ಉಧಂಪುರ ಬಳಿ ಸೇನಾ ಹೆಲಿಕಾಪ್ಟರ್ ಪತನ, ಮುಂದುವರಿದ ರಕ್ಷಣಾ ಕಾರ್ಯ!
* ಜಮ್ಮು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸೇನಾ ಹೆಲಿಕಾಪ್ಟರ್ ಪತನ
* ಪೈಲಟ್ ಹಾಗೂ ಸಹ ಪೈಲಟ್ ಇಬ್ಬರಿಗೂ ಗಾಯ
* ಕೆಟ್ಟ ಹವಾಮಾನದಿಂದ ದುರಂತ ಸಂಭವಿಸಿರುವ ಸಾಧ್ಯತೆ
ಶ್ರೀನಗರ(ಸೆ.21): ಜಮ್ಮು ಕಾಶ್ಮೀರದ ಉಧಂಪುರ ಜಿಲ್ಲೆಯ ಶಿವ ಗರ್ಧಾರ್ನಲ್ಲಿ ಮಂಗಳವಾರ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನಗೊಂಡಿದೆ. ಮಂಜು ಮುಸುಕಿದ ವಾತಾವರಣವಿದ್ದ ಕಾರಣ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ಇನ್ನು ಈ ಘಟನೆಯಲ್ಲಿ ಇಬ್ಬರು ಪೈಲಟ್ಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕೆಟ್ಟ ಹವಾಮಾನದಿಂದಾಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಅಥವಾ ನೆಲಕ್ಕೆ ಅಪ್ಪಳಿಸಿರಬಹುದೆಂದು ಅಂದಾಜಿಸಲಾಘಿದೆ. ಹೀಗಿದ್ದರೂ ಈ ದುರಂತಕ್ಕೇನು ಕಾರಣ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಪೈಲಟ್ ಮತ್ತು ಸಹ ಪೈಲಟ್ ಇಬ್ಬರೂ ಗಾಯಗೊಂಡಿದ್ದು, ಮಾಹಿತಿ ಪಡೆದ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಸದ್ಯ ಇಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.
ಇನ್ನು ದುರಂತದ ಬಗ್ಗೆ ಸ್ಥಳಿಯರಿಂದ ಮಾಹಿತಿ ಕಲೆ ಹಾಕಿರುವ ಸುದ್ದಿಸಂಸ್ಥೆ ಎಎನ್ಐ 'ಹೆಲಿಕಾಪ್ಟರ್ ಪಟನೀಟಾಪ್ ಸಮೀಪ ಭಾರೀ ಕೆಳ ಮಟ್ಟದಲ್ಲಿ ಹಾರಾಟ ನಡೆಸುತ್ತಿತ್ತು ಎಂದು ಸ್ಥಳೀಯರು ತಿಳಿಸಿರುವುದಾಗಿ ಟ್ವೀಟ್ ಮಾಡಿದೆ.