ದೇಶದಲ್ಲಿ ಸ್ವಾತಂತ್ರ್ಯ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ಉಗ್ರರ ಉಪಟಳ ಹೆಚ್ಚಾಗುವ ಕಾರಣ ಭಾರಿ ಭದ್ರತೆ ಒದಗಿಸಲಾಗಿದೆ. ಆದರೆ ಕಾಶ್ಮೀರದಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ. 

ಕಾಶ್ಮೀರ(ಆ.15): ಭಾರತ ಅಜಾದಿ ಕಾ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಇಂದು ಇಡೀ ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಕಾಶ್ಮೀರದಲ್ಲೂ ತ್ರಿವರ್ಣ ಧ್ವಜ ಹಾರಾಡಿದೆ. ಆದರೆ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದ ಕಾಶ್ಮೀರದಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಚದೂರ ವಲಯದಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ನಾಗರೀಕ ಗಾಯಗೊಂಡಿದ್ದಾನೆ. ಈ ದಾಳಿ ಬೆನ್ನಲ್ಲೇ ಶ್ರೀನಗರದ ಪೊಲೀಸ್ ಕಂಟ್ರೋಲ್ ರೂಂ ಮೇಲೆ ಗ್ರೆನೇಡ್ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಓರ್ವ ಪೊಲೀಸ್ ಗಾಯಗೊಂಡಿದ್ದಾರೆ. ಬದ್ಗಾಮ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡ ನಾಗರೀಕನನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ. ಇತ್ತ ಗಾಯಗೊಂಡಿರುವ ಪೊಲೀಸ್‌ನನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಎರಡೂ ವಲಯದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿದೆ. ಕಳೆದ ಮೂರು ದಿನಗಳಿಂದ ಕಾಶ್ಮೀರದಲ್ಲಿ ಸತತ ದಾಳಿ ನಡೆಯುತ್ತಿದೆ. ನಿನ್ನೆ ನಡೆದ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. 

Add Asianetnews Kannada as a Preferred SourcegooglePreferred

ಜಮ್ಮುವಿನ ಕುಲ್ಗಾಂನಲ್ಲಿ ಗ್ರೆನೇಡ್‌ ದಾಳಿ:
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಉಗ್ರರ ಗ್ರೆನೇಡ್‌ ದಾಳಿಗೆ ಪೊಲೀಸ್‌ ಪೇದೆ ಸಾವನ್ನಪ್ಪಿರುವ ಘಟನೆ ಭಾನುವಾರ(ಆ.14) ನಡೆದಿದೆ. ಶನಿವಾರ ರಾತ್ರಿ ದಕ್ಷಿಣ ಕಾಶ್ಮೀರ ಖೈಮೋಹ ಪ್ರದೇಶದಲ್ಲಿ ದಾಳಿ ನಡೆದಿದೆ. ದಾಳಿಯಲ್ಲಿ ಗಾಯಗೊಂಡಿದ್ದ ಪೇದೆ ತಾಹಿರ್‌ ಖಾನ್‌ನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೂ ತೀವ್ರ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಿಸದೇ ತಾಹಿರ್‌ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2 ದಿನಗಳ ಹಿಂದೆ ರಜೌರಿಯಲ್ಲಿ ಜೈಷ್‌ ಎ ಮೊಹ್ಮಮದ್‌ಗೆ ಸೇರಿದ ಉಗ್ರರು 4 ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದರು.

ಕಾಶ್ಮೀರಿ ಪಂಡಿತ್‌ ರಾಹುಲ್‌ ಭಟ್‌ ಹತ್ಯೆ ಮಾಡಿದ್ದ ಲಷ್ಕರ್‌ ಭಯೋತ್ಪಾದಕನ ಕೊಂದು ಹಾಕಿದ ಸೇನೆ!

ಜಮ್ಮು ಸೇನಾ ನೆಲೆಗೆ ಉಗ್ರ ದಾಳಿ: 3 ಯೋಧರು ಬಲಿ
ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಗುರುವಾರ ಜಮ್ಮುವಿನ ರಜೌರಿ ಜಿಲ್ಲೆಯ ಸೇನಾ ಕ್ಯಾಂಪ್‌ಗೆ ನುಗ್ಗಿ ಶಂಕಿತ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಉಗ್ರರು ಫಿದಾಯೀನ್‌ (ಆತ್ಮಾಹುತಿ) ದಾಳಿ ನಡೆಸಲು ಯತ್ನಿಸಿದ್ದು, ಈ ವೇಳೆ ನಡೆದ ಕಾಳಗದಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ದಾಳಿಗೆ ಬಂದಿದ್ದ ಇಬ್ಬರೂ ಉಗ್ರರನ್ನು ಸೇನಾಪಡೆಗಳು ಸದೆಬಡಿದು ಹತ್ಯೆ ಮಾಡಿವೆ. ರಜೌರಿ ಜಿಲ್ಲೆಯ ಪರ್ಘಾಲ್‌ನಲ್ಲಿ ಸೇನಾ ಕ್ಯಾಂಪ್‌ ಇದೆ. ಇಲ್ಲಿ ಗುರುವಾರ ನಸುಕಿನ ಜಾವ 2 ಗಂಟೆಗೆ ಉಗ್ರರು ಕ್ಯಾಂಪ್‌ಗೆ ನುಗ್ಗಲೆಂದು ಬಂದಿದ್ದಾರೆ. ರಜೌರಿಯಲ್ಲಿ ಈಗ ಪ್ರತಿಕೂಲ ವಾತಾವರಣ ಹಾಗೂ ದಟ್ಟಮಂಜಿನ ವಾತಾವರಣ ಇದ್ದು, ಇದನ್ನೇ ದುರ್ಬಳಕೆ ಮಾಡಿಕೊಂಡು ಗ್ರೆನೇಡ್‌ಗಳನ್ನು ಎಸೆಯುತ್ತ ಉಗ್ರರು ಕ್ಯಾಂಪ್‌ಗೆ ನುಗ್ಗಲು ಯತ್ನಿಸಿದ್ದಾರೆ. ಉಗ್ರರ ಬರುವಿಕೆಯನ್ನು ಕೂಡಲೇ ಗ್ರಹಿಸಿದ ಯೋಧರು ಉಗ್ರರಿದ್ದ ಪ್ರದೇಶವನ್ನು ಕೂಡಲೇ ಸುತ್ತುವರಿದಿದ್ದಾರೆ. ಆಗ ಉಗ್ರರು ಹಾಗೂ ಸೇನಾಪಡೆಗಳ ನಡುವೆ 4 ತಾಸು ಘೋರ ಚಕಮಕಿ ನಡೆದಿದೆ. ಚಕಮಕಿಯಲ್ಲಿ ಬೆಳಗ್ಗೆ 6.10ಕ್ಕೆ ಇಬ್ಬರೂ ಉಗ್ರರು ಹತರಾಗಿದ್ದಾರೆ.

ಯೋಧರ ಕಾಲಿಗೆರಗಿದ ಪುಟಾಣಿ: ವಿಡಿಯೋ ವೈರಲ್‌