ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ನಿವೃತ್ತಿ ಹೊಂದಿದ್ದು, ಬಿ.ಆರ್ ಗವಾಯಿ 52ನೇ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನ್ಯಾ. ಖನ್ನಾ ಅವರ ಅವಧಿಯಲ್ಲಿ 370ನೇ ವಿಧಿ ರದ್ದು, ಚುನಾವಣಾ ಬಾಂಡ್, ಇವಿಎಂ ವಿವಿಪ್ಯಾಟ್ ಬಗ್ಗೆ ತೀರ್ಪುಗಳು ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ವಿಚಾರಣೆ ನಡೆದಿವೆ.

ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ಮಂಗಳವಾರ ನಿವೃತ್ತಿ ಹೊಂದಿದ್ದಾರೆ. ಇದೇ ವೇಳೆ ಸುಪ್ರೀಂಕೋರ್ಟ್‌ನ 52ನೇ ಮುಖ್ಯ ನ್ಯಾಯಾಧೀಶರಾಗಿ ಬಿ.ಆರ್ ಗವಾಯಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಕಳೆದ ನವೆಂಬರ್‌ನಲ್ಲಿ ನ್ಯಾ. ಸಂಜೀವ್‌ ಖನ್ನಾ ಅವರು ಸುಪ್ರೀಂಕೋರ್ಟ್ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ್ದರು. ನ್ಯಾಯಾಧೀಶರಾಗಿ 20 ವರ್ಷ ಸೇವೆ ಸಲ್ಲಿಸಿದ್ದ ನ್ಯಾ. ಖನ್ನಾ 6 ವರ್ಷ ಸುಪ್ರೀಂ ಜಡ್ಜ್ ಆಗಿದ್ದರು. ಈ ಅವಧಿಯಲ್ಲಿ 370ನೇ ವಿಧಿ ರದ್ದು, ಚುನಾವಣಾ ಬಾಂಡ್, ಇವಿಎಂ ವಿವಿಪ್ಯಾಟ್ ಬಗ್ಗೆ ತೀರ್ಪು, ವ್ಯಭಿಚಾರವನ್ನು ಅಪರಾಧ ಮುಕ್ತಗೊಳಿಸುವ ಪ್ರಕರಣದ ವಿಚಾರಣೆ ನಡೆಸಿದ್ದರು. 

ಇದರ ಜೊತೆಗೆ ನ್ಯಾ| ಯಶವಂತ್ ವರ್ಮಾ ನಿವಾಸದಲ್ಲಿ ಹಣ ಪತ್ತೆ ಪ್ರಕರಣ ತನಿಖೆ, ಸುಪ್ರೀಂ ನ್ಯಾಯಾಧೀಶರ ಆಸ್ತಿ ಬಹಿರಂಗ ಘೋಷಣೆಯಂತಹ ನಿರ್ಧಾರ ಕೈಗೊಂಡಿದ್ದರು. ತಮ್ಮ ಅಧಿಕಾರದ ಕಡೆಯ ದಿನ ಮಾತನಾಡಿದ ನ್ಯಾ.ಖನ್ನಾ 'ನ್ಯಾಯಾಂಗದ ಬಗ್ಗೆ ಜನರ ನಂಬಿಕೆ ನಾವು ಆಜ್ಞಾಪಿಸಲು ಸಾಧ್ಯವಿಲ್ಲ, ಅದನ್ನು ಗಳಿಸಬೇಕು. ಸುಪ್ರೀಂ ಕೋರ್ಟ್ ಆ ಕೆಲಸ ಮಾಡಿದೆ ಎಂದರು.

ಹಾಗೆಯೇ ಸುಪ್ರೀಂಕೋರ್ಟ್‌ನ ಹೊಸ ಮುಖ್ಯ ನ್ಯಾಯಾಧೀಶರಾಗಿರುವ ಜಸ್ಟೀಸ್ ಭೂಷಣ್ ರಾಮಕೃಷ್ಣ ಗವಾಯಿ ಅವರು, ಭಾರತದ ಮೊದಲ ಬೌದ್ಧ 2ನೇಯ ದಲಿತ ಸಿಜೆಐ ಎನಿಸಿದ್ದಾರೆ.

Scroll to load tweet…

ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಗವಾಯಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಅವರು ನವೆಂಬರ್ 23, 2025 ರವರೆಗೆ 6 ತಿಂಗಳಿಗಿಂತ ಹೆಚ್ಚು ಕಾಲ ಭಾರತದ ಸುಪ್ರೀಂಕೋರ್ಟ್‌ ನ್ಯಾಯಾಧೀಶರಾಗಿ ಅಧಿಕಾರದಲ್ಲಿರುತ್ತಾರೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ, ಎಸ್ ಜಯಶಂಕರ್, ಪಿಯೂಷ್ ಗೋಯೆಲ್, ಅರ್ಜುನ್ ರಾಮ್ ಮೇಘವಾಲ್ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಉಪಾಧ್ಯಕ್ಷ ವಿಪಿ ಧಂಖರ್, ಮಾಜಿ ಸಿಜೆಐ ಸಂಜೀವ್ ಖನ್ನಾ, ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮುಂತಾದವರು ಭಾಗಿಯಾಗಿದ್ದರು.

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಸೂರ್ಯಕಾಂತ್, ಎ.ಜಿ. ಮಸಿಹ್, ಪಿ.ಎಸ್. ನರಸಿಂಹ, ಬಿ.ವಿ. ನಾಗರತ್ನ, ಬೇಲಾ ತ್ರಿವೇದಿ ಮುಂತಾದವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 52 ನೇ ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ನ್ಯಾಯಮೂರ್ತಿ ಗವಾಯಿ ಅವರು 2010 ರಲ್ಲಿ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರು ಸಿಜೆಐ ಆಗಿ ನಿವೃತ್ತರಾದ ನಂತರ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಎರಡನೇ ಸಿಜೆಐ ಆಗಿದ್ದಾರೆ. ಅವರು ದೇಶದ ಸಿಜೆಐ ಆದ ಮೊದಲ ಬೌದ್ಧ ನ್ಯಾಯಾಧೀಶರೂ ಆಗಿದ್ದಾರೆ. ಅವರಿಗೆ 2019ರ ಮೇ 24ರಂದು ಬಾಂಬೆ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ಬಡ್ತಿ ನೀಡಲಾಯಿತು.

ನ್ಯಾಯಮೂರ್ತಿ ಗವಾಯಿ ಖನ್ನಾ ಅವರು 1960 ನವೆಂಬರ್ 24 ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದರು, 1985ರ ಮಾರ್ಚ್ 16, ರಂದು ಅವರು ಬಾರ್‌ ಕೌನ್ಸಿಲ್‌ಗೆ ಸೇರಿದರು. ನ್ಯಾಯಮೂರ್ತಿ ಗವಾಯಿ ಅವರ ತಂದೆ, 'ದಾದಾಸಾಹೇಬ್' ಎಂದೂ ಕರೆಯಲ್ಪಡುವ ರಾಮಕೃಷ್ಣ ಸೂರ್ಯಭಾನ್ ಗವಾಯಿ ಅವರು ಬಿಹಾರದ ಮಾಜಿ ರಾಜ್ಯಪಾಲರು ಮತ್ತು ಪ್ರಮುಖ ದಲಿತ ನಾಯಕರಾಗಿದ್ದರು.