ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಉಂಟಾದ ದುರಂತದಲ್ಲಿ 11 ತಿಂಗಳ ಮಗು ಪವಾಡಸದೃಶವಾಗಿ ಬದುಕುಳಿದಿದೆ. ಮಗುವಿನ ಕುಟುಂಬದವರೆಲ್ಲರೂ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಹಾಗೂ ಮೇಘಸ್ಪೋಟದಿಂದಾಗಿ ಉಂಟಾದ ಪ್ರವಾಹದಿಂದ ಅನೇಕರ ಬದುಕು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಅನೇಕರು ಈ ಪ್ರಕೃತಿ ವೈಪರೀತ್ಯದಲ್ಲಿ ಜೀವ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ತಮ್ಮ ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ಅನಾಹುತದಲ್ಲಿ 11 ತಿಂಗಳ ಹೆಣ್ಣು ಮಗುವೊಂದರ ಕುಟುಂಬ ಸದಸ್ಯರೆಲ್ಲರೂ ಸಾವನ್ನಪ್ಪಿದ್ದು ಮಗು ಮಾತ್ರ ಬದುಕುಳಿದಿದೆ.
ಆದರೆ ಇದ್ಯಾವುದರ ಅರಿವಿಲ್ಲದ 11 ತಿಂಗಳ ಪುಟ್ಟ ಮಗು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಎಸ್ಡಿಎಂ(Sub-Divisional Magistrate)ಅವರು ಮಗುವನ್ನು ಎತ್ತಿಕೊಂಡಾಗ ಖುಷಿಯಿಂದ ಆಟವಾಡುತ್ತಿದ್ದು, ಈ ವೀಡಿಯೋ ಈಗ ನೋಡುಗರನ್ನು ಭಾವುಕರನ್ನಾಗಿಸಿದೆ. 11 ವರ್ಷದ ನಿಕಿತಾ ಈ ಪ್ರವಾಹ ದುರಂತದಲ್ಲಿ ಪವಾಡ ಸದೃಶವಾಗಿ ಪಾರಾದ ಮಗು. ಜೂನ್ 30ರಂದು ರಾತ್ರಿ ಸುರಿದ ಮಳೆಗೆ ಈ ಮಗುವಿನ ಅಪ್ಪ ಅಮ್ಮ, ಅಜ್ಜಿ ಎಲ್ಲರೂ ಪ್ರಾಣ ಬಿಟ್ಟಿದ್ದು, ಮಗು ಮಾತ್ರ ಬದುಕುಳಿದಿದೆ. ಹಿಮಾಚಲ ಪ್ರದೇಶದ ಸಿರಾಜ್ ವಿಧಾನಸಭಾ ಕ್ಷೇತ್ರದಲ್ಲಿ ಘಟನೆ ನಡೆದಿದೆ.
ಆದರೆ ಈ ಪ್ರವಾಹ ದುರಂತದಲ್ಲಿ ತನ್ನವರೆಲ್ಲರೂ ಹೊರಟು ಹೋಗಿದ್ದಾರೆ ಎಂಬುದರ ಅರಿವು ಮಗುವಿಗಿರಲಿಲ್ಲ. ಅಧಿಕಾರಿಗಳ ಪ್ರಕಾರ, ಮಗು ನಿಖಿತಾಳ ತಂದೆ ರಮೇಶ್ ಹಾಗೂ ತಾಯಿ ರಾಧೆ ಹಾಗೂ ಅಜ್ಜಿ ಪುರ್ನು ದೇವಿ ಅವರು ಜೋರಾಗಿ ಸುರಿಯುವ ಮಳೆಯ ನಡುವೆ ತಮ್ಮ ಮನೆಯ ಹಿಂದೆ ಉಕ್ಕಿ ಹರಿಯುತ್ತಿದ್ದ ನೀರನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ನೀರಿನ ಪ್ರಮಾಣ ಒಮ್ಮಿಂದೊಮ್ಮೆಲೆ ಹೆಚ್ಚಾಗಿದ್ದು, ಮೂವರು ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.
ಆದರೆ ಮನೆಯೊಳಗೆ ಮಲಗಿದ್ದ 11 ತಿಂಗಳ ಮಗು ನಿಖಿತಾ ಸುರಕ್ಷಿತವಾಗಿ ಬದುಕುಳಿದಿದ್ದಾಳೆ. ಹಾಗೂ ಮಗುವಿದ್ದ ಮನೆಯೂ ಪ್ರವಾಹಕ್ಕೆ ಸಿಕ್ಕರೂ ಯಾವುದೇ ತೊಂದರೆಗೊಳಗಾಗದೇ ಗಟ್ಟಿಯಾಗಿ ನಿಂತಿದೆ. ಪ್ರವಾಹದಲ್ಲಿ ಕೊಚ್ಚಿ ಹೋದ ನಿಕಿತಾ ತಂದೆ ರಮೇಶ್ ಶವ ಸಿಕ್ಕಿದ್ದು, ಆದರೆ ನಿಕಿತಾ ತಾಯಿ ರಾಧಾ ಹಾಗೂ ಅಜ್ಜಿ ಪುರ್ಣು ದೇವಿ
ಶವ ಇನ್ನೂ ಸಿಕ್ಕಿಲ್ಲ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ.
ಇತ್ತ ದುರಂತದಲ್ಲಿ ಎಲ್ಲರನ್ನು ಕಳೆದುಕೊಂಡು ತಬ್ಬಲಿಯಾದ ಮಗುವಿನ ಸ್ಥಿತಿಗೆ ಅನೇಕರು ಭಾವುಕರಾಗಿದ್ದು, ಅನೇಕರು ಮಗುವನ್ನು ತಾವು ದತ್ತು ಪಡೆದು ಸಾಕುವುದಾಗಿ ಹೇಳಿಕೊಂಡು ಸ್ಥಳೀಯಾಡಳಿತದ ಮುಂದೆ ಬಂದಿದ್ದಾರೆ. ಆದರೆ ಪ್ರಸ್ತುತ ನಿಖಿತಾ ಪ್ರಸ್ತುತ ತನ್ನ ಅತ್ತೆ ಎಂದರೆ ಆಕೆಯ ತಂದೆಯ ಸೋದರಿಯ ಆರೈಕೆಯಲ್ಲಿದ್ದಾರೆ.
ನಿಖಿತಾಳನ್ನು ತಾವು ದತ್ತು ಪಡೆದುಕೊಳ್ಳುವುದಾಗಿ ಹೇಳಿಕೊಂಡು ನೂರಾರು ಜನ ಮುಂದೆ ಬಂದಿದ್ದು, ಕೆಲವರು ಕರೆ ಮಾಡಿಯೂ ಕೇಳುತ್ತಿದ್ದಾರೆ ಎಂಬ ವಿಚಾರವನ್ನು ಗೋಹರ್ನ ಎಸ್ಡಿಎಂ ಸಮ್ರಿತಿಕಾ ನೇಗಿ ಖಚಿತಪಡಿಸಿದ್ದಾರೆ. ನಿಕಿತಾ ಮುದ್ದಾದ ಮಗು, ನನ್ನ ಭೇಟಿ ಸಮಯದಲ್ಲಿ ನಾನು ಅವಳೊಂದಿಗೆ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
