Asianet Suvarna News Asianet Suvarna News

ಯುಪಿಎ ಕಾಲದಲ್ಲಿ ತಾನು ಎಸಗಿದ ಅವ್ಯವಹಾರವೆಲ್ಲ ಬೆಳಕಿಗೆ ಬರುತ್ತೆಂದು ಕಾಲ್ಕಿತ್ತ ಅಮ್ನೆಸ್ಟಿ !

ದಶಕಗಳಿಂದ ಕೆಲವು ಸಂಘಟನೆಗಳು ಭಾರತದ ಕಾನೂನುಗಳನ್ನು ಗೌರವಿಸುವ ಅಗತ್ಯವಿಲ್ಲ ಎಂದು ಭಾವಿಸಿದ್ದವು. ಅಮ್ನೆಸ್ಟಿಪ್ರಕರಣದಲ್ಲಿರುವ ಸಂದೇಶ ಏನು ಗೊತ್ತಾ? ಭಾರತದಲ್ಲಿ ನೀವು ಕಾನೂನನ್ನು ಉಲ್ಲಂಘಿಸಿದರೆ ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ. ವಿದೇಶಿ ಎನ್‌ಜಿಓಗೆ ಇನ್ನುಮುಂದೆ ಭಾರತದಲ್ಲಿ ಫ್ರೀ-ಪಾಸ್‌ ಇರುವುದಿಲ್ಲ.

International NGO Amnesty shuts Operations in India
Author
Bengaluru, First Published Sep 30, 2020, 10:06 AM IST

ಬೆಂಗಳೂರು (ಸೆ. 30): ಅಮ್ನೆಸ್ಟಿಇಂಟರ್‌ನ್ಯಾಶನಲ್‌ ಸಂಸ್ಥೆ ತನ್ನ ಕಾರ್ಯಾಚರಣೆ ಮತ್ತು ವ್ಯವಹಾರದ ಮಾದರಿಗಳು ಕಾನೂನಿನ ಪರಿಶೀಲನೆಗೆ ಒಳಪಟ್ಟು ಕುಸಿದುಬೀಳಲು ಆರಂಭವಾದ ನಂತರ ಭಾರತದಲ್ಲಿಯ ತನ್ನ ಮಾನವ ಹಕ್ಕುಗಳ ‘ವ್ಯವಹಾರ’ವನ್ನು ಸ್ಥಗಿತಗೊಳಿಸಿದೆ. ತನ್ನ ಕಾನೂನಿನ ಉಲ್ಲಂಘನೆಯನ್ನು ಮರೆಮಾಚಲು ಅದು ‘ಸರ್ಕಾರದ ಭೂತಬೇಟೆ’ (ವಿಚ್‌ ಹಂಟ್‌)ಯೆಂಬ ಹೊಗೆ ಪರದೆಯನ್ನು ಸೃಷ್ಟಿಸಿಕೊಂಡಿದ್ದು ಅತ್ಯಂತ ನಿರೀಕ್ಷಿತವೇ ಆಗಿದೆ.

ಕಾನೂನನ್ನು ಉಲ್ಲಂಘಿಸುವವರು ಬಲಿಪಶುವಿನ ದಾಳ ಬಳಸಲು ಯತ್ನಿಸಿದ್ದು ಇದೇ ಮೊದಲ ಬಾರಿಯೇನಲ್ಲ. ಈ ಪ್ರಕರಣದಲ್ಲಿ ಅಮ್ನೆಸ್ಟಿಹೆಚ್ಚು ವಿಶೇಷವಾಗಿ ಇ.ಡಿ.ಯ ‘ಪ್ರತಿಕೂಲ’ ವರದಿಗಳನ್ನು ಅನುಸರಿಸಿ ಸರ್ಕಾರವು ತೆಗೆದುಕೊಂಡ ಕ್ರಮಗಳನ್ನು ಟೀಕಿಸಿದೆ. ಈ ತನಿಖೆಯನ್ನು ತಡೆಯುವುದಕ್ಕಾಗಿ ಅದು ಕಾನೂನಿನ ಪರಿಹಾರಗಳನ್ನು ಪಡೆಯಲು ಕೋರ್ಟಿನ ಮೊರೆಹೋಗಿತ್ತು. ಅಲ್ಲಿ ವಿಫಲವಾದ ಕಾರಣ ಇದೀಗ ಗಂಟುಮೂಟೆ ಕಟ್ಟಿದೆ.

ದೇಶದ್ರೋಹಿ ಚಟುವಟಿಕೆಗೆ ನಿರ್ಬಂಧ

ಭಾರತವು ಕಾನೂನು ವ್ಯವಸ್ಥೆಗೆ ಒಳಪಟ್ಟು ಒಂದು ರಾಷ್ಟ್ರ. ಇಲ್ಲಿ ಎಲ್ಲ ವಿದೇಶಿ ಎನ್‌ಜಿಓಗಳು ದೇಣಿಗೆ ಪಡೆಯಲು ಎಫ್‌ಸಿಆರ್‌ಎ ನಿಬಂಧನೆಗೆ ಒಳಪಡಬೇಕು. ಎಫ್‌ಸಿಆರ್‌ಎ ನಿಬಂಧನೆ 2010ರಲ್ಲಿ ಸಂಸತ್ತಿನ ಮೂಲಕ ಜಾರಿಗೆ ಬಂದಿರುವ ಕಾನೂನು. ಇದರ ಉದ್ದೇಶ ವಿದೇಶಿ ದೇಣಿಗೆ ಅಥವಾ ವಿದೇಶಿ ಆತಿಥ್ಯವನ್ನು ನಿರ್ದಿಷ್ಟವ್ಯಕ್ತಿಗಳು ಅಥವಾ ಸಂಘಟನೆಗಳು ಅಥವಾ ಕಂಪನಿಗಳು ಅಂಗೀಕರಿಸುವುದನ್ನು ನಿಯಮಬದ್ಧಗೊಳಿಸುವುದು ಮತ್ತು ವಿದೇಶಿ ದೇಣಿಗೆ ಅಥವಾ ವಿದೇಶಿ ಆತಿಥ್ಯಗಳು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗೆ ಬಳಕೆಯಾಗುವುದನ್ನು ಮತ್ತು ಅದರಿಂದ ಸಂಭವಿಸಬಹುದಾದ ಕ್ರಿಯೆಗಳಿಗೆ ನೆರವಾಗುವುದನ್ನು ತಪ್ಪಿಸುವುದು.

ದಶಕಗಳಿಂದ ಕೆಲವು ಸಂಘಟನೆಗಳು ಭಾರತೀಯ ಕಾನೂನಿಗೆ ಒಳಪಡಬೇಕಾದ ಅಥವಾ ಅದನ್ನು ಗೌರವಿಸಬೇಕಾದ ಅಗತ್ಯವಿಲ್ಲ ಎಂದು ಭಾವಿಸಿವೆ. ಅಮ್ನೆಸ್ಟಿಕೂಡ ಅಂತಹುದೇ ಒಂದು ಸಂಸ್ಥೆ. ಅಮ್ನೆಸ್ಟಿಗೆ ಕೇಳಲಾದ ಪ್ರಶ್ನೆಗಳು ಗಂಭೀರವಾಗಿದ್ದವು. ಸಾರ್ವಭೌಮ ರಾಷ್ಟ್ರವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವಿದೇಶಿ ಸಂಸ್ಥೆಗೆ ಕೇಳಬಹುದಾದ ಮತ್ತು ಕಾನೂನಿನ ನಿಬಂಧನಗೆ ಒಳಪಟ್ಟು ಅದು ಕಾರ್ಯನಿರ್ವಹಿಸಬೇಕು ಎಂದು ನಿರೀಕ್ಷಿಸುವ ಪ್ರಶ್ನೆಗಳವು.

ಅಮ್ನೆಸ್ಟಿಯಿಂದ ಕಾನೂನು ಉಲ್ಲಂಘನೆ

ಅಮ್ನೆಸ್ಟಿಯ ಹಣಕಾಸಿನ ರಹಸ್ಯ ಬಯಲಿಗಿಟ್ಟಾಗ ಅದು ಭಾರತೀಯ ಕಾನೂನಿನ ಉಲ್ಲಂಘನೆಯನ್ನು ಪರಮಾನಂದದಿಂದ ಮಾಡುತ್ತಿದ್ದುದು ಬಹಿರಂಗವಾಯಿತು. ಅದು 2000ದ ಡಿಸೆಂಬರಿನಲ್ಲಿ ಒಂದೇ ಒಂದು ಎಫ್‌ಸಿಆರ್‌ಎ ಅನುಮತಿ ಪಡೆದುಕೊಂಡಿತ್ತು. ಮತ್ತೆಂದೂ 2010ರ ಕಾಯ್ದೆಯಂತೆ ಅಗತ್ಯವಾದ ಯಾವುದೇ ನವೀಕರಣವನ್ನು ಪಡೆದುಕೊಂಡಿಲ್ಲ. ಈ ಕಾಯ್ದೆಯ ಪ್ರಕಾರ ಪ್ರತಿ ಐದು ವರ್ಷಕ್ಕೆ ಒಂದು ಬಾರಿ ಪುನರ್ವಿಮರ್ಶೆ ಮತ್ತು ನವೀಕರಣ ಅಗತ್ಯವಾಗಿದೆ. ಹಲವು ಬಾರಿ ಎಫ್‌ಸಿಆರ್‌ಎ ಅನುಮತಿಯನ್ನು ನಿರಾಕರಿಸಿದ್ದರೂ ಅಮ್ನೆಸ್ಟಿವಿದೇಶದಿಂದ ಹಣವನ್ನು ಸ್ವೀಕರಿಸುತ್ತಲೇ ಬಂತು.

ಇದನ್ನು ಅಮ್ನೆಸ್ಟಿಇಂಟರ್‌ನ್ಯಾಶನಲ್‌ ಫೌಂಡೇಶನ್‌ (ಎಐಎಫ್‌), ಅಮ್ನೆಸ್ಟಿಇಂಟರ್‌ನ್ಯಾಶನಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಎಐಐಪಿಎಲ್‌), ಇಂಡಿಯನ್ಸ್‌ ಫಾರ್‌ ಅಮ್ನೆಸ್ಟಿಇಂಟರ್‌ನ್ಯಾಶನಲ್‌ (ಐಎಐಟಿ), ಅಮ್ನೆಸ್ಟಿಇಂಟರ್‌ನ್ಯಾಶನಲ್‌ ಸೌಥ್‌ ಏಷ್ಯಾ ಫೌಂಡೇಶನ್‌ (ಎಐಎಸ್‌ಎಎಫ್‌) ಮೊದಲಾದ ಸಂಸ್ಥೆಗಳಿಗೆ ಬಳಸಿಕೊಂಡಿದೆ. ಇವೆಲ್ಲವೂ ನ್ಯಾಯಬದ್ಧವಾದ ಎನ್‌ಜಿಓಗಳಿಗೆ ಅಗತ್ಯವಾದ ಎಫ್‌ಸಿಆರ್‌ಎ ಪರಿಶೀಲನೆ ಅಥವಾ ಅದರ ಅನುವರ್ತನೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಸೃಷ್ಟಿಸಿರುವಂತೆ ತೋರುತ್ತದೆ.

ನಿಷೇಧಿಸಿದ್ದರೂ ವಿದೇಶಿ ದೇಣಿಗೆ ಸ್ವೀಕಾರ

ಅಮ್ನೆಸ್ಟಿಗೆ ಸಂಬಂಧಿಸಿದ ವಾಸ್ತವಾಂಶಗಳು ಸ್ಫಟಿಕದಷ್ಟೇ ಸ್ಪಷ್ಟವಾಗಿದೆ- ವರ್ಷಗಳ ಕಾಲ ಗೃಹ ಸಚಿವಾಲಯವು ಮೇಲಿಂದ ಮೇಲೆ ನಿರಾಕರಿಸುತ್ತ ಬಂದರೂ ಅದು ಭಾರತದೊಳಕ್ಕೆ ದೇಣಿಗೆಯನ್ನು ಕಾನೂನುಬಾಹಿರವಾಗಿ ತರುತ್ತಲೇ ಬಂತು. ಲಾಭದಾಯಕವಾದ ಕಾರ್ಯ ಮಾಡುತ್ತಿರುವುದು ಮತ್ತು ಲಾಭರಹಿತವಾಗಿರಬೇಕಾದ ಎನ್‌ಜಿಓಗೆ ಅನುಮಾನಾಸ್ಪದ ರೀತಿಯಲ್ಲಿ ಹಣ ವರ್ಗಾವಣೆ ಸೇರಿದಂತೆ ಜಾರಿ ನಿರ್ದೇಶನಾಲಯವು ಹಲವು ಇತರ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಯುಪಿಎ ಸರ್ಕಾರದ ಒಂದು ದಶಕದ ಅವಧಿಯಲ್ಲಿ ತಾನು ಯಾವುದೇ ಭಾರತೀಯ ಕಾನೂನಿಗೆ ಉತ್ತದಾಯಿಯಾಗಿರಬೇಕಾಗಿಲ್ಲ ಎಂದು ಅಮ್ನೆಸ್ಟಿನಂಬಿಕೊಂಡಿತ್ತು. ಆಗಿನ ಅದರ ವ್ಯವಹಾರಗಳು ಪರಿಶೀಲನೆಗೆ ಒಳಗಾಗುವ ಭಯದಿಂದಲೇ ಈಗ ಗಂಟುಮೂಟೆ ಕಟ್ಟಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಭಾರತೀಯ ಕಾನೂನಿಗೆ ಅತೀತವಾದ ಶಕ್ತಿ ತಾನೆಂಬ ಭ್ರಮೆಯು ನುಚ್ಚುನೂರಾದ ಬಳಿಕ ಸರ್ಕಾರದ ಭೂತಬೇಟೆ ಎಂಬ ಹೊಗೆಪರದೆಯನ್ನು ಅದು ಸೃಷ್ಟಿಸಿಕೊಂಡಿದೆ.

ಹಲವಾರು ಅಕ್ರಮ ಚಟುವಟಿಕೆ

ಅನುಮಾನಾಸ್ಪದ ಹಣಕಾಸಿನ ವಿಷಯಗಳ ಆಚೆಗೆ ಭಾರತದಲ್ಲಿಯ ಅಮ್ನೆಸ್ಟಿ ಇತರ ಅನೇಕ ವಿಷಯಗಳನ್ನು ಹೊಂದಿದೆ. ಗೀತಾ ಸೆಹ್ಗಲ್‌ ಅವರನ್ನು ಉಲ್ಲೇಖಿಸಿ ಸಂಘಟನೆಯೊಂದು ಕೆಲವು ವರ್ಷಗಳ ಹಿಂದೆ ಗಾರ್ಡಿಯನ್‌ ಪತ್ರಿಕೆಯಲ್ಲಿ ಅಮ್ನೆಸ್ಟಿಯನ್ನು ತನ್ನ ನೈತಿಕತೆ ಕಳೆದುಕೊಂಡ ಸಂಘಟನೆ ಎಂದು ಬರೆದಿತ್ತು. ತೀರಾ ಇತ್ತೀಚೆಗೆ 2019ರ ಫೆಬ್ರವರಿಯಲ್ಲಿ ಅಮ್ನೆಸ್ಟಿತನ್ನ ಕೆಲಸದ ಸ್ಥಳದಲ್ಲಿ ದಬ್ಬಾಳಿಕೆ ನಡೆಸುವುದು, ಸಾರ್ವಜನಿಕವಾಗಿ ಮಾನಹಾನಿ ಮಾಡುವುದು, ತಾರತಮ್ಯ ಎಸಗುವುದು ಮತ್ತು ಅಧಿಕಾರದ ದುರ್ಬಳಕೆ ಮಾಡುವುದರ ಕುರಿತು ವರದಿಯೊಂದು ಹೇಳಿತ್ತು.

ಹಲವು ವರ್ಷಗಳಿಂದ ಅದು ತನ್ನ ವಿಭಜಕ ಕಾರ್ಯಕ್ರಮ ಮತ್ತು ಹಿಂಸಾಚಾರವನ್ನು ಬೆಳೆಸುವ ಉದ್ದೇಶಕ್ಕೆ ಹೊರಗಿನ ಮುಖವಾಡವಾಗಿ ಮಾನವ ಹಕ್ಕುಗಳನ್ನು ಬಳಸಿಕೊಳ್ಳುತ್ತಾ ಬಂದಿದೆ. ಇತ್ತೀಚೆಗೆ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ನಿರ್ದಿಷ್ಟವಾಗಿ ಕಣ್ಣಿಗೆ ಕಾಣುವಂಥ ಪಾತ್ರವನ್ನು ಅದು ವಹಿಸಿತು. ಅದು ಸಿಎಎ ಮುಸ್ಲಿಂ ವಿರೋಧಿ ಎಂದು ಪ್ರಚಾರ ಮಾಡುವಲ್ಲಿ ದೃಗ್ಗೋಚರ ಪಾತ್ರ ವಹಿಸಿತ್ತು. ಒಂದು ಎನ್‌ಜಿಓ ಆಗಿ ಅದು ನಿರ್ದಿಷ್ಟವಾಗಿ ವಿಷಪೂರಿತ ಮತ್ತು ದ್ವೇಷಪೂರಿತ ಪ್ರಚಾರವನ್ನು ಸರ್ಕಾರದ ಸದಸ್ಯರ ವಿರುದ್ಧ, ಬಿಜೆಪಿ ಮತ್ತು ಬಿಜೆಪಿ ಬೆಂಬಲಿಗರ ವಿರುದ್ಧ ಮತ್ತು ಹಿಂದೂ ನಂಬಿಕೆಯ ವಿರುದ್ಧ ನಡೆಸಿತ್ತು. ಮತ್ತೆ ಮತ್ತೆ ಅದು ಹುರುಳಿಲ್ಲದ ಮತ್ತು ಕೆಟ್ಟಆರೋಪಗಳನ್ನು ಮಾಡಿತ್ತು, ಸುಳ್ಳುಗಳನ್ನು ಹೇಳಿತ್ತು.

ಯಾವ ದೇಶದಲ್ಲೂ ಒಳ್ಳೆ ಹೆಸರಿಲ್ಲ

ಶೀತಲ ಯುದ್ಧದ ಕಾಲದಿಂದಲೂ ಇತರ ದೇಶಗಳಲ್ಲಿ ಮನಬಂದಂತೆ ಮೂಗುತೂರಿಸುವ ಸುದೀರ್ಘ ದಾಖಲೆಯನ್ನು ಅಮ್ನೆಸ್ಟಿಹೊಂದಿದೆ. ಇದು ಯಾವಾಗಲೂ ದೇಶಗಳನ್ನು ಗುಪ್ತವಿನಾಶ ಮಾಡುವ ರಾಜಕೀಯ ಉದ್ದೇಶದ ಸಂಘಟನೆಯಾಗಿತ್ತು. ಅನೇಕ ವರ್ಷಗಳವರೆಗೆ ಅದು ಪಶ್ಚಿಮ ದೇಶಗಳ ಅನುಕೂಲಕ್ಕೆ ಕೆಲಸ ಮಾಡಿತ್ತು. ನಂತರ 2000ದ ಆರಂಭದಲ್ಲಿ ಉದಾರವಾದಿಗಳು, ಎಡಪಂಥೀಯರು ಮತ್ತು ಅರಾಜಕತಾವಾದಿಗಳು ಈ ಸಂಘಟನೆಯ ನಿಯಂತ್ರಣ ಪಡೆದರು. ಮೂಲಭೂತವಾಗಿ ಇದರ ತಂತ್ರಗಳನ್ನು ಮತ್ತು ಗುರಿಗಳನ್ನು ಬದಲಿಸಿದರು. ನಯನತಾರಾ ಸೆಹ್ಗಲ್‌ರ ಮಗಳು ಮತ್ತು ಜವಾಹರಲಾಲ್‌ ನೆಹರು ಅವರ ತಂಗಿಯ ಮೊಮ್ಮಗಳು ಗೀತಾ ಸೆಹ್ಗಲ… 2010ರಲ್ಲಿ ಅಮ್ನೆಸ್ಟಿಯನ್ನು ಬಿಟ್ಟರು. ಇದಕ್ಕೆ ಕಾರಣ ಇತರ ವಿಷಯಗಳ ಜೊತೆಯಲ್ಲಿ ಅದು ಇಸ್ಲಾಮಿನ ಒತ್ತಡ ಗುಂಪುಗಳೊಂದಿಗೆ ಸಂಬಂಧ ಹೆಚ್ಚಿಸಿಕೊಳ್ಳುತ್ತಿದ್ದುದು. ಸದ್ಯದ ಅಮ್ನೆಸ್ಟಿನಾಯಕತ್ವವು ‘ಸೈದ್ಧಾಂತಿಕ ದಿವಾಳಿಕೋರತನ’ದಿಂದ ಮತ್ತು ‘ಸ್ತ್ರೀದ್ವೇಷ’ದಿಂದ ಬಳಲುತ್ತಿದೆ ಎಂದು ಅವರು ವರ್ಣಿಸಿದ್ದಾರೆ.

ಇನ್ನು ಮುಂದೆ ಫ್ರೀ-ಪಾಸ್‌ ಇಲ್ಲ

ಭಾರತದಲ್ಲಿ ಅಮ್ನೆಸ್ಟಿಯು ಎಡಪಂಥೀಯರು ಮತ್ತು ಮುಸ್ಲಿಂ ಹಿಂಸೆಕೋರರಿಂದ ಹಿಡಿದು ನಕ್ಸಲೀಯರು, ಅರಾಜಕತಾವಾದಿಗಳಿಂದ ಹಿಡಿದು ಭಯೋತ್ಪಾದಕರವರೆಗೆ ಬೆಂಬಲ ನೀಡಿದ ಸುದೀರ್ಘವಾದ ಸಂಶಯಾಸ್ಪದ ದಾಖಲೆಯನ್ನು ಹೊಂದಿದೆ. ಬಹುಶಃ ಇದು ಅವರ ಚಿತ್ರಹಿಂಸೆಯ ಎಡ ಉದಾರವಾದಿಯ ಹಿಂಸಾತ್ಮಕ ಕ್ರಾಂತಿಯ ಕನಸಿಗೆ ಹೊಂದುತ್ತಿರಬಹುದು. ಭಾರತೀಯ ಸಂವಿಧಾನದ ವಾಕ್‌ಸ್ವಾತಂತ್ರ್ಯದ ಹಕ್ಕನ್ನು ಅದು ಸುದೀರ್ಘ ಕಾಲ ಅನುಭವಿಸಿಕೊಂಡು ಬರುತ್ತಿದ್ದು, ಅದನ್ನು ಕಾನೂನು ಜಾರಿ ಮಾಡುವವರು ಮತ್ತು ಸೇನಾಪಡೆಗಳ ವಿರುದ್ಧ ಮಾನವ ಹಕ್ಕುಗಳ ಹೆಸರಿನಲ್ಲಿ ವಿಷಪೂರಿತ ಪ್ರಚಾರ ನಡೆಸುವುದಕ್ಕೆ ಬಳಸಿಕೊಂಡಿದೆ. ಇದರಿಂದ ಸಮರ್ಪಣ ಮನೋಭಾವದ ಹಲವು ಸುರಕ್ಷಾ ಅಧಿಕಾರಿಗಳು ಹತಾಶರಾಗಿ ಕೆಲಸವನ್ನು ಬಿಡುವುದಕ್ಕೆ ಕಾರಣವಾಗಿದೆ.

ಭಾರತದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಅಮ್ನೆಸ್ಟಿಯಂಥ ಅನೇಕ ಇತರ ಸಂಘಟನೆಗಳು ಮತ್ತು ವ್ಯಕ್ತಿಗಳು ಭಾರತೀಯ ಕಾನೂನಿಗೆ ಗೌರವ ಕೊಡಬೇಕು ಮತ್ತು ಅದರ ನಿಬಂಧನೆಗೆ ಒಳಗಾಗಿ ಇರಬೇಕು. ಅಮ್ನೆಸ್ಟಿಪ್ರಕರಣದಲ್ಲಿರುವ ಸಂದೇಶ ಏನೆಂದರೆ- ಭಾರತದಲ್ಲಿ ನೀವು ಕಾನೂನನ್ನು ಉಲ್ಲಂಘಿಸಿದರೆ ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ ಎನ್ನುವುದು. ವಿದೇಶಿ ಎನ್‌ಜಿಓಗೆ ಇನ್ನು ಮುಂದೆ ಭಾರತದಲ್ಲಿ ಫ್ರೀ-ಪಾಸ್‌ ಇರುವುದಿಲ್ಲ.

- ರಾಜೀವ್‌ ಚಂದ್ರಶೇಖರ್‌

ಬಿಜೆಪಿ ರಾಷ್ಟ್ರೀಯ ವಕ್ತಾರ, ರಾಜ್ಯಸಭೆ ಸದಸ್ಯ

 

Follow Us:
Download App:
  • android
  • ios