Asianet Suvarna News Asianet Suvarna News

ಆಸ್ಪತ್ರೆ ಬೆಡ್ ಮೇಲೂ ಕಾವೇರಿ ವಿವಾದದ ಬಗ್ಗೆ ಚರ್ಚಿಸಿದ್ದ ಜಯಲಲಿತಾ

2016ರಲ್ಲಿ ನಿಧನರಾದ ತಮಿಳುನಾಡಿನ ಸಿಎಂ ಆಗಿದ್ದ ಜಯಲಲಿತಾ ಅವರು ಆಸ್ಪತ್ರೆ ಬೆಡ್ಡಲ್ಲೂ ಕಾವೇರಿ ವಿವಾದದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅಕ್ರಮ ಆಸ್ತಿಗಳಿಕೆ ಕೇಸು ದಾಖಲು ಬಳಿಕ ಜಯಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂಬ ಮಾಹಿತಿ ಅರ್ಮುಗಸ್ವಾಮಿ ವರದಿಯಲ್ಲಿ ಬಹಿರಂಗವಾಗಿದೆ.
 

Jayalalithaa death case: More explosive information revealed by Armugaswamy report akb
Author
First Published Oct 21, 2022, 8:23 AM IST

ಚೆನ್ನೈ: ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕದೊಂದಿಗೆ ತಗಾದೆ ತೆಗೆದಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ತಮ್ಮ ಕೊನೆ ದಿನಗಳಲ್ಲೂ ಆಸ್ಪತ್ರೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆಸಿದ್ದರು ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. 2016ರಲ್ಲಿ ನಿಧನರಾದ ಜಯಲಲಿಯಾ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ನ್ಯಾ ಅರ್ಮುಗಸ್ವಾಮಿ ಆಯೋಗ ಸಲ್ಲಿಸಿದ ವರದಿಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದೆ. ಜಯಲಲಿತಾ ಚೆನ್ನೈನ ಅಪೋಲೊ ಆಸ್ಲತ್ರೆಯಲ್ಲಿ 75 ದಿನಗಳ ಕಾಲ ಚಿಕಿತ್ಸೆ ಪಡೆದು ಅಂತಿಮವಾಗಿ ಡಿ.5, 2016ರಂದು ನಿಧನರಾಗಿದ್ದರು.

ಕಾವೇರಿ ವಿವಾದದ ಬಗ್ಗೆ ಚರ್ಚೆ:

ಜಯಲಲಿತಾ ಆಸ್ಪತ್ರೆಗೆ ದಾಖಲಾದ ಆರಂಭಿಕ ದಿನಗಳಲ್ಲಿ ಕಾವೇರಿ ನದಿ ನೀರಿನ (Cauvery river water) ಹಂಚಿಕೆ ವಿವಾದದ ಬಗ್ಗೆ ಸರ್ಕಾರಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದರು. ಆಸ್ಪತ್ರೆಯಲ್ಲಿಯೇ ಈ ವಿಚಾರಗಳ ಬಗ್ಗೆ ಸಭೆ ನಡೆಸಿದ್ದರು ಎಂದು ಅವರ ಆಪ್ತೆ ಶಶಿಕಲಾ (Sasikala) ಅವರ ಲಿಖಿತ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

BIG BREAKING: ಬಯಲಾಯ್ತು Jayalalithaa ಸಾವಿನ ರಹಸ್ಯ, ಸಾವಿಗೆ ಆಪ್ತ ಸ್ನೇಹಿತೆ ಶಶಿಕಲಾರೇ ಕಾರಣ

ಮಾನಸಿಕ ಒತ್ತಡ:

2016ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ (AIADMK) ಪಕ್ಷ ಗೆದ್ದರೂ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಯಾಗಿರುವುದರಿಂದ ಜಯಲಲಿತಾ (Jayalalithaa) ಮಾನಸಿಕ ಒತ್ತಡಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರ ಆರೋಗ್ಯ ಇನ್ನಷ್ಟು ಹದಗೆಡಲು ಆರಂಭವಾಯಿತು ಎಂದು ಅವರ ಆಪ್ತೆ ಶಶಿಕಲಾ ಹೇಳಿದ್ದಾರೆ.

ಮಾವೊ ಪುಸ್ತಕ ಓದಲು ಸಲಹೆ:

ಜಯಾ ಆಸ್ಪತ್ರೆಯಲ್ಲಿದ್ದಾಗ ತಮ್ಮ ನೆಚ್ಚಿನ ಭಕ್ತಿ ಗೀತೆಗಳನ್ನು ಕೇಳುತ್ತಿದ್ದರು. ದೇವರ ಚಿತ್ರಗಳು ಹಾಗೂ ಹಸಿರು ಗಿಡಗಳನ್ನು ತಮ್ಮ ಸಮೀಪದಲ್ಲಿರಿಸಿಕೊಳ್ಳುತ್ತಿದ್ದರು. ಅಲ್ಲದೇ ತಮಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ‘ಪ್ರೈವೇಟ್‌ ಲೈಫ್‌ ಆಫ್‌ ಚೇರ್ಮನ್‌ ಮಾವೊ’(Private Life of Chairman Mao) ಪುಸ್ತಕವನ್ನು ಓದುವಂತೆ ಸಲಹೆ ನೀಡಿದ್ದರು ಎಂದು ಶಶಿಕಲಾ ತಿಳಿಸಿದ್ದಾರೆ.

ಜಯಲಲಿತಾ ಸಾವಿನ ಕೇಸಲ್ಲಿ ಶಶಿಕಲಾ ವಿರುದ್ಧ ಕ್ರಮಕ್ಕೆ ಶಿಫಾರಸು

ಜಯಾ ಕೊನೆ ಕ್ಷಣ:

‘ಜಯಾ ಅವರ ನಾಲಿಗೆ (tongue) ಹೊರಚಾಚಿತ್ತು. ಅವರು ಹಲ್ಲನ್ನು ಕಡಿಯುತ್ತಾ ಏನನ್ನೋ ಹೇಳಲು ಪ್ರಯತ್ನಿಸಿದರು. ನಾನು ಹೆದರಿ ಅಕ್ಕಾ ಎಂದು ಕೂಗಿದೆ. ಅವರು ನನ್ನತ್ತ ನೋಡಿ ತಮ್ಮ ಕೈಚಾಚಿದರು. ಬಳಿಕ ಕಣ್ಣು ಮುಚ್ಚಿದರು. ಇದೇ ವೇಳೆ ಜಯಲಲಿತಾ ಅವರಿಗೆ ಹೃದಯಾಘಾತವಾಗಿದೆ (heart attack) ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದರು. ಈ ಆಘಾತಕಾರಿ ಸುದ್ದಿ ಕೇಳಿ ನಾನು ಮೂರ್ಛೆ ಹೋದೆ’ ಎಂದು ಶಶಿಕಲಾ ತಿಳಿಸಿದ್ದಾರೆ. ಡಿ.5, 2016ರಂದು ಜಯಲಲಿತಾ (Jayalalithaa) ರಾತ್ರಿ 11:30ಕ್ಕೆ ನಿಧನರಾಗಿದ್ದರು.

ಜಯಾ ಹಳೆಯ ಆಡಿಯೋ ಕ್ಲಿಪ್‌ ವೈರಲ್‌

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ (Tamil Nadu Chief Minister) ಜಯಲಲಿತಾ ಅವರ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದ ಅರ್ಮುಗಸ್ವಾಮಿ ಆಯೋಗದ (Armugaswamy Commission) ವರದಿಯನ್ನು ರಾಜ್ಯ ವಿಧಾನಸಭೆಯಲ್ಲಿ ಸಲ್ಲಿಸಿದ ಬೆನ್ನಲ್ಲೇ ಜಯಲಲಿತಾ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್‌ ಸೋರಿಕೆಯಾಗಿದ್ದು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ರೆಕಾರ್ಡ್‌ ಮಾಡಿದ್ದು ಎನ್ನಲಾದ ಈ ಆಡಿಯೋ ಕ್ಲಿಪ್‌ನಲ್ಲಿ ಜಯಲಲಿತಾ ಸಿಟ್ಟಿಗೆದ್ದು ದೂರುತ್ತಿರುವುದು, ನಿರಂತರವಾಗಿ ಕೆಮ್ಮುತ್ತಿದ್ದರೂ ಆಸ್ಪತ್ರೆಯ ಸಿಬ್ಬಂದಿ ಕೇವಲ ಡೇಟಾ ಸಂಗ್ರಹಿಸಲು ಪ್ರಯತ್ನಿಸುತ್ತಿರುವುದು ಕೇಳಿ ಬಂದಿದೆ. ಇದರ ಜೊತೆಗೆ ಚೆನ್ನೈಗೆ ಆಗಮಿಸಿದ್ದ ವಿದೇಶಿ ವೈದ್ಯ ರಿಚರ್ಡ್‌ ಬೈಲೆ (Richard Bailey) ಅವರು ಜಯಲಲಿತಾರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸುವಂತೆ ಹೇಳಿದಾಗ ಶಶಿಕಲಾ, ಜಯಲಲಿತಾ ಅವನ್ನು ವಿದೇಶಕ್ಕೆ ಕಳುಹಿಸುವುದು ಅಗತ್ಯವೇ ಎಂದು ಕೇಳಿದ ವಿಡಿಯೋ ಕೂಡಾ ವೈರಲ್‌ ಆಗಿದೆ.
 

Follow Us:
Download App:
  • android
  • ios