ಇಂಡಿಯಾ ಮೈತ್ರಿ ಪಕ್ಷ ಒಗ್ಗಟ್ಟಾಗಿ ಬಿಜೆಪಿ ಸೋಲಿಸಲು ಅಖಾಡಕ್ಕಿಳಿದಿದೆ. ಆದರೆ ಒಂದೊಂದೆ ಪಕ್ಷಗಳು ಮೈತ್ರಿಯಿಂದ ಹೊರನಡೆಯುತ್ತಿದೆ. ಇದು ಮೈತ್ರಿ ಉದ್ದೇಶಕ್ಕೆ ತೀವ್ರ ಪೆಟ್ಟು ನೀಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಇಂಡಿಯಾ ಮೈತ್ರಿಯನ್ನು ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತಗೊಳಿಸಿದೆ. 

ಕೋಲ್ಕತಾ(ಫೆ.02) ಇಂಡಿಯಾ ಮೈತ್ರಿ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಸೀಟು ಹಂಚಿಕೆ ಸವಾಲಾಗುತ್ತಿದೆ. ಇದೇ ಕಾರಣದಿಂದ ಒಂದೊಂದೆ ಪಕ್ಷಗಳು ಮೈತ್ರಿಯಿಂದ ಹೊರನಡೆಯುತ್ತಿದೆ. ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಈಗಾಗಲೇ ಇಂಡಿಯಾ ಮೈತ್ರಿಯಿಂದ ಹೊರನಡೆದಿದೆ. ಜೆಡಿಯು ಬಿಜೆಪಿ ಜೊತೆ ಸೇರಿಕೊಂಡಿದೆ. ಟಿಎಂಸಿ ಹಾಗೂ ಆಪ್ ಏಕಾಂಗಿ ಹೋರಾಟ ಘೋಷಿಸಿದೆ. ಮೈತ್ರಿ ಒಡೆದು ಹೋಳಾಗುತ್ತಿದ್ದಂತೆ ಇದೀಗ ಕಾಂಗ್ರೆಸ್ ಮಹತ್ವದ ಹೇಳಿಕೆ ನೀಡಿದೆ. ಇಂಡಿಯಾ ಮೈತ್ರಿಯನ್ನು ಕೇವಲ ಲೋಕಸಭೆಗೆ ಸೀಮಿತಿಗೊಳಿಸಿದೆ.ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕರ ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.

ಇಂಡಿಯಾ ಮೈತ್ರಿ ಕೇವಲ ಲೋಕಸಭೆಗಾಗಿ ಮಾತ್ರ. ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಇರುವುದಿಲ್ಲ. ಈ ವೇಳೆ ಆಯಾ ರಾಜ್ಯಗಳಲ್ಲಿನ ಮೈತ್ರಿ ಮುಂದುವರಿಯಲಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆ ಮೈತ್ರಿಯಲ್ಲಿ ಚುನಾವಣೆ ಎದುರಿಸಲಿದೆ. ಹೀಗೆ ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಅಥವಾ ಇಂಡಿಯಾ ಮೈತ್ರಿ ಪಕ್ಷಗಳ ಮೈತ್ರಿಗಳು ಅಥವಾ ಏಕಾಂಗಿ ಹೋರಾಟಗಳು ಮುಂದುವರಿಯಲಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ನಿತೀಶ್ ಕುಮಾರ್ ನಿರ್ಗಮನಕ್ಕೆ ಕಾಂಗ್ರೆಸ್ ಕಾರಣ, ಮೈತ್ರಿ ಮುರಿಯುವ ಸೂಚನೆ ನೀಡಿದ ಅಖಿಲೇಶ್!

ಜೆಡಿಯು ನಿರ್ಗಮನದ ಬಳಿಕ ಇಂಡಿಯಾ ಮೈತ್ರಿ ಒಕ್ಕೂಟದ ಸಂಖ್ಯೆ 27ಕ್ಕೆ ಕುಸಿದಿದೆ. 27 ಪ್ರಮುಖ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಲಿದೆ ಎಂದು ಕೋಲ್ಕತಾದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ. ಈ ದೇಶದಲ್ಲಿ ಬಿಜೆಪಿಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿರೋಧಿಸುತ್ತಲೇ ಬಂದಿರುವ ಹಾಗೂ ಪ್ರತಿ ಬಾರಿ ಬಿಜೆಪಿ ವಿರುದ್ದ ಹೋರಾಡಿರುವ ಏಕೈಕ ಪಕ್ಷ ಕಾಂಗ್ರೆಸ್. ಬಿಜೆಪಿ, ಆರ್‌ಎಸ್‌ಎಸ್ ಸಿದ್ದಾಂತದ ರಾಜಕೀಯವನ್ನು ಮಟ್ಟಹಾಕಲು ಇಂಡಿಯಾ ಮೈತ್ರಿ ರಚನೆಯಾಗಿದೆ ಎಂದು ರಮೇಶ್ ಹೇಳಿದ್ದಾರೆ.

ಬಿಜೆಪಿ ಆಡಳಿತದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ ಯಾತ್ರೆ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಗೆ ನೆರವಾಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಹೊಸ ಚೈತನ್ಯ ಮೂಡಿಸಿರುವ ಈ ಯಾತ್ರೆಯಲ್ಲಿ ಜನರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ದೇಶವನ್ನು ರಕ್ಷಿಸಲು ಕಾಂಗ್ರೆಸ್‌ಗೆ ಶಕ್ತಿ ತುಂಬಬೇಕು ಎಂದು ರಮೇಶ್ ಮನವಿ ಮಾಡಿದ್ದಾರೆ.

ಲೋಕಸಮರಕ್ಕೂ ಮುನ್ನ ಮೈತ್ರಿ ಠುಸ್, ಬಂಗಾಳದಲ್ಲಿ ಏಕಾಂಗಿ ಹೋರಾಟ ಘೋಷಿಸಿದ ಮಮತಾ!

ರಾಹುಲ್ ಗಾಂಧಿ ಯಾತ್ರೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಜನರು ಪಾಲ್ಗೊಳ್ಳುತ್ತಿದ್ದಾರೆ. ಇದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ ಎಂದು ಜೈರಾಂ ರಮೇಶ್ ಹೇಳಿದ್ದಾರೆ.