ಸೇನಾ ವಾಹನದ ಮೇಲೆ ಭಯೋತ್ಪಾದಕರ ದಾಳಿ, ಮೂವರು ಸೈನಿಕರು ಹುತಾತ್ಮ!
ಜಮ್ಮು ಕಾಶ್ಮೀರದ ರಜೌರಿಯ ಡೇರಾ ಕಿ ಗಲಿಯಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ.
ನವದೆಹಲಿ (ಡಿ.21): ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಸೇನಾ ಟ್ರಕ್ ಮೇಲೆ ಉಗ್ರರು ಹೊಂಚು ಹಾಕಿ ಹೇಡಿತನದ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರೆ, ಮೂವರು ಯೋಧರು ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಎನ್ಕೌಂಟರ್ ಮುಂದುವರಿದಿದ್ದು, ಒಂದು ತಿಂಗಳ ಒಳಗಾಗಿ ಎರಡನೇ ಬಾರಿ ಈ ಪ್ರದೇಶದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ' ರಜೌರಿ ಸೆಕ್ಟರ್ನ ಥಾನಮಂಡಿಯ ದೇರಾ ಕಿ ಗಲಿಯಲ್ಲಿ 2 ವಾಹನಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. 3 ಸೈನಿಕರು ಗುಂಡಿನ ಗಾಯಗಳಿಗೆ ಬಲಿಯಾದರು. ಇನ್ನೂ 3 ಮಂದಿ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ' ಎಂದು ಪಿಟಿಐ ಟ್ವೀಟ್ ಮಾಡಿದೆ. ಎಲ್ಲಾ ಸೈನಿಕರು 48 ರಾಷ್ಟ್ರೀಯ ರೈಫಲ್ಸ್ಗೆ ಸೇರಿದವರಾಗಿದ್ದಾರೆ. ನವೆಂಬರ್ 22 ರಂದು ಇದೇ ಪ್ರದೇಶದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಕ್ಯಾಪ್ಟನ್ ಎಂಪಿ ಪ್ರಾಂಜಲ್ ಸೇರಿದಂತೆ ಐವರು ಸೈನಿಕರು ಸಾವು ಕಂಡಿದ್ದರು. ಅದಕ್ಕೂ ಮುನ್ನ ಮೇ 5 ರಂದು ಇದೇ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಐದು ಸೈನಿಕರು ಸಾವಿಗೀಡಾಗಿದ್ದರು.