Asianet Suvarna News Asianet Suvarna News

ಗಂಟಲು ಕಿರಿ ಕಿರಿ, ಕಣ್ಣು ಉರಿ: ದೀಪಾವಳಿಗೆ ಬಸವಳಿದ ದೆಹಲಿ!

*ಗುರುವಾರ ಇಡೀ ದಿನ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಸದ್ದು
*ಶುಕ್ರವಾರ ಬೆಳಿಗ್ಗೆ ಹದಗೆಟ್ಟ ದೆಹಲಿ ವಾತಾವರಣ
*ತೀವ್ರ ಕಳಪೆ ಗುಣಮಟ್ಟ ಎಂದ ಹವಾಮಾನ ವರದಿ

Itchy Throat Watery Eyes Delhi Pollution worsen after Diwali 2021 celebrations
Author
Bengaluru, First Published Nov 5, 2021, 2:56 PM IST

ನವದೆಹಲಿ(ನ. 5): ದೆಹಲಿಯಲ್ಲಿ (Delhi) ಪಟಾಕಿ ನಿಷೇಧವಿದ್ದರೂ ಜನತೆ ದೀಪಾವಳಿ (Deepawali) ಹಬ್ಬವನ್ನು ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮದಿಂದ ಆಚರಿಸಿದ್ದಾರೆ. ಗುರುವಾರ ಇಡೀ ದಿನ ಸಿಡಿಸಿದ ಪಟಾಕಿಯ ಪರಿಣಾಮವಾಗಿ ಶುಕ್ರವಾರ ಬೆಳಿಗ್ಗೆ ದೆಹಲಿ ಜನತೆ ತೀವ್ರ ತೊಂದರೆ ಎದುರಿಸಿದ್ದಾರೆ. ಗಂಟಲು ತುರಿಕೆ, ನೀರು ತಂಬಿದ ಕಣ್ಣುಗಳೊಂದಿಗೆ ಜನರು ತಮ್ಮ ದಿನವನ್ನು ಆರಂಭಿಸಿದ್ದಾರೆ. ಹೌದು! ಹಿಂದಿನ ದಿನ ಪಟಾಕಿ ಸಿಡಿಸಿದ ಕಾರಣ ವಾತಾವರಣ ಸೇರಿದ್ದ ವಿಷಕಾರಿ ಹೊಗೆಯೂ ಬೆಳ್ಳಂ ಬೆಳಿಗ್ಗೆ ಜನರ ಮೇಲೆ ಪರಿಣಾಮ ಬೀರಿದೆ.

ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ಶುಕ್ರವಾರ ಬೆಳಿಗ್ಗೆ "ತೀವ್ರ ಕಳಪೆ" ವರ್ಗಕ್ಕೆ ಕುಸಿದಿದೆ. ಕಳೆದ ಎರಡು ದಿನಗಳಿಂದ ಸತತ ಇಳಿಕೆ ಕಂಡಿದ್ದ  ವಾಯು ಗುಣಮಟ್ಟ  ನಿನ್ನೆ ಸಂಜೆ 4 ಗಂಟೆಗೆ 382 ರಷ್ಟಿತ್ತು. ಆದರೆ  ಸಂಜೆಯಾಗುತ್ತಿದ್ದಂತೆ ನಗರದ ವಾಯು ಗುಣಮಟ್ಟ ಸೂಚ್ಯಂಕವು ತೀವ್ರ ಕಳಪೆ ವಲಯವನ್ನು ಪ್ರವೇಶಿಸಿತು. ಇದರ ಜತೆಗೆ ಕಡಿಮೆ ತಾಪಮಾನ ಮತ್ತು ಕಡಿಮೆಯಾದ ಗಾಳಿಯ ವೇಗವು  ಮಾಲಿನ್ಯಕಾರಕಗಳ ಶೇಖರಣೆಗೆ ಅವಕಾಶ ಮಾಡಿಕೊಟ್ಟಿತು.

ನಿಷೇಧದ ಹೊರತಾಗಿಯೂ ಸದ್ದು ಮಾಡಿದ ಪಟಾಕಿ!

ದಕ್ಷಿಣ ದೆಹಲಿಯ ಲಜಪತ್ ನಗರ್ (Lajpat Nagar), ಉತ್ತರ ದೆಹಲಿಯ ಬುರಾರಿ (Burari), ಪಶ್ಚಿಮ ದೆಹಲಿಯ ಪಶ್ಚಿಮ ವಿಹಾರ್ (Paschim Vihar) ಮತ್ತು ಪೂರ್ವ ದೆಹಲಿಯ ಶಾಹದಾರ (Shahdara) ನಿವಾಸಿಗಳು ರಾತ್ರಿ 7 ಗಂಟೆಯಿಂದಲೇ ಪಟಾಕಿ ಸಿಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಹೀಗಾಗಿ ನಗರದ ತುಂಬ ಹೊಗೆಯ ಪದರ ಆವರಿಸಿದೆ. ಈ ಬೆನ್ನಲ್ಲೆ ನಗರದ ಹಲವಾರು ಭಾಗಗಳು ಮತ್ತು ಅದರ ಉಪನಗರಗಳ ಜನರು ಗಂಟಲಿನ ತುರಿಕೆ ಮತ್ತು ಕಣ್ಣುಗಳಲ್ಲಿ ನೀರು ತುಂಬಿರುವ ಬಗ್ಗೆ ದೂರು ನೀಡಿದ್ದಾರೆ. 

WHO ಸೂಚಿಸಿರುವ ಸುರಕ್ಷಿತ ವಾಯು ಗುಣಮಟ್ಟದ ಸೂಚ್ಯಂಕದ ಮಿತಿ 25. ಆದರೆ ಶುಕ್ರವಾರ ಬೆಳಗ್ಗೆ ನಗರದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಪರ್ಟಿಕ್ಯುಲೇಟ್ ಮ್ಯಾಟರ್ (ಮಾಲೀನ್ಯಕಾರಕ ಕಣಗಳ ಸಾಂದ್ರತೆ) (PM) 2.5 ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ 999ರಷ್ಟಿತ್ತು. PM2.5 ಶ್ವಾಸಕೋಶದ ಕ್ಯಾನ್ಸರ್‌ನಂತಹ ಹೃದಯರಕ್ತನಾಳದ ಮತ್ತು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು. 

ಕಳಪೆ ವಾತಾವರಣಕ್ಕೆ ದೀಪಾವಳಿಯ ಪಟಾಕಿಯೇ ಕಾರಣ!

"ದೀಪಾವಳಿಯಂದು ಪಟಾಕಿಗಳನ್ನು ಸಿಡಿಸಿ ಮತ್ತು ದೆಹಲಿಯಲ್ಲಿ ಈಗಾಗಲೇ ಇರುವ ಮಾಲಿನ್ಯಕಾರಕಗಳ ಉಪಸ್ಥಿತಿಯಿಂದ ಒಟ್ಟಾರೆ ಗಾಳಿಯ ಗುಣಮಟ್ಟ ಇಂದು 'ತೀವ್ರ' ಕಳಪೆ ವರ್ಗದಲ್ಲಿದೆ. ಗಾಳಿಯ ಗುಣಮಟ್ಟ ಮತ್ತು ಮಂಜಿನ ಸ್ಥಿತಿಯು, ಗಾಳಿಯ ವೇಗವು ಹೆಚ್ಚಿಸಿದ ನಂತರವೇ ಸುಧಾರಿಸಲಿದೆ.  ಗಾಳಿಯ ಕಡಿಮೆ ವೇಗ ಮತ್ತು ಹೆಚ್ಚಿನ ತೇವಾಂಶವು ಮಂಜಿನ ಸ್ಥಿತಿಗೆ ಕಾರಣವಾಗುತ್ತದೆ ಎಂದು  ದೆಹಲಿಯ ಭಾರತೀಯ ಹವಾಮಾನ ಇಲಾಖೆ (India Meteorological Department) ಆಧಿಕಾರಿ  ಆರ್ ಕೆ ಜೆನಮಣಿ (RK Jenamani) ಹೇಳಿದ್ದಾರೆ.

Deepavali ಸಂಭ್ರಮದ ನಡುವೆ ಭೂಕಂಪನ: ಬೆಚ್ಚಿಬಿದ್ದ ವಿಜಯಪುರದ ಜನತೆ..!

ವಿಶ್ವದ ಎಲ್ಲಾ ರಾಜಧಾನಿಗಳಲ್ಲಿ ದೆಹಲಿಯೇ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟವನ್ನು ಹೊಂದಿದೆ. ಇದರ ಹೊರತಾಗಿಯೂ ಜನರು ಭಾರತದ ಅತಿದೊಡ್ಡ ಹಬ್ಬವಾದ ದೀಪಾವಳಿಯನ್ನು ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿ ಆಚರಿಸಿದ ಕಾರಣ ಶುಕ್ರವಾರ ದೆಹಲಿ ವಾಯು ಗುಣಮಟ್ಟ ಇನ್ನಷ್ಟು ಕುಸಿದಿದೆ. ನೆರೆಯ ನಗರಗಳಾದ ಫರಿದಾಬಾದ್ (424), ಘಾಜಿಯಾಬಾದ್ (442), ಗುರ್‌ಗಾಂವ್ (423) ಮತ್ತು ನೋಯ್ಡಾ (431) ಕೂಡ 'ತೀವ್ರ' ಕಳಪೆ ಗಾಳಿಯ ಗುಣಮಟ್ಟವನ್ನು ದಾಖಲಿಸಿದ್ದು, ರಾತ್ರಿ 9 ಗಂಟೆಯ ನಂತರ ಪಟಾಕಿ ಸಿಡಿಸಿದ ಪ್ರಮಾಣ ಉತ್ತುಂಗಕ್ಕೇರಿತ್ತು

ಇನ್ನಷ್ಟು ಹದಗೆಡಲಿರುವ ದೆಹಲಿ ವಾತಾವರಣ!

ದೆಹಲಿ ಸರ್ಕಾರವು ಹಸಿರು ಪಟಾಕಿ ಸೇರಿದಂತೆ ಎಲ್ಲ ವಿಧದ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ, ಹಲವಾರು ಜನರು ಪಟಾಕಿಗಳನ್ನು ಸಿಡಿಸುತ್ತಿರುವುದು ಗುರುವಾರ ಕಂಡುಬಂದಿದೆ, ಇದು ಗಾಳಿಯ ಗುಣಮಟ್ಟ ಕುಸಿತಕ್ಕೆ ಕಾರಣವಾಗಿದೆ. "ದೆಹಲಿಯಲ್ಲಿ ಪಟಾಕಿ ನಿಷೇಧವು ಯಶಸ್ವಿಯಾಗಲಿಲ್ಲ ಎಂದು ತೋರುತ್ತಿದೆ, ಇದು ಈಗಾಗಲೇ ತಲೆ ನೋವಾಗಿ ಪರಿಣಮಿಸಿರುವ ಕಳಪೆ ಗುಣಮಟ್ಟದ ವಾಯು ಮೇಲೆ  ಇನ್ನಷ್ಟು ಅಪಾಯಕಾರಿ ಪರಿಣಾಮ ಬೀಳಲಿದೆ" ಎಂದು ಇಂಧನ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರದ (Centre for Research on Energy and Clean Air) ವಿಶ್ಲೇಷಕ ಸುನಿಲ್ ದಹಿಯಾ ಹೇಳಿದ್ದಾರೆ.

ಹರಿಯಾಣ ಸರ್ಕಾರವು ರಾಷ್ಟ್ರೀಯ ರಾಜಧಾನಿ ಪ್ರದೇಶದ 14 ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟ ಅಥವಾ ಬಳಕೆಯ ಮೇಲೆ ನಿಷೇಧ ಮಾಡಿದೆ, ಆದರೆ ರಾಜ್ಯದ ಇತರ ಭಾಗಗಳಲ್ಲಿ ಕೆಲವು ನಿರ್ಬಂಧಗಳನ್ನು ಮಾತ್ರ ಹಾಕಿದೆ. ದೀಪಾವಳಿ ಹಬ್ಬದ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯ ವಾಯುಗುಣ ಮಟ್ಟ ಕಳಪೆ ಮಟ್ಟಕೆ ತಲುಪಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಪಟಾಕಿ ಸಿಡಿಸುವ ಪ್ರಮಾಣ ಇವತ್ತು ಕೂಡ ಹೀಗೆ ಮುಂದುವರೆದರೆ ಕೆಲವು ದಿನಗಳ ಕಾಲ ದೆಹಲಿಯ ವಾತಾವರಣ ಇದೇ ರೀತಿ ಇರಲಿದೆ. 

Follow Us:
Download App:
  • android
  • ios