋಪಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಸಾಕ್ಷಿ ಸಮೇತ ಟ್ವಿಟರ್ನಲ್ಲಿ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿ ಈವರೆಗೂ ಎಷ್ಟು ಸಂಸತ್ ಕಲಾಪದಲ್ಲಿ ಭಾಗಿಯಾಗಿದ್ದಾರೆ, ಪ್ರತಿ ಅಧಿವೇಶನದ ಸಮಯದಲ್ಲಿ ಎಷ್ಟು ಹೊತ್ತು ಅವರು ಸಂಸತ್ನಲ್ಲಿದ್ದರು ಎನ್ನುವ ಮಾಹಿತಿಗಳನ್ನೆಲ್ಲಾ ತೆಗೆದು ಟ್ವಿಟರ್ನಲ್ಲಿ ಸರಣಿ ಪೋಸ್ಟ್ ಮಾಡಿದ್ದಾರೆ. ಒಟ್ಟಾರೆ, ಸಂಸತ್ನಲ್ಲಿ ರಾಹುಲ್ ಗಾಂಧಿಯ ಪ್ರದರ್ಶನ ಬಹಳ ಕಳಪೆಯಾಗಿದೆ. ಅವರು ಶೇ. 52ರಷ್ಟು ಕಲಾಪಗಳಲ್ಲಿ ಮಾತ್ರವೇ ಭಾಗಿಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಶಾಲಾ ಹುಡುಗ: ರಾಹುಲ್ ಗಾಂಧಿ ಶಾಲಾ ವಿದ್ಯಾರ್ಥಿಯ ರೀತಿ. ಪ್ರತಿ ಬಾರಿ ಟೀಚರ್ ಏನಾದರೂ ಕೇಳಿದಾಗ ಸುಳ್ಳು ಹೇಳಿ ತಪ್ಪಿಸಿಕೊಳ್ಳುವಂಥ ವ್ಯಕ್ತಿ ಎಂದು ಟೀಕೆ ಮಾಟಿದ್ದಾರೆ. ಹೋಮ್ವರ್ಕ್ ಎಲ್ಲಿ ಎಂದು ಕೇಳಿದರೆ, ತಕ್ಷಣವೇ ಸುಳ್ಳು ಹೇಳಿ ತಪ್ಪಿಸಿಕೊಳ್ಳುವಂಥ ವ್ಯಕ್ತಿ. ನಾಯಿ ನನ್ನ ಹೋಮ್ವರ್ಕ್ ತಿಂದುಕೊಂಡುಹೋಗಿದೆ ಎನ್ನುವಂಥ ವ್ಯಕ್ತಿ ಎಂದು ಟೀಕೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಅವರಿಗೆ ಹಾಗೂ ವಿಪಕ್ಷದ ಸಂಸದರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದಿರುವ ಅವರ ಆರೋಪ ಸಂಪೂರ್ಣವಾಗಿ ಆಧಾರ ರಹಿತ ಎಂದು ಹೇಳಿದ್ದಾರೆ.
ಸಂಸದರಾಗಿ ಅವರ ನಿರ್ವಹಣೆಯೇ ಅತ್ಯಂತ ಕಳಪೆಯಾಗಿದೆ ಎಂದಿದ್ದಾರೆ.ಸಂಸತ್ತಿನ ಕಲಾಪದಲ್ಲಿ ಅವರು ಅಪರೂಪದಲ್ಲಿ ಅಪರೂಪಕ್ಕೆ ಹಾಜರಾಗುತ್ತಾರೆ. ಕೇರಳದ ಸಂಸದರ ಸರಾಸರಿಗೆ ಹೋಲಿಸಿದರೆ ಸಂಸತ್ತಿನಲ್ಲಿ ಅವರ ಹಾಜರಾತಿ ತೀರಾ ಕಡಿಮೆ. ಅವರ ಹಾಜರಾತಿಯು ರಾಷ್ಟ್ರೀಯ ಸರಾಸರಿಗಿಂತ ಬಹಳ ಕಡಿಮೆ ಎಂದಿದ್ದಾರೆ.
ಭಾರತದ ವಿದೇಶಾಂಗ ಸಚಿವರಿಗೆ ಚೀನಾದ ಬೆದರಿಕೆ ಇನ್ನೂ ಅರ್ಥವಾಗಿಲ್ಲ, ರಾಹುಲ್ ಗಾಂಧಿ!
ಭಾರತದ ಮಾನಹಾನಿ ಮಾಡುವುದನ್ನು ನಿಲ್ಲಿಸಿ : ಕಾಂಚನ್ ಗುಪ್ತಾ ಟ್ವಿಟರ್ನಲ್ಲಿ ರಾಹುಲ್ ಗಾಂಧಿ ಅವರ ಸಂಸತ್ ನಿರ್ವಹಣೆಯ ಚಾರ್ಟ್ ಅನ್ನು ಹಂಚಿಕೊಂಡಿದ್ದಾರೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರ ಹಾಜರಾತಿ ಶೇಕಡಾ 52 ಎಂದು ಹೇಳಲಾಗಿದೆ. ಆದರೆ, ರಾಷ್ಟ್ರೀಯ ಸರಾಸರಿ 79 ಪ್ರತಿಶತ ಮತ್ತು ಕೇರಳದ ಸರಾಸರಿ 84 ಪ್ರತಿಶತ. ಈ ಥ್ರೆಡ್ನಲ್ಲಿರುವ ಡೇಟಾ ಸಾರ್ವಜನಿಕವಾಗಿ ಲಭ್ಯವಿದೆ. ಈ ಅಂಕಿಅಂಶಗಳು ರಾಹುಲ್ ಗಾಂಧಿಯವರ ಸುಳ್ಳುಗಳನ್ನು ತೋರಿಸುತ್ತದೆ ಎಂದು ಕಾಂಚನ್ ಗುಪ್ತಾ ಹೇಳಿದ್ದಾರೆ. ರಾಹುಲ್ ಗಾಂಧಿ ವಿದೇಶಿ ನೆಲದಿಂದ ಭಾರತದ ಮಾನಹಾನಿ ಮಾಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.
