ಸಿಧು-ಸಿಂಗ್ ಜಟಾಪಟಿ: ಸಿಎಂ ನಡೆಗೆ ಹಿರಿಯ ಸಚಿವರಿಂದಲೇ ಆಕ್ಷೇಪ!
* 60 ಶಾಸಕರಿಂದ ಸಿಧು ಪರ ‘ಬಲಪ್ರದರ್ಶನ’
* 80 ಕೈ ಶಾಸಕರ ಪೈಕಿ 60 ಶಾಸಕರಿಂದ ಸಿಧು ಭೇಟಿ
* ಇನ್ನೂ ಸಿಧು ಭೇಟಿಯಾಗದ ಅಮರೀಂದರ್
* ಸಿಎಂ ನಡೆಗೆ ಹಿರಿಯ ಸಚಿವರಿಂದಲೇ ಆಕ್ಷೇಪ
ನವದೆಹಲಿ(ಜು.22): ನವಜೋತ್ ಸಿಂಗ್ ಸಿಧು ಅವರು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕವೂ ಸಿಧು ಹಾಗು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬಣಗಳ ನಡುವೆ ‘ಸಂಘರ್ಷ’ ಮುಂದುವರಿದಿದೆ. ಸುಮಾರು 60 ಕಾಂಗ್ರೆಸ್ ಶಾಸಕರು ಬುಧವಾರ ಸಿಧು ನಿವಾಸಕ್ಕೆ ಆಗಮಿಸಿ ಭೇಟಿ ಮಾಡಿದ್ದಾರೆ. ಈ ಮೂಲಕ ಸಿಧು ಬಣವು ತನ್ನ ಬಳಿ ‘ಬಹುಮತ’ ಇದೆ ಎಂಬ ಬಲಪ್ರದರ್ಶನ ಮಾಡಿದೆ.
ಪಂಜಾಬ್ ವಿಧಾನಸಭೆಯಲ್ಲಿ 80 ಕಾಂಗ್ರೆಸ್ ಶಾಸಕರಿದ್ದಾರೆ. ಈ ಪೈಕಿ 60 ಮಂದಿ ಬಸ್ಸಿನಲ್ಲಿ ಆಗಮಿಸಿ ಸಿಧು ಭೇಟಿ ಮಾಡಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಶುಭ ಕೋರಿದ್ದು ವಿಶೇಷ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಿಧು ನೇಮಕ!
ಆದರೆ ಸಿಧು ಅಧ್ಯಕ್ಷರಾಗಿ 4 ದಿನ ಕಳೆದರೂ ಅಮರೀಂದರ್ ಅವರು ಸಿಧುರನ್ನು ಭೇಟಿ ಮಾಡಿಲ್ಲ. ‘ಸಿಧು ಈ ಹಿಂದೆ ನನ್ನ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ್ದರು. ಈ ಬಗ್ಗೆ ಅವರು ಕ್ಷಮೆ ಕೇಳದ ಹೊರತು ಭೇಟಿ ಸಾಧ್ಯವಿಲ್ಲ’ ಎಂಬುದು ಅಮರೀಂದರ್ ಪಟ್ಟು.
ಆದರೆ ಸಿಎಂ ಅವರ ಈ ನಿಲುವಿಗೆ ಸಚಿವ ಸುಖಜಿಂದರ್ ಸಿಂಗ್ ರಂಧಾವಾ ಸೇರಿದಂತೆ ಕೆಲ ಶಾಸಕರು ಆಕ್ಷೇಪಿಸಿದ್ದಾರೆ. ‘ಸಿಎಂ ಅವರ ಈ ನಡೆ ಸ್ವೀಕಾರಾರ್ಹವಲ್ಲ. ಈ ಹಿಂದಿನ ಅಧ್ಯಕ್ಷರ ಜತೆ ಭಿನ್ನಮತ ಮರೆತಂತೆ ಈ ಸಲವೂ ಅವರು ನಡೆದುಕೊಳ್ಳುತ್ತಿಲ್ಲ ಏಕೆ?’ ಎಂದು ಆಕ್ಷೇಪಿಸಿದ್ದಾರೆ. ಸಿಧು ಕ್ಷಮೆ ಕೇಳಬೇಕಿಲ್ಲ ಎಂದು ಭಾರತ ಹಾಕಿ ತಂಡದ ಮಾಜಿ ನಾಯಕನೂ ಆದ ಕಾಂಗ್ರೆಸ್ಸಿಗ ಪರ್ಗತ್ ಸಿಂಗ್ ಹೇಳಿದ್ದಾರೆ.