ಕೊರೋನಾದಿಂದ ಕಂಗೆಟ್ಟಿದ್ದ ಭಾರತಕ್ಕೆ ಸಿಕ್ತು ನೆಮ್ಮದಿಯ ಸುದ್ದಿ!
- ಸೆಪ್ಟೆಂಬರ್ ಮಧ್ಯಭಾಗದಲ್ಲಿ ಆರ್ ವ್ಯಾಲ್ಯೂ ಶೇ.0.92ಕ್ಕೆ ಇಳಿಕೆ
- ಕೇರಳ, ಮಹಾರಾಷ್ಟ್ರದಲ್ಲೂ ಆರ್ ವ್ಯಾಲ್ಯೂ ಶೇ.1ಕ್ಕಿಂತ ಕೆಳಗೆ
- ಬೆಂಗಳೂರಿನಲ್ಲಿ ಈಗಲೂ ಶೇ.1.06ರಷ್ಟುಆರ್ ವ್ಯಾಲ್ಯೂ
ನವದೆಹಲಿ(ಸೆ.22): ಒಬ್ಬ ಸೋಂಕಿತನಿಂದ ಎಷ್ಟುಜನರಿಗೆ ಸೋಂಕು ಹಬ್ಬುತ್ತಿದೆ ಎಂಬುದನ್ನು ತಿಳಿಯಲು ಬಳಸುವ ಆರ್ ವ್ಯಾಲ್ಯೂ(R Value) ಪ್ರಮಾಣ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಸಮಾಧಾನಕಾರ ಎನ್ನಬಹುದಾದ ಶೇ.0.92ಕ್ಕೆ ಇಳಿದಿದೆ. ಅಂದರೆ 100 ಸೋಂಕಿತರು ಇತರೆ 92 ಜನರಿಗೆ ಮಾತ್ರ ಸೋಂಕನ್ನು ಹಬ್ಬಿಸುತ್ತಿದ್ದಾರೆ. ಆರ್ ವ್ಯಾಲ್ಯೂ ಶೇ.1ಕ್ಕಿಂತ ಕಡಿಮೆ ಇದ್ದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಈ ಹೊಸ ವರದಿ, 3ನೇ ಅಲೆಯ(Third Wave) ಭೀತಿಯಲ್ಲಿ ಇದ್ದವರಿಗೆ ಸ್ವಲ್ಪ ಸಮಾಧಾನ ನೀಡಿದೆ.
ಆರ್ ವ್ಯಾಲ್ಯೂ ಅಧ್ಯಯನ ನಡೆಸುತ್ತಿರುವ ಚೆನ್ನೈನ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್ನ ಸಿತಾಬ್ರಾ ಸಿನ್ಹಾ ಬಿಡುಗಡೆ ಮಾಡಿರುವ ಹೊಸ ವರದಿ ಅನ್ವಯ, ಆಗಸ್ಟ್ ಕೊನೆಯ ಭಾಗದಲ್ಲಿ ಆರ್ ವ್ಯಾಲ್ಯೂ ಶೇ.1.17 ಇತ್ತು. ಸೆಪ್ಟೆಂಬರ್ 4-7ರ ಅವಧಿಯಲ್ಲಿ ಅದು ಶೇ.1.11ಕ್ಕೆ ಕುಸಿದಿತ್ತು. ಇದೀಗ ಸೆಪ್ಟೆಂಬರ್ ಮಧ್ಯ ಭಾಗದಲ್ಲಿ ಅದು ಶೇ.0.92ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಅದರಲ್ಲೂ ದೇಶದಲ್ಲೇ ಅತಿ ಹೆಚ್ಚು ಕೇಸು ದಾಖಲಾಗುತ್ತಿದ್ದ ಕೇರಳ(Krala) ಮತ್ತು ಮಹಾರಾಷ್ಟ್ರದಲ್ಲೂ ಇದೀಗ ಆರ್ ವ್ಯಾಲ್ಯೂ ಶೇ.1ಕ್ಕಿಂತ ಕೆಳಕ್ಕೆ ಬಂದಿರುವುದು ಹೆಚ್ಚು ಸಮಾಧಾನಕರ ಸಂಗತಿ ಎಂದು ಸಿನ್ಹಾ ತಿಳಿಸಿದ್ದಾರೆ.0
ಇನ್ನು ಮಹಾನಗರಗಳ ಅಂಕಿ ಅಂಶ ನೋಡುವುದಾದರೆ ಮುಂಬೈನಲ್ಲಿ ಶೇ.1.09, ಚೆನ್ನೈನಲ್ಲಿ ಶೇ.1.11, ಬೆಂಗಳೂರಿನಲ್ಲಿ(Bangalore) ಶೇ.1.06 ಮತ್ತು ಕೋಲ್ಕತಾದಲ್ಲಿ ಶೇ.1.04ರಷ್ಟುಇದೆ ಎಂದು ಸಿನ್ಹಾ ತಿಳಿಸಿದ್ದಾರೆ.