ನೆರವು ನೀಡಿದ ಹೈದರಾಬಾದ್ ಪೊಲೀಸ್ಗೆ ಕಾದಿತ್ತು ಅಚ್ಚರಿ; ಅಭಿನಂದಿಸಿದ ಹಿಮಾಚಲ ರಾಜ್ಯಪಾಲ, ಮುಖ್ಯಮಂತ್ರಿ!
ಹೈದರಾಬಾದ್ ಪೊಲೀಸ್ ಇನ್ಸ್ಪೆಕ್ಟರ್ ಕೊರೋನಾ ವೈರಸ್ ಲಾಕ್ಡೌನ್ ಕರ್ತವ್ಯದ ನಡುವೆ ಮಾನವೀಯತೆ ಮೆರೆದಿದ್ದರು. ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದ ವ್ಯಕ್ತಿಯನ್ನು ಆಸ್ಪತ್ರೆ ದಾಖಲಿಸಿದ್ದರು. ಇಷ್ಟೇ ಅಲ್ಲ ಗುಣಮುಖರಾಗುವ ವರೆಗೂ ಎಲ್ಲಾ ಜವಾಬ್ದಾರಿ ನಿರ್ವಹಿಸಿದ್ದರು. ಮನೆಗೆ ಹಿಂತಿರುಗಿದಾಗ ಇನ್ಸ್ಪೆಕ್ಟರ್ಗೆ ಅಚ್ಚರಿ ಕಾದಿತ್ತು. ಕಾರಣ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರೇ ಅಭಿನಂದನೆ ಸಲ್ಲಿಸಿದ್ರು. ಪೊಲೀಸ್ ಇನ್ಸ್ಪೆಕ್ಟರ್ ನೆರವಿನ ಕುರಿತ ರೋಚಕ ಮಾಹಿತಿ ಇಲ್ಲಿದೆ.
ಹೈದರಾಬಾದ್(ಏ.24): ಕೊರೋನಾ ಲಾಕ್ಡೌನ್ ಕಾರಣ ಹಲವರ ಸಾಮಾಜಿಕ ಕಳಕಳಿ, ಸಮಾಜ ಸೇವೆ ಬೆಳಕಿಗೆ ಬರುತ್ತಿಲ್ಲ. ಜೊತೆಗೆ ಸರ್ಕಾರಕ್ಕೆ ವೈರಸ್ ನಿಯಂತ್ರಿಸುವುದೇ ಬಹು ದೊಡ್ಡ ಕೆಲಸವಾಗಿದೆ. ಇದರು ನಡುವೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಮಹತ್ ಕಾರ್ಯವನ್ನು ಗುರುತಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಅದು ಕೂಡ ಹೈದರಾಬಾದ್ ಪೊಲೀಸ್ ಇನ್ಸ್ಪೆಕ್ಟರ್ ಬಿಎಲ್ ಲಕ್ಷ್ಮಿನಾರಾಯಣ ರೆಡ್ಡಿಗೆ. ಹಿಮಾಚಲ ಪ್ರದೇಶ ಎಲ್ಲಿ? ಹೈದರಾಬಾದ್ ಎಲ್ಲಿ ಅಂತ ಕನ್ಫ್ಯೂಸ್ ಆಗ್ಬೇಡಿ. ಮುಂದೆ ಓದಿ.
ಕೊರೋನಾ ವೈರಸ್ ಲಾಕ್ಡೌನ್ ಕಾರಣ ಯಾವ ವಾಹನ ಸೇವೆ ಲಭ್ಯವಿಲ್ಲ. ಈ ವೇಳೆ ಹಿಮಾಚಲ ಪ್ರದೇಶದ ವ್ಯಕ್ತಿ ಲಲಿತ್ ಕುಮಾರ್ಗೆ ತುರ್ತು ಚಿಕಿತ್ಸೆ ಅಗತ್ಯವಿದೆ ಅನ್ನೋ ಸಂದೇಶ ಪೊಲೀಸ್ ಠಾಣೆಗೆ ಬಂದಿದೆ. ಮನೆಯಲ್ಲಿ ಒಬ್ಬನೆ ಇರುವ ಲಲಿತ್ ಕುಮಾರ್ ತನ್ನನ್ನು ತಕ್ಷಣವೇ ಆಸ್ಪತ್ರೆ ದಾಖಲಿಸುವಂತೆ ಪೊಲೀಸ್ ಠಾಣೆಗೆ ಸಂದೇಶ ಕಳುಹಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಬಿಎಲ್ ಲಕ್ಷ್ಮಿನಾರಾಯಣ ರೆಡ್ಡಿ ಪೊಲೀಸ್ ವಾಹನ ಏರಿ ನೇರವಾಗಿ ಲಲಿತ್ ಕುಮಾರ್ ಮನೆಗೆ ತೆರಳಿ ಪೊಲೀಸ್ ವಾಹನದಲ್ಲೇ ಹಿಮಾಚಲ ಪ್ರದೇಶದ ವ್ಯಕ್ತಿಯನ್ನು ಆಸ್ಪತ್ರೆ ದಾಖಲಿಸಿದ್ದರು.
ಇಷ್ಟೇ ಅಲ್ಲ ಲಾಕ್ಡೌನ್ ಕಾರಣ ಹಿಮಾಚಲ ಪ್ರದೇಶದ ಲಲಿತ್ ಕುಮಾರ್ ಬಳಿ ಹಣವಿರಲಿಲ್ಲ. ಗುಣಮುಖರಾದ ಲಲಿತ್ ಕುಮಾರ್ ಬಿಲ್ ಪಾವತಿ ಕಷ್ಟವಾಗಿತ್ತು. ಹೀಗಾಗಿ ಬಿಎಲ್ ಲಕ್ಷ್ಮಿನಾರಾಯಣ ರೆಡ್ಡಿ ತಾವೇ ಆಸ್ಪತ್ರೆಯ ಬಿಲ್ 20,000 ರೂಪಾಯಿ ಪಾವತಿ ಮಾಡಿದ್ದರು.
ನೆರವು ನೀಡಿದ ಬಳಿಕ ಎಲ್ಲೂ ಈ ವಿಚಾರವನ್ನು ಇನ್ಸ್ಪೆಕ್ಟರ್ ಬಿಎಲ್ ಲಕ್ಷ್ಮಿನಾರಾಯಣ ರೆಡ್ಡಿ ಹೇಳಿಕೊಂಡಿಲ್ಲ. ತಮ್ಮ ಪಾಡಿದೆ ಕೊರೋನಾ ಲಾಕ್ಡೌನ್ ಕಾರ್ಯದಲ್ಲಿ ತೊಡಗಿದ್ದಾರೆ. ಎಂದಿನಂತೆ ಡ್ಯೂಟಿ ಮುಗಿಸಿ ಮನೆಗೆ ಬಂದಾಗ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅಭಿನಂದನಾ ಪತ್ರ ಮನೆ ಸೇರಿದೆ. ಇಷ್ಟೇ ಅಲ್ಲ ರಾಜ್ಯಪಾಲ ಬಂದಾರು ದತ್ತಾತ್ರೆಯ ಕರೆ ಮಾಡಿ ಬಿಎಲ್ ಲಕ್ಷ್ಮಿನಾರಾಯಣ ರೆಡ್ಡಿ ಜೊತೆ ಮಾತನಾಡಿದ್ದಾರೆ. ಮಾನವೀಯತೆಯನ್ನು ಶ್ಲಾಘಿಸಿದ್ದಾರೆ. ಎಲ್ಲರಿಗೂ ಸ್ಪೂರ್ತಿ ಎಂದಿದ್ದಾರೆ.