ಅಸ್ಸಾಂ-ಮಿಜೋರಂ ಗಡಿ ಸಂಘರ್ಷ: ಶತಮಾನಗಳ ಹಿಂದಿನ ಗಡಿ ವಿವಾದಕ್ಕೆ ಸಿಕ್ಕಿಲ್ಲ ಮುಕ್ತಿ!
* ಶತಮಾನಗಳ ಹಿಂದಿನ ಗಡಿ ವಿವಾದಕ್ಕೆ ಇನ್ನೂ ಸಿಕ್ಕಿಲ್ಲ ಮುಕ್ತಿ
* ಅಸ್ಸಾಂ-ಮಿಜೋರಂ ಮಧ್ಯೆ ಗಡಿ ಸಂಘರ್ಷ ಏಕೆ?
ನವದೆಹಲಿ(ಜು.29): ಭಾರತದಲ್ಲಿ ಅಂತರ್ ರಾಜ್ಯ ಗಡಿ ವಿವಾದಗಳು ಹೊಸದಲ್ಲ. ಭಾಷಾವಾರು, ಹಂಚಿಕೆ ನದಿ ಹಂಚಿಕೆ, ಗಡಿಯ ಗುರುತಿಸುವಿಕೆಗೆ ಸಂಬಂಧಿಸಿದಂತೆ ಒಂದಿಲ್ಲೊಂದು ರಾಜ್ಯಗಳ ಮಧ್ಯೆ ವಿವಾದಗಳು ನಡೆಯುತ್ತಲೇ ಇವೆ. ಆದರೆ, ಅಸ್ಸಾಂ ಮತ್ತು ಮಿಜೋರಂ ಮಧ್ಯೆ ಉಂಟಾಗಿರುವ ಗಡಿ ವಿವಾದ ವಿಕೋಪಕ್ಕೆ ತಿರುಗಿದೆ. ಕಳೆದೊಂದು ವಾರದಿಂದ ಗಡಿಯಲ್ಲಿ ಹಿಂಸಾಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಏನಿದು ಗಡಿ ವಿವಾದ? ಅದು ಹಿಂಸಾಚಾರ ಸ್ವರೂಪಕ್ಕೆ ತಿರುಗಿದ್ದೇಕೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.
ಅಸ್ಸಾಂ-ಮಿಝೋರಾಮ್ ಗಡಿ ಜಗಳ: 5 ಜನ ಪೊಲೀಸರು ಸಾವು
ಏನಿದು ವಿವಾದ?
ಅಸ್ಸಾಂ ಮತ್ತು ಮಿಜೋರಂ ಮಧ್ಯೆ ಗಡಿ ವಿವಾದ ಬ್ರಿಟಿಷರ ವಸಾಹತುಶಾಹಿ ಕಾಲದಿಂದಲೂ ಇದೆ. 1875ರಲ್ಲಿ ಹೊರಡಿಸಲಾದ ಅಧಿಸೂಚನೆಯಂತೆ ಮಿಜೋರಂಗೆ ಹೊಂದಿಕೊಂಡ ಲುಶೈ ಬೆಟ್ಟಗಳನ್ನು ಅಸ್ಸಾಂನ ಕ್ಯಾಚರ್ ಬಯಲು ಪ್ರದೇಶಗಳಿಂದ ಪ್ರತ್ಯೇಕಿಸಲಾಗಿತ್ತು. ಆದರೆ, 1993ರಲ್ಲಿ ಲುಶೈ ಬೆಟ್ಟಗಳು ಮತ್ತು ಮಣಿಪುರದ ನಡುವಿನ ಗಡಿಯನ್ನು ಗುರುತಿಸುವ ಇನ್ನೊಂದು ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಿಜೋರಂ 1875ರ ಅಧಿಸೂಚನೆಯ ಆಧಾರದ ಮೇಲೆ ಗಡಿಯನ್ನು ಗುರುತಿಸಬೇಕು ಎಂದು ಪ್ರತಿಪಾದಿಸಿಕೊಂಡು ಬಂದಿದೆ. 1933ರಲ್ಲಿ ಹೊರಡಿಸಲಾದ ಅಧಿಸೂಚನೆ ಮಿಜೋ ಸಮಾಜವನ್ನು ಸಂಪರ್ಕಿಸುವುದಿಲ್ಲ ಎಂದು ಮಿಜೋ ಮುಖಂಡರು ಆರೋಪಿಸುತ್ತಾ ಬಂದಿದ್ದಾರೆ. ಆದರೆ, ಮತ್ತೊಂದೆಡೆ ಅಸ್ಸಾಂ ಸರ್ಕಾರ 1933ರ ಅಧಿಸೂಚನೆಯನ್ನು ಅನುಸರಿಸುತ್ತಿದೆ. ಇದರ ಪರಿಣಾಮವಾಗಿ ಎರಡೂ ರಾಜ್ಯಗಳು ಗಡಿಯ ಬಗ್ಗೆ ವಿಭಿನ್ನವಾದ ಗ್ರಹಿಕೆಯನ್ನು ಹೊಂದಿವೆ. ಇದು ಸಂಘರ್ಷಕ್ಕೂ ಎಡೆ ಮಾಡಿಕೊಟ್ಟಿದೆ.
ಅತಿ ಸುದೀರ್ಘ ಗಡಿ ವಿವಾದ
ಬ್ರಿಟಿಷರ ಆಳ್ವಿಕೆಯ ವೇಳೆ ಮಿಜೋರಂ ಅನ್ನು ಲುಶೈ ಹಿಲ್ಸ್ ಡಿಸ್ಟ್ರಿಕ್ಟ್ ಎಂದು ಕರೆಯಲಾಗುತ್ತಿತ್ತು. 1954ರಲ್ಲಿ ಅದನ್ನು ಮಿಜೋ ಹಿಲ್ಸ್ ಡಿಸ್ಟ್ರಿಕ್ಟ್ ಎಂದು ಮರು ನಾಮಕರಣ ಮಾಡಲಾಯಿತು. 1972ರಲ್ಲಿ ಮಿಜೋ ಹಿಲ್ಸ್ ಕೇಂದ್ರಾಡಳಿತ ಪ್ರವೇಶವಾಗಿತ್ತು. 1987ರಲ್ಲಿ ಮಿಜೋರಂಗೆ ರಾಜ್ಯದ ಸ್ಥಾನಮಾನ ಲಭ್ಯವಾಯಿತು. 1950ರಲ್ಲಿಯೇ ಅಸ್ಸಾಂ ರಾಜ್ಯದ ಸ್ಥಾನಮಾನವನ್ನು ಪಡೆದುಕೊಂಡಿತ್ತು. ಹೀಗಾಗಿ ಅದು ತನ್ನ ಗಡಿಯನ್ನು ಭದ್ರಪಡಿಸಿಕೊಂಡಿದೆ. ತದನಂತರದ ವರ್ಷಗಳಲ್ಲಿ ಮಿಜೋರಂ ಪ್ರತ್ಯೇಕ ರಾಜ್ಯವಾದಾಗಿನಿಂದಲೂ ಗಡಿ ಸಂಘರ್ಷಗಳು ವರದಿ ಆಗುತ್ತಲೇ ಇದೆ. 1995ರಿಂದ ಗಡಿ ವಿವಾದ ಬಗೆಹರಿಸಲು ಮಾತುಕತೆಗಳು ನಡೆಯುತ್ತಿದೆ. ಆದರೆ, ಇವೆರಡು ರಾಜ್ಯಗಳ ಶತಮಾನಗಳ ಹಿಂದಿನ ಗಡಿ ವಿವಾದ ಇನ್ನೂ ಬಗೆಹರಿದಿಲ್ಲ.
ಅಸ್ಸಾಂ-ಮಿಜೋರಾಂ ಘಡಿ ಸಂಘರ್ಷ; ಕಲ್ಲು ತೂರಾಟ, ಹಿಂಸಾಚಾರಕ್ಕೆ 6 ಪೊಲೀಸರು ಬಲಿ!
ಭೌಗೋಳಿಕವಾಗಿ ಗಡಿಯ ಬಗ್ಗೆ ಗೊಂದಲ
ಅಸ್ಸಾಂ ಮತ್ತು ಮಿಜೋರಂ ಅನ್ನು ಬೇರ್ಪಡಿಸುವ 164 ಕಿ.ಮೀ. ಅಂತರ್ ರಾಜ್ಯ ಗಡಿ ಇದ್ದು, ಅಸ್ಸಾಂನ ಕ್ಯಾಚರ್, ಹೈಲಕಂಡಿ ಮತ್ತು ಕರೀಂಗಂಜ್ ಜಿಲ್ಲೆಗಳು ಮಿಜೋರಂನ ಕೋಲಾಸಿಬ್ ಮಾಮಿತ್ ಮತ್ತು ಐಜ್ವಾಲ್ ಜಿಲ್ಲೆಗಳೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಮಿಜೋರಂ ಮತ್ತು ಅಸ್ಸಾಂ ನಡುವಿನ ಗಡಿಯು ಬೆಟ್ಟಗಳು, ಕಣಿವೆಗಳು ನದಿಗಳು ಮತ್ತು ಕಾಡುಗಳಂತಹ ನೈಸರ್ಗಿಕ ಅಡೆತಡೆಗಳನ್ನು ಹೊಂದಿವೆ. ಹೀಗಾಗಿ ಎರಡು ರಾಜ್ಯಗಳ ಗಡಿಯನ್ನು ಪ್ರತ್ಯೇಕಿಸಲು ನಿಖರವಾದ ಗಡಿರೇಖೆ ಇಲ್ಲ. ಕಾಲ್ಪನಿಕವಾಗಿ ಎರಡೂ ಕಡೆವರು ತಮ್ಮ ಗಡಿಗಳನ್ನು ಗುರುತಿಸಿಕೊಂಡಿದ್ದಾರೆ. ಇದು ಕೂಡ ಗಡಿ ಸಂಘರ್ಷಕ್ಕೆ ಪ್ರಮುಖ ಕಾರಣ.
ಹೆಚ್ಚು ಮಕ್ಕಳು ಇದ್ದವರಿಗೆ 1 ಲಕ್ಷ ರೂ. ನಗದು, ಟ್ರೋಪಿ!
ಈಗಿನ ಸಂಘರ್ಷಕ್ಕೆ ಏನು ಕಾರಣ?
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮತ್ತು ಮಿಜೋರಂ ಮಧ್ಯೆ ನಿರಂತಂತರ ಸಂಘರ್ಷಗಳು ಸಂಭವಿಸುತ್ತಲೇ ಇವೆ. 2020ರ ಆಗಸ್ಟ್ನಲ್ಲಿ ಉಂಟಾದ ಸಂಘರ್ಷ ವೇಳೆ ಮಿಜೋರಂ ಗಡಿಯಲ್ಲಿರುವ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದರು. ಬಳಿಕ ಈ ವರ್ಷದ ಫೆಬ್ರವರಿಯಲ್ಲಿ ಸಂಘರ್ಷಗಳು ಏರ್ಪಟ್ಟಿದ್ದವು. ಇತ್ತೀಚೆಗೆ ಮಿಜೋರಂ ದುಷ್ಕರ್ಮಿಗಳು ಅಸ್ಸಾಂನ ಕ್ಯಾಚರ್ ಜಿಲ್ಲೆಯೊಳಗೆ ಐಇಡಿ ಬಾಂಬ್ಗಳನ್ನು ಸ್ಛೋಟಿಸಿದ್ದರು. ಇದು ಮತ್ತೊಮ್ಮೆ ಸಂಘರ್ಷ ಭುಗಿಲೇಳುವಂತೆ ಮಾಡಿದೆ. ಮಿಜೋರಂ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ 6 ಮಂದಿ ಪೊಲೀಸರು ಸಾವಿಗೀಡಾಗಿದ್ದಾರೆ. ಮಿಜೋರಂನಿಂದ ಬಂದ ದುಷ್ಕರ್ಮಿಗಳು ಕಲ್ಲುತೂರಾಟದಲ್ಲಿ ಭಾಗಿಯಾಗಿದ್ದಾರೆ ಮತ್ತು ಅಸ್ಸಾಂ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಸ್ಸಾಂ ಪೊಲೀಸರು ಆರೋಪಿಸಿದ್ದಾರೆ. ಆದರೆ, ಅಸ್ಸಾಂ ಸರ್ಕಾರವು, ಪೊಲೀಸ್ ಪಡೆಯನ್ನು ಬಳಸಿ ಗಡಿ ಭಾಗದ ಜನರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಮಿಜೋರಂ ಆರೋಪಿಸಿದೆ.