ದಕ್ಷಿಣದ ಈ ರಾಜ್ಯಗಳಲ್ಲಿ ಇನ್ನೆರಡು ದಿನ ಭಾರಿ ಮಳೆ, ಉತ್ತರದಲ್ಲಿ ಚಳಿ ಎಚ್ಚರಿಕೆ ನೀಡಿದ ಐಎಂಡಿ, ಎರಡು ರಾಜ್ಯಗಳಲ್ಲಿನ ಭಾರಿ ಮಳೆ ಇತರ ರಾಜ್ಯಗಳ ಮೇಲೂ ಪರಿಣಾಮ ಬೀರಲಿದೆ. ಬೆಂಗಳೂರಿನ ಹವಾಮಾನ ಏನು?
ಬೆಂಗಳೂರು (ಜ.08) ದೇಶದೆಲ್ಲಡೆ ಚಳಿ ತೀವ್ರಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದೆ. ದಕ್ಷಿಣ ಭಾರತದ ಎರಡು ರಾಜ್ಯಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ಪ್ರಮುಖವಾಗಿ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಮಳೆಯಾಗಲಿದೆ ಎಂದಿದೆ. ಆದರೆ ಇದರ ಪರಿಣಾಮ ಬೆಂಗಳೂರು ಹಾಗೂ ಕರ್ನಾಟಕದ ಮೇಲೂ ಬೀರಲಿದೆ ಎಂದಿದೆ. ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕೆಲೆವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.
ಗುಡುಗು ಸಹಿತ ಮಳೆ ಎಚ್ಚರಿಕೆ
ತಮಿಳುನಾಡು, ಪುದುಚೇರಿಗಳಲ್ಲಿ ಜನವರಿ 9 ಹಾಗೂ 10 ರಂದು ಗುಡುಗು ಸಹಿತ ಮಳೆಯಾಗಲಿದೆ. ಇನ್ನು ಜನವರಿ 10 ರಂದು ಇದರ ಪರಿಣಾಮ ಕೇರಳದ ಮೇಲೂ ಬೀರಲಿದೆ. ಹೀಗಾಗಿ ಜನವರಿ 10 ರಂದು ಕೇರಳದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಮೀನುಗಾರರಿಗೆ ಎಚ್ಚರಿಕೆ
ಶ್ರೀಲಂಕಾ ಹಾಗೂ ಬಂಗಾಳ ಕೊಲ್ಲಿಯಲ್ಲಿ ವ್ಯತಿರಿಕ್ತ ಹವಾಮಾನ ರೂಪುಗೊಂಡಿದೆ. ಭಾರಿ ಮಳೆ, ಗುಡುಗು ಹಾಗೂ ಗಾಳಿ ಇರಲಿದೆ. ಇದರಿಂದ ಜನವರಿ 8 ರಿಂದ 10 ವರಗೆಗೆ ಮೀನುಗಾರರು ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾಸಾಗರದಲ್ಲಿ ಮೀನುಗಾರಕೆ ಇಳಿಯದಂತೆ ಎಚ್ಚರಿಸಿದೆ. ಮೀನುಗಾರರು ಮಾತ್ರವಲ್ಲ, ಈ ಭಾಗದ ಕರಾವಳಿ ತೀರ ಪ್ರದೇಶದ ಜನರು ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.
ಉತ್ತರ ಭಾರತಕ್ಕೆ ಆರೇಂಜ್ ಅಲರ್ಟ್
ಉತ್ತರ ಭಾರತಕ್ಕೆ ಭಾರತೀಯ ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ನೀಡಿದೆ. ಉತ್ತರ ಭಾರತದ ಹಲವು ರಾಜ್ಯಗಳು ಅತೀವ ಚಳಿಯಿಂದ ಸಂಕಷ್ಟಕ್ಕೆ ಸಿಲುಕಲಿದೆ ಎಂದಿದೆ. ದೆಹಲಿ, ಚತ್ತೀಸಘಡ, ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ರಾಜಸ್ಥಾನ ಸೇರಿದಂತೆ ಉತ್ತರ ಹಲವು ರಾಜ್ಯಗಳು ವಿಪರೀತ ಚಳಿಯಿಂದ ನಡುಗಲಿದೆ ಎಂದಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಿದೆ. ಇನ್ನು ಅಸ್ಸಾಂ, ಮೆಘಾಲಯ ಹಾಗೂ ಉತ್ತರಖಂಡದಲ್ಲೂ ಭಾರಿ ಚಳ ಇರಲಿದೆ ಎಂದಿದೆ.
ಮಂಜಿನಿಂದ ಗೋಚರ ಸಮಸ್ಯೆ
ದಟ್ಟವಾದ ಮಂಜು ಆವರಿಸುವ ಕಾರಣ ಗೋಚರತೆ ಇರುವುದಿಲ್ಲ. ಹೀಗಾಗಿ ವಾಹನ ಸವಾರರು, ಪಾದಾಚಾರಿಗಳು ಅತೀವ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮಂಜಿನ ಪ್ರಮಾಣ ಹೆಚ್ಚಾಗಿದೆ. ಜೊತೆಗೆ ಮೋಡ ಕವಿದ ವಾತಾವರಣ ಇರುವ ಹಲೆವೆಡೆ ಗೋಚರತೆ ಇರುವುದಿಲ್ಲ. ಹೀಗಾಗಿ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.


