ರಾಜಸ್ಥಾನದ ಭರತ್‌ ಪುರದ ಡೀಗ್‌ನಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಅಂದಾಜು 2 ವರ್ಷಗಳಿಂದ  ನಡೆಸುತ್ತಿದ್ದ ಪ್ರತಿಭಟನೆ ಬುಧವಾರ ತಾರಕಕ್ಕೇರಿದೆ. ಪ್ರತಿಭಟನೆ ನಡೆಸುತ್ತಿದ್ದ ಸ್ವಾಮೀಜಿ ವಿಜಯ್‌ ದಾಸ್‌ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿಡಿಯೋ ವೈರಲ್ ಆಗಿದೆ.

ಜೈಪುರ (ಜುಲೈ 20): ರಾಜಸ್ಥಾನದ ಭರತ್‌ಪುರದ ಡೀಗ್‌ನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸುವಂತೆ ನಡೆಯುತ್ತಿರುವ ಪ್ರತಿಭಟನೆ ಬುಧವಾರ ತಾರಕಕ್ಕೇರಿದೆ. ಪ್ರತಿಭಟನಾ ನಿರತ ಸ್ವಾಮೀಜಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಂಗಳವಾರ ಕೂಡ ಇದೇ ಪ್ರದೇಶದಲ್ಲಿ ಒಬ್ಬ ಸ್ವಾಮೀಜಿ ಮೊಬೈಲ್‌ ಟವರ್‌ ಏರಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು. ಪೊಲೀಸರು ಶಾಂತಿ ಮಾತುಕತೆ ನಡೆಸಿದ ಬಳಿಕ ಆ ಸ್ವಾಮೀಜಿ ಮೊಬೈಲ್‌ ಟವರ್‌ನಿಂದ ಕೆಳಗಿಳಿದಿದ್ದರು. ಬುಧವಾರ ಪ್ರತಿಭಟನಾ ಸ್ಥಳದಿಂದ ದೂರ ನಿಂತಿದ್ದ ಸಾಧು ವಿಜಯ್ ದಾಸ್ ಇಂದು ಇದ್ದಕ್ಕಿದ್ದಂತೆ ಬೆಂಕಿ ಹಚ್ಚಿಕೊಂಡರು. ಬೆಂಕಿಯನ್ನು ನಂದಿಸಲು ಪೋಲೀಸ್ ತಂಡ ಕಂಬಳಿಗಳೊಂದಿಗೆ ಅವರ ಬಳಿಗೆ ಧಾವಿಸಿತು. ಸಾಧು ಅವರನ್ನು ಭರತ್‌ಪುರಕ್ಕೆ ರವಾನಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಖೋಹ್ ಎಸ್‌ಎಚ್‌ಒ ವಿನೋದ್ ಕುಮಾರ್ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಅವರ ಸ್ಥಿತಿ ಚೇತರಿಕೆ ಕಾಣುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ, ಭರತ್‌ಪುರದ ಡೀಗ್‌ನಲ್ಲಿ ಹೈ-ವೋಲ್ಟೇಜ್ ಡ್ರಾಮಾ ಇಲ್ಲಿ ನಡೆದಿತ್ತು. ಸ್ವಾಮೀಜಿ ನಾರಾಯಣ ದಾಸ್ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಮೊಬೈಲ್ ಟವರ್ ಮೇಲೆ ಹತ್ತಿದ್ದರು. 

Add Asianetnews Kannada as a Preferred SourcegooglePreferred

ರಾಹುಲ್‌ ಗಾಂಧಿ ವಿರುದ್ಧ ಕಿಡಿ: ನಾರಾಯಣ ದಾಸ್ ಮತ್ತು ಇತರ ಕೆಲವು ಸ್ವಾಮೀಜಿಗಳು ಕಳೆದ ಅಂದಾಜು 2 ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಿಷೇಧಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ. "ರಾಜಸ್ಥಾನದ ಭರತ್‌ಪುರದಲ್ಲಿ ಸಾಧು ಸಂತರು 551 ದಿನಗಳಿಂದ ಅಕ್ರಮ ಗಣಿಗಾರಿಕೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಇಂದು ಸಾಧು ವಿಜಯ್ ದಾಸ್ ಬೆಂಕಿ ಹಚ್ಚಿಕೊಂಡಿದ್ದಾರೆ. ಆದರೆ, ನಮ್ಮ ವ್ಯವಸ್ಥೆ ಇಂಥದ್ದರ ವಿರುದ್ಧ ಯಾವತ್ತಿಗೂ ಮೌನ ತಾಳುತ್ತದೆ. ಗ್ಲೆಹೊಟ್‌ ಸರ್ಕಾರಕ್ಕೆ ನಾಚಿಕೆ ಇಲ್ಲ. ರಾಹುಲ್‌ ಗಾಂಧಿ ಈ ಭ್ರಷ್ಟಾಚಾರದ ಬಗ್ಗೆ ಒಂದು ಮಾತನ್ನೂ ಹೇಳೋದಿಲ್ಲ. ಯಾಕೆಂದರೆ, ಅವರಿಗೆ ಹಿಂದು ಸಂತರ ಜೀವ-ಜೀವನ ಬೇಕಾಗಿಲ್ಲ' ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಟ್ವೀಟ್‌ ಮಾಡಿದ್ದಾರೆ.

Scroll to load tweet…