ಉಗ್ರರ ಉಪಟಳ, ಗುಂಡಿಟ್ಟು ಪೊಲೀಸ್ ಅಧಿಕಾರಿಯ ಹತ್ಯೆ
ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ/ ಪೊಲೀಸ್ ಅಧಿಕಾರಿಯ ಹತ್ಯೆ/ ಪ್ರಾರ್ಥನೆ ಮುಗಿಸಿ ಹಿಂದಿರುಗುತ್ತಿದ್ದ ಅಧಿಕಾರಿ/ ಸೋಮವಾರ ಬೆಳಗ್ಗೆ ಉಗ್ರನನ್ನು ಹೊಡೆದುರುಳಿಸಲಾಗಿತ್ತು

ಶ್ರೀನಗರ(ಅ. 19) ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಬಾಲ ಬಿಚ್ಚಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ಉಗ್ರರು ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಹಿರಿಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಅಶ್ರಫ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಆಸ್ಪತ್ರೆಗೆ ಸೇರಿಸುವ ಸಂದರ್ಭ ಪೊಲೀಸ್ ಅಧಿಕಾರಿ ಪ್ರಾಣ ತ್ಯಾಗ ಮಾಡಿದ್ದಾರೆ. ಉಗ್ರರನ್ನು ಮಟ್ಟ ಹಾಕುವುದಕ್ಕಾಗಿ ಘಟನಾ ಸ್ಥಳವನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದಾರೆ.
ಪುಲ್ವಾಮಾ ದಾಳಿಯ ಅಸಲಿ ಕತೆ ಬಹಿರಂಗ, ಮೂಲ ಇಲ್ಲಿಂದಲೇ!
ಕೆನಾಲ್ವಾನ್ನಲ್ಲಿ ಸೋಮವಾರ ಸಂಜೆ ಪ್ರಾರ್ಥನೆ ಸಲ್ಲಿಸಿ ಮಸೀದಿಯಿಂದ ಮನೆಗೆ ತೆರಳುತ್ತಿದ್ದ ಇನ್ಸ್ಪೆಕ್ಟರ್ ಮೊಹಮ್ಮದ್ ಅಶ್ರಫ್ ಮೇಲೆ ಮೇಲೆ ಅಪರಿಚಿತ ಬಂದೂಕುಧಾರಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ.
ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೋಮವಾರವೇ ನಡೆದ ಸಂಘರ್ಷದಲ್ಲಿ ಒಬ್ಬ ಉಗ್ರನನ್ನು ಭದ್ರತಾ ಪಡೆಯ ಯೋಧರು ಹೊಡೆದುರುಳಿಸಿದ್ದರು. ಇತ್ತ ಚೀನಾ ಗಡಿಯಲ್ಲಿ ಕ್ಯಾತೆ ಮಾಡುತ್ತಿದ್ದರೆ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರೇರೇಪಿತ ಉಗ್ರರು ಯೋಧರು ಮತ್ತು ಪೊಲೀಸರ ಮೇಲೆ ದಾಳಿ ಮಾಡುತ್ತ ಉಪಟಳ ನೀಡುವುದನ್ನು ಮುಂದುವರಿಸಿದ್ದಾರೆ.