ಆರ್ಥಿಕ ಸಮೃದ್ಧಿಯ ಹೊಸ ಯುಗದಲ್ಲಿ ಭಾರತ: ತೆರಿಗೆದಾರರ ಆದಾಯ ಭಾರೀ ಏರಿಕೆಗೆ ಪ್ರಧಾನಿ ಸಂತಸ
ಭಾರತದಲ್ಲೀಗ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದಾಯ ತೆರಿಗೆ ಪಾವತಿದಾರರ ಆದಾಯವೂ ಕಳೆದ 9 ವರ್ಷಗಳಲ್ಲಿ 3 ಪಟ್ಟು ಏರಿಕೆಯಾಗಿದೆ.

ನವದೆಹಲಿ: ಭಾರತದಲ್ಲೀಗ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದಾಯ ತೆರಿಗೆ ಪಾವತಿದಾರರ ಆದಾಯವೂ ಕಳೆದ 9 ವರ್ಷಗಳಲ್ಲಿ 3 ಪಟ್ಟು ಏರಿಕೆಯಾಗಿದೆ. ಇದು ಭಾರತ ಆರ್ಥಿಕ ಸಮೃದ್ಧಿಯ ಹೊಸ ಯುಗದತ್ತ ದಾಪುಗಾಲು ಇಡುತ್ತಿದೆ ಎಂಬುದರ ದ್ಯೋತಕ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ 2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಘೋಷಣೆ ಪ್ರಕಟಿಸಿದ್ದ ಮೋದಿ, ಇದೀಗ ಅದಕ್ಕೆ ಪೂರಕವಾದ ಎರಡು ವರದಿಗಳನ್ನು ಹಂಚಿಕೊಂಡಿದ್ದಾರೆ. ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಎಸ್ಬಿಐ ರೀಸರ್ಚ್ ಹಾಗೂ ಪತ್ರಕರ್ತ ಅನಿಲ್ ಪದ್ಮನಾಭನ್ ಎಂಬುವವರ ವರದಿ ಕುರಿತು ಲಿಂಕ್ಡಿನ್ನಲ್ಲಿ ಬರೆದಿರುವ ಪ್ರಧಾನಿ, ಈ ವರದಿಗಳು ಭಾರತ 2047ಕ್ಕೆ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಅಗಾಧ ಪ್ರಗತಿ ಸಾಧಿಸುತ್ತಿರುವುದನ್ನು ಹೇಳುತ್ತಿವೆ. ಸಮಾನ ಹಾಗೂ ಸಮಗ್ರ ಅಭಿವೃದ್ಧಿಯ ಹೊಸ ಯುಗದತ್ತ ನಾವು ತೆರಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ವಿಳಂಬ ಐಟಿಆರ್ ಸಲ್ಲಿಕೆ ವೇಳೆ ದಂಡ ಪಾವತಿಸೋದು ಹೇಗೆ? ಎಲ್ಲಿ? ಇಲ್ಲಿದೆ ಮಾಹಿತಿ
ತೆರಿಗೆದಾರರ ಆದಾಯ ಏರಿಕೆ:
ಎಸ್ಬಿಐ ರೀಸರ್ಚ್ (SBI Research) ವರದಿಯಲ್ಲಿ, ಆದಾಯ ತೆರಿಗೆ ರಿಟನ್ಸ್ (IT Returns) ಸಲ್ಲಿಕೆದಾರರ ಆದಾಯವು 2014ರಲ್ಲಿದ್ದ 4.4 ಲಕ್ಷ ರು.ನಿಂದ 2023ರಲ್ಲಿ 13 ಲಕ್ಷ ರು.ಗೆ ಏರಿಕೆಯಾಗಿದೆ ಎಂಬ ಅಂಶವಿದೆ. ಇದನ್ನು ಉಲ್ಲೇಖಿಸಿ ಮೋದಿ, ಜನರಲ್ಲಿ ಶ್ರೀಮಂತಿಕೆ ಹೆಚ್ಚಿದರೆ ದೇಶ ಅಭಿವೃದ್ಧಿ ಹೊಂದುತ್ತದೆ. ನಿಸ್ಸಂಶಯವಾಗಿ ನಾವು 2027ಕ್ಕೆ ವಿಕಸಿತ ಭಾರತದ ಕನಸು ನನಸಾಗಿಸಿಕೊಳ್ಳುವ ದಾರಿಯಲ್ಲಿದ್ದೇವೆ ಎಂದು ಹೇಳಿದ್ದಾರೆ.
ತೆರಿಗೆ ರಿಟನ್ಸ್ ಸಂಖ್ಯೆ ಹೆಚ್ಚಳ:
ಪತ್ರಕರ್ತ ಅನಿಲ್ ಪದ್ಮನಾಭನ್ (Anil Padmanabhan) ಅವರ ಅಧ್ಯಯದಲ್ಲಿ 2014ರಿಂದ 2023ರ ನಡುವೆ ದೇಶದಲ್ಲಿ ಆದಾಯ ತೆರಿಗೆ ರಿಟನ್ಸ್ ಸಲ್ಲಿಕೆಯ ಪ್ರಮಾಣ ಹಲವಾರು ಪಟ್ಟು ಹೆಚ್ಚಳವಾಗಿರುವ ಅಂಶವಿದೆ. ಅದನ್ನು ಉಲ್ಲೇಖಿಸಿ ಮೋದಿ, ರಾಜ್ಯಗಳಲ್ಲಿ ಆದಾಯ ತೆರಿಗೆ ಸಲ್ಲಿಸುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಉತ್ತರ ಪ್ರದೇಶ (UP) ನಂ.1 ಸ್ಥಾನದಲ್ಲಿದ್ದು, ಅಲ್ಲಿ 2014ರಲ್ಲಿ 1.65 ಲಕ್ಷ ಜನರು ರಿಟನ್ಸ್ ಸಲ್ಲಿಕೆ ಮಾಡಿದ್ದರೆ 2023ರಲ್ಲಿ 11.92 ಲಕ್ಷ ಜನರು ರಿಟನ್ಸ್ ಸಲ್ಲಿಕೆ ಮಾಡಿದ್ದಾರೆ. ಮಣಿಪುರ (Manipur), ಮಿಜೋರಂ, ನಾಗಾಲ್ಯಾಂಡ್ನಂತಹ ಸಣ್ಣ ರಾಜ್ಯಗಳಲ್ಲೂ ತೆರಿಗೆ ರಿಟನ್ಸ್ ಸಲ್ಲಿಕೆ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.
ಐಟಿಆರ್ ಸಲ್ಲಿಕೆ ವೇಳೆ ನೀವು ಈ ತಪ್ಪು ಮಾಡಿದ್ರೆ ಬೀಳುತ್ತೆ ಭಾರೀ ದಂಡ!