ಉತ್ತರಪ್ರದೇಶಕ್ಕೆ ಐಸಿಸ್‌ ಉಗ್ರರ ಪ್ರವೇಶ: ಹೈಅಲರ್ಟ್‌ ಘೋಷಣೆ| ನೇಪಾಳ ಗಡಿ ಮೂಲಕ ಪರಾರಿ ಸಾಧ್ಯತೆ| ಕಟ್ಟೆಚ್ಚರ ವಹಿಸಿದ ಉತ್ತರಪ್ರದೇಶ ಪೊಲೀಸರು

ಬಸ್ತಿ[ಜ.06]: ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಗಳ ಪೈಕಿ ಒಂದಾಗಿರುವ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಸಂಘಟನೆಯ ಇಬ್ಬರು ಶಂಕಿತ ಉಗ್ರರು ಉತ್ತರಪ್ರದೇಶವನ್ನು ಪ್ರವೇಶಿಸಿದ್ದಾರೆ, ಅವರು ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಭಾರತ- ನೇಪಾಳ ಗಡಿಯಲ್ಲಿರುವ ಉತ್ತರಪ್ರದೇಶದ ಜಿಲ್ಲೆಗಳಾದ ಮಹಾರಾಜಗಂಜ್‌, ಕುಶಿನಗರ ಹಾಗೂ ಸಿದ್ಧಾರ್ಥನಗರ ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಸಾರಲಾಗಿದೆ.

Add Asianetnews Kannada as a Preferred SourcegooglePreferred

ಪೊಲೀಸರಿಗೆ ಬೇಕಾಗಿರುವ ಇಬ್ಬರು ಭಯೋತ್ಪಾದಕರಾದ ಅಬ್ದುಲ್‌ ಸಮದ್‌ ಹಾಗೂ ಇಲಿಯಾಸ್‌ ಎಂಬುವರು ಉತ್ತರಪ್ರದೇಶಕ್ಕೆ ಪ್ರವೇಶಿಸಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ. ಈ ಇಬ್ಬರು ಭಾವಚಿತ್ರಗಳನ್ನು ಎಲ್ಲೆಡೆ ರವಾನಿಸಲಾಗಿದೆ ಎಂದು ಬಸ್ತಿ ವಲಯದ ಐಜಿ ಆಶುತೋಷ್‌ ಕುಮಾರ್‌ ಅವರು ತಿಳಿಸಿದ್ದಾರೆ. ಆದರೆ ಈ ಇಬ್ಬರು ಯಾವ ಉಗ್ರ ಸಂಘಟನೆಯವರು ಎಂಬುದು ತಮಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಆ ಇಬ್ಬರೂ ಐಸಿಸ್‌ ಸಂಘಟನೆಯವರಾಗಿದ್ದಾರೆ.

ಅಬ್ದುಲ್‌ ಸಮದ್‌ ಹಾಗೂ ಇಲಿಯಾಸ್‌ ಈ ಮುನ್ನ ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯಲ್ಲಿ ಕಂಡುಬಂದಿದ್ದರು. ಐಸಿಸ್‌ ಜತೆ ನಿಕಟ ಸಂಬಂಧ ಹೊಂದಿದ್ದರು. ದೇಶದಲ್ಲಿ ಐಸಿಸ್‌ ವಿಸ್ತರಿಸಲು ಯತ್ನಿಸುತ್ತಿದ್ದರು. ಅವರಿಬ್ಬರ ಬಂಧನಕ್ಕೆ ಪೊಲೀಸರು ಭಾರಿ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಭಾರತ ಹಾಗೂ ನೇಪಾಳ ಗಡಿ 1751 ಕಿ.ಮೀ. ಉದ್ದವಿದೆ. ಉತ್ತರಪ್ರದೇಶವೊಂದೇ ನೇಪಾಳ ಜತೆ 599.3 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದೆ.