ಒತ್ತಡಕ್ಕೆ ಮಣಿದು ಬಿಹಾರ ಮುಖ್ಯಮಂತ್ರಿ ಆದೆ: ನಿತೀಶ್‌| ಸಿಎಂ ಆಗಲು ನನಗೆ ಮನಸ್ಸಿರಲಿಲ್ಲ

ಪಟನಾ(ಡಿ.29): ‘ನನಗೆ ಮುಖ್ಯಮಂತ್ರಿ ಆಗಲು ಮನಸ್ಸಿರಲಿಲ್ಲ. ಬಿಜೆಪಿಗೆ ಅದರದ್ದೇ ಆದ ಮುಖ್ಯಮಂತ್ರಿ ನೇಮಿಸಲು ಅವಕಾಶವಿತ್ತು. ಆದರೆ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಆದೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಬಿಹಾರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಜೆಡಿಯುಗೆ ಕಮ್ಮಿ ಸ್ಥಾನ ಬಂದ ಕೂಡಲೇ ನಿತೀಶ್‌ ಸಿಎಂ ಆಗಲು ಹಿಂದೇಟು ಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿಗಳನ್ನು ನಿತೀಶ್‌ ದೃಢೀಕರಿಸಿದ್ದಾರೆ.

ಇದನ್ನು ಖಚಿತಪಡಿಸಿದ ಬಿಜೆಪಿ ಮುಖಂಡ ಸುಶೀಲ್‌ ಮೋದಿ, ‘ನಿತೀಶ್‌ಗೆ ಹೊಣೆ ಹೊರುವ ಮನಸ್ಸಿರಲಿಲ್ಲ. ಆದರೆ ಬಿಜೆಪಿ-ಜೆಡಿಯು ನಿತೀಶ್‌ ಹೆಸರಲ್ಲಿ ಒಗ್ಗೂಡಿ ಕಣಕ್ಕಿಳಿದಿದ್ದವು. ಹಾಗಾಗಿ ಅವರನ್ನು ಮನವೊಲಿಸಿದೆವು. ರಾಜ್ಯ ಸರ್ಕಾರ 5 ವರ್ಷ ಪೂರೈಸಲಿದೆ’ ಎಂದು ಹೇಳಿದ್ದಾರೆ.

ಲವ್‌ ಜಿಹಾದ್‌ ಕಾಯ್ದೆ ಬಗ್ಗೆ ಗರಂ:

ಬಿಜೆಪಿ ರಾಜ್ಯಗಳಲ್ಲಿ ಜಾರಿಗೆ ಬರುತ್ತಿರುವ ಲವ್‌ ಜಿಹಾದ್‌ ಕಾಯ್ದೆ ಹಾಗೂ ಅರುಣಾಚಲ ಪ್ರದೇಶದಲ್ಲಿ ತನ್ನ 6 ಶಾಸಕರನ್ನು ಬಿಜೆಪಿ ಸೆಳೆದ ಬಗ್ಗೆ ಮಿತ್ರಪಕ್ಷ ಜೆಡಿಯು ಅತೃಪ್ತಿ ವ್ಯಕ್ತಪಡಿಸಿದೆ. ‘ಅಂತರ್‌ ಧರ್ಮೀಯ ಮದುವೆ ಎಂಬುದು ಇಬ್ಬರ ಪ್ರಾಪ್ತ ವಯಸ್ಕರ ವೈಯಕ್ತಿಕ ಆಯ್ಕೆ. ಈ ವಿಷಯದಲ್ಲಿ ದ್ವೇಷದ ವಾತಾವರಣ ಸೃಷ್ಟಿಸಬಾರದು’ ಎಂದು ಪಕ್ಷದ ಮುಖಂಡ ಕೆ.ಸಿ. ತ್ಯಾಗಿ ಹೇಳಿದ್ದಾರೆ. ಇನ್ನು ‘ಅರುಣಾಚಲ ವಿದ್ಯಮಾನವು ಮೈತ್ರಿ ರಾಜಕೀಯಕ್ಕೆ ಒಳ್ಳೇದಲ್ಲ’ ಎಂದು ಅವರು ಕಿಡಿಕಾರಿದ್ದಾರೆ.