ಮುಂಬೈನ ಚೆಂಬೂರ್ ದೇವಾಲಯದಲ್ಲಿ ಕಾಳಿ ಮಾತೆಯ ವಿಗ್ರಹವನ್ನು ಕ್ರಿಶ್ಚಿಯನ್ ಮಾತೆ ಮೇರಿಯಂತೆ ಅಲಂಕರಿಸಿದ ಘಟನೆ ನಡೆದಿದೆ. ಕನಸಿನಲ್ಲಿ ದೇವಿಯೇ ಹೀಗೆ ಮಾಡಲು ಹೇಳಿದ್ದಾಳೆಂದು ಅರ್ಚಕ ಹೇಳಿಕೊಂಡಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮುಂಬೈನ ಚೆಂಬೂರ್ ಪ್ರದೇಶದ ದೇವಾಲಯವೊಂದರಲ್ಲಿ ಕಾಳಿ ಮಾತೆಯ ವಿಗ್ರಹವನ್ನು ಕ್ರಿಶ್ಚಿಯನ್ ಮಾತೆ ಮೇರಿಯಂತೆ ಅಲಂಕರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಿಗ್ರಹವನ್ನು ಶಿಲುಬೆಯಿಂದ ಅಲಂಕರಿಸಲಾಗಿತ್ತು ಮತ್ತು ದೇವಾಲಯದ ಸುತ್ತಲೂ ಕೆಂಪು ಬಟ್ಟೆಯನ್ನು ಇರಿಸಲಾಗಿತ್ತು. ಈ ಘಟನೆಯ ವಿಡಯೋ ವೈರಲ್ ಆಗುತ್ತಲೇ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ದೂರಿನ ಮೇರೆಗೆ ಪೊಲೀಸರು ದೇವಾಲಯದ ಅರ್ಚಕರನ್ನು ಬಂಧಿಸಿದ್ದಾರೆ.
ಮೇರಿಯಾದ ಕಾಳಿ
ಈಗ ವೈರಲ್ ಆಗಿರೋ ವಿಡಿಯೋದಲ್ಲಿ ಯುವಕನೊಬ್ಬ ದೇವಾಲಯಕ್ಕೆ ಪ್ರವೇಶಿಸಿ ಚಿತ್ರೀಕರಣ ಮಾಡುತ್ತಿರುವುದನ್ನು ತೋರಿಸಲಾಗಿದೆ. ಅವನು ಕಾಳಿ ಮಾತಾ ದೇವಾಲಯವನ್ನು ಸಮೀಪಿಸುತ್ತಾನೆ. ದೇವಾಲಯದ ಬಾಗಿಲುಗಳು ಮುಚ್ಚಲ್ಪಟ್ಟಿರುವುದನ್ನು ನೋಡಬಹುದು. ಪರದೆಯ ಮೂಲಕ, ಕಾಳಿ ಮಾತೆಯನ್ನು ಮೇರಿಯಂತೆಯೇ ಧರಿಸಿ ಮೇರಿಯ ಪ್ರತಿಮೆಯಂತೆಯೇ ಅಲಂಕರಿಸಲಾಗಿದೆ ಎಂದು ತೋರಿಸುತ್ತಾನೆ. ಕಾಳಿ ಮಾತೆಯ ತಲೆಯ ಮೇಲೆ ಕಿರೀಟವನ್ನು ಇರಿಸಲಾಗಿದೆ. ದೇವಾಲಯದ ಒಳಗೆ ಕೆಂಪು ಬಟ್ಟೆ ಗೋಚರಿಸುತ್ತದೆ. ಚರ್ಚ್ ತರಹದ ಬೆಳಕನ್ನು ಸಹ ಬಳಸಲಾಗುತ್ತದೆ. ವಿಗ್ರಹದ ಮೇಲೆ ದೀಪಗಳ ಬದಲಿಗೆ ಮೇಣದಬತ್ತಿಗಳನ್ನು ಉರಿಯುತ್ತಿರುವುದನ್ನು ಕಾಣಬಹುದು. ಕಾಳಿ ಮಾತೆಯನ್ನು ತನ್ನ ಮಡಿಲಲ್ಲಿ ಮಗುವನ್ನು ಹಿಡಿದಿಟ್ಟುಕೊಂಡಿರುವಂತೆ ತೋರಿಸಲಾಗಿದೆ.
ಅರ್ಚಕನಿಗೆ ಆಗಿದ್ದೇನು?
ದೂರು ಮತ್ತು ವೀಡಿಯೊ ವೈರಲ್ ಆದ ನಂತರ, ಪೊಲೀಸರು ದೇವಾಲಯದ ಅರ್ಚಕ ರಮೇಶ್ ಅವರನ್ನು ಬಂಧಿಸಿದ್ದಾರೆ. ಆಗ ಅವರು ತಪ್ಪೊಪ್ಪಿಕೊಂಡಿದ್ದಾರೆ! "ಕಾಳಿ ಮಾತೆ ನನಗೆ ಕನಸಿನಲ್ಲಿ ಕಾಣಿಸಿಕೊಂಡು ಮೇರಿಯಂತೆಯೇ ಅಲಂಕರಿಸಲು ಕೇಳಿಕೊಂಡಳು" ಎಂದು ಅರ್ಚಕ ಹೇಳಿದ್ದಾರೆ. ಇದೇ ಕಾರಣಕ್ಕೆ ಹಾಗೆ ಮಾಡಲಾಯಿತು. ನನ್ನದೇನೂ ತಪ್ಪಿಲ್ಲ. ಕನಸಿನಲ್ಲಿ ಬಂದ ಹಾಗೆ ಹಾಗೆ ಮಾಡಬೇಕಾಯಿತು ಎಂದಿದ್ದಾರೆ.
ಸದ್ಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಡಿಯಲ್ಲಿ ಅರ್ಚಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಅವರು ಎರಡು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.


