ಯುದ್ಧದಿಂದ ಕುವೈತ್ನಲ್ಲಿ ಸಿಲುಕಿದ ಪತ್ನಿ, ಕಳೆದ 5 ದಿನದಿಂದ ಶವಾಗಾರದಲ್ಲಿದೆ ಗಂಡನ ಮೃತದೇಹ, ಹೃದಯಾಘಾತದಿಂದ ಗಂಡ ಮೃತಪಟ್ಟ ವಾರ ಕಳೆಯುತ್ತಿದೆ. ಆದರೆ ಅಂತ್ಯಸಂಸ್ಕಾರ ಮಾಡಲು ಪತ್ನಿಗೆ ಕುವೈತ್ನಿಂದ ಮರಳಲು ಸಾಧ್ಯವಾದ ಪರಿಸ್ಥಿತಿ ಎದುರಾಗಿದೆ.
ನವದೆಹಲಿ (ಮಾ.05) ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದಲ್ಲಿ ಹಲವು ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಮುಖವಾಗಿ ಇರಾನ್ ಪ್ರತಿದಾಳಿಯಲ್ಲಿ ಗಲ್ಫ್ ರಾಷ್ಟ್ರದಲ್ಲಿರುವ ಭಾರತೀಯರು ಆತಂಕದಲ್ಲಿ ದಿನದೂಡುತ್ತಿದ್ದಾರೆ. ತುರ್ತು ಅಗತ್ಯಕ್ಕಾಗಿ ಭಾರತಕ್ಕೆ ಮರಳಲು ಸಾಧ್ಯವಾಗದೇ ಪರದಾಡುವ ಸ್ಥಿತಿ ಎದುರಾಗಿದೆ. ಇದೀಗ ಕೇರಳದ ಮನ್ನಾರ್ ಮೂಲದ ವ್ಯಕ್ತಿಯೊಬ್ಬರು ಹೃದಯಘಾತದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಭಾರತಕ್ಕೆ ಧಾವಿಸಲು ಮುಂದಾಗ ಪತ್ನಿ ಕುವೈತ್ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಇದೀಗ ಕಳೆದ ಐದು ದಿನಗಳಿಂದ ಪತಿಯ ಮತದೇಹ ಶವಗಾರದಲ್ಲಿ ಇಡಲಾಗಿದೆ.
ಹೃದಯಾಘಾತದಿಂದ ಮೃತಪಟ್ಟ ಆಟೋ ಚಾಲಕ
ಇರಾನ್-ಇಸ್ರೇಲ್ ಯುದ್ಧದ ಕಾರಣ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಮಧ್ಯಪ್ರಾಚ್ಯ ದೇಶಗಳ ಎಲ್ಲಾ ವಿಮಾನ ಸೇವೆ ರದ್ದಾಗಿದೆ. ಇದರ ನಡುವೆ ಕೇರಳದ ಕುಟ್ಟಂಪೇರೂರು ನಿವಾಸಿ 49 ವರ್ಷದ ಸಜಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಟೋ ಚಾಲಕರಾಗಿದ್ದ ಸಜಿ ತೀವ್ರ ಎದೆನೋವಿನಿಂದ ಕುಸಿದು ಬಿದ್ದಿದ್ದರು. ಹೀಗಾಗಿ ಕುಟುಂಬಸ್ಥರು, ಆಪ್ತರು ತಕ್ಷಣೇ ಫೆಬ್ರವರಿ 28ರಂದು ಪರುಮಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಜಿ ಮೃತಪಟ್ಟಿದ್ದಾರೆ.
ಗಂಡನ ಆಸ್ಪತ್ರೆ ದಾಖಲಿಸುತ್ತಿದ್ದಂತೆ ಪತ್ನಿಗೆ ಮಾಹಿತಿ
ಆಟೋ ಚಾಲಕ ಕುಸಿದು ಬಿದ್ದ ಬೆನ್ನಲ್ಲೇ ಕುವೈತ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಪತ್ನಿ ಲೀನಾಗೆ ಮಾಹಿತಿ ನೀಡಲಾಗಿದೆ. ಫೆಬ್ರವರಿ 28ರ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಭಾರತಕ್ಕೆ ಮರಳಲು ಟಿಕೆಟ್ ಬುಕ್ ಮಾಡಿದ್ದಾರೆ. ಇದರ ನಡುವೆ ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿದೆ. ಇರಾನ್ ಪ್ರತಿದಾಳಿ ಆರಂಭಿಸಿತ್ತು. ಇದರ ಪರಿಣಾಮ ಮಧ್ಯಪ್ರಾಚ್ಯ ದೇಶಗಳ ಹಲವು ವಿಮಾನ ನಿಲ್ದಾಣಗಳು ಕ್ಲೋಸ್ ಆಗಿತ್ತು. ಯುದ್ಧ ನಿಲ್ಲುತ್ತಿಲ್ಲ, ಇತ್ತ ಪತ್ನಿಗೆ ಕುವೈತ್ನಿಂದ ಭಾರತಕ್ಕೆ ಮರಳಿ ಗಂಡನ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತ ಗಂಡನ ಮೃತದೇಹವನ್ನು ಮಾವೇಲಿಕ್ಕರ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಇಷ್ಟೇ ಅಲ್ಲ ಗಂಡನ ಅಂತ್ಯಸಂಸ್ಕಾರವನ್ನು ಮುಂದೂಡಲಾಗಿದೆ. ಆದರೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿರುವ ಕಾರಣ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಕುವೈತ್ನಲ್ಲಿರುವ ಪತ್ನಿ ಕಣ್ಮೀರಿನಲ್ಲಿ ದಿನ ದೂಡುತ್ತಿದ್ದಾರೆ.
ಆಟೋ ಚಾಲಕನ ಪತ್ನಿ ಲೀನಾ ಕುವೈತ್ನ ಸಾಲ್ಮಿಯಾದಲ್ಲಿರುವ ಸಿರಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಎರಡು ತಿಂಗಳ ಹಿಂದಷ್ಟೇ ರಜೆ ಮೇಲೆ ಊರಿಗೆ ಬಂದು ವಾಪಸ್ ಹೋಗಿದ್ದರು. ಲೀನಾ ಅವರನ್ನು ಆದಷ್ಟು ಬೇಗ ಊರಿಗೆ ಕರೆತರಲು ಕುವೈತ್ನ ಸಾಂಸ್ಕೃತಿಕ ಸಂಘಟನೆ 'ಕಲಾ ಕುವೈತ್' ಹಾಗೂ ಭಾರತೀಯ ರಾಯಭಾರ ಕಚೇರಿ ಪ್ರಯತ್ನಿಸುತ್ತಿವೆ. ಒಂದು ವೇಳೆ ಏರ್ಪೋರ್ಟ್ ಮತ್ತೆ ತೆರೆದರೂ, ಈಗಾಗಲೇ ಕನೆಕ್ಷನ್ ಫ್ಲೈಟ್ಗಳಿಗಾಗಿ ಹೋಟೆಲ್ಗಳಲ್ಲಿ ಕಾಯುತ್ತಿರುವ ಪ್ರಯಾಣಿಕರಿಗೆ ಮೊದಲ ಆದ್ಯತೆ ಸಿಗಲಿದೆ. ಹೀಗಾಗಿ, ಅವರ ಜೊತೆಯಲ್ಲೇ ಲೀನಾಗೂ ಪ್ರಯಾಣಿಸಲು ಅವಕಾಶ ಮಾಡಿಕೊಡಲು ರಾಯಭಾರ ಕಚೇರಿ ಮತ್ತು ಸಂಘಟನೆಯ ಪದಾಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ.


