ಅಪ್ಪಾ ಹೇಗಾದರೂ ಮಾಡಿ ಕಾಪಾಡು. ಇದು ಲಖನೌ ಕೋಚಿಂಗ್ ಸೆಂಟರ್ ಅಗ್ನಿಅವಘಡದಲ್ಲಿ ಸಜೀವ ದಹನವಾದ ವಿದ್ಯಾರ್ಥಿಯ ಕೊನೆಯ ಕರೆ. ತಂದೆ ಸ್ಥಳಕ್ಕೆ ಆಗಮಿಸುವಷ್ಟರಲ್ಲೇ ಮಗ ಸುಟ್ಟು ಕರಕಲಾಗಿದ್ದ.

ಲಖನೌ (ಜೂ.22) ಕೋಚಿಂಗ್ ಸೆಂಟರ್‌ನಲ್ಲಿ ಕಾಣಿಸಿಕೊಂಡ ಅಗ್ನಿಅವಘಡದಲ್ಲಿ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ. ಇದೀಗ ಘಟನೆಯಲ್ಲಿ ಸಜೀವ ದಹನವಾದ ವಿದ್ಯಾರ್ಥಿಗಳ ಕಣ್ಣೀರ ಕತೆ ಒಂದೊಂದಾಗಿ ಹೊರಬರುತ್ತಿದೆ. ಈ ಪೈಕಿ 23 ವರ್ಷದ ಸುಖಮಣಿ ಸಿಂಗ್ ಕೊನೆಯ ಕರೆ ಕುರಿತು ತಂದೆ ಕಣ್ಣೀರಿಟ್ಟು ವಿವರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಯದಿಂದ ತಂದೆಗೆ ಕರೆ ಮಾಡಿದ ಸುಖಮಣಿ

ಸುಖಮಣಿ ಸಿಂಗ್ ಲಖನೌ ಕೋಚಿಂಗ್ ಸೆಂಟರ್‌ಗೆ ಹಾಜರಾಗಿ ಅಧ್ಯಯನ ಮಾಡುತ್ತಿದ್ದ. ಇದೇ ರೀತಿ ಹಲವು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಇಂದು ಮಧ್ಯಾಹ್ನ ಕೋಚಿಂಗ್ ಸೆಂಟರ್‌ನಲ್ಲಿ ಏಕಾಏಕಿ ಅಗ್ನಿಅವಘಡ ಸಂಭವಿಸಿದೆ. ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್‌ನಲ್ಲಿ ಸಿಲುಕಿದ್ದರು. ಬೆಂಕಿಯ ಕೆನ್ನಾಲಗೆ ಆವರಿಸಿಕೊಂಡಿತ್ತು. ಈ ವೇಳೆ ಭಯದಿಂದ ಸುಖಮಣಿ ಸಿಂಗ್ ತನ್ನ ತಂದೆ ಪ್ರಭಜೋತ್ ಸಿಂಗ್‌ಕರೆ ಕೆರೆ ಮಾಡಿದ್ದಾನೆ. ಅಪ್ಪಾ ಹೇಗಾದರು ಮಾಡಿ ನನ್ನ ಕಾಪಾಡು. ಸುತ್ತಲೂ ಬೆಂಕಿ ಕಾಣಿಸಿಕೊಂಡಿದೆ. ಹೊರಗೆ ಬರಲು ಯಾವುದೇ ದಾರಿ ಇಲ್ಲ. ಎಲ್ಲಾ ಕಡೆ ಬೆಂಕಿ ಆವರಿಸಿದೆ. ನಾನು ಸೇರಿದಂತೆ ಹಲವರು ಸಿಲುಕಿಕೊಂಡಿದ್ದೇವೆ. ಅಳುತ್ತಲೇ ತಂದೆಗೆ ಕರೆ ಮಾಡಿದ್ದಾನೆ.

ಮಗನ ಶವದ ಮುಂದೆ ಕಣ್ಣೀರಿಟ್ಟ ತಂದೆ

ಮಗನಿಗೆ ಧೈರ್ಯ ನೀಡುವ ಮೊದಲೇ ಬೆಂಕಿಯ ಜ್ವಾಲೆ ಆವರಿಸಿಕೊಂಡಿದೆ. ತಂದೆ ಹಲೋ ಹಲೋಎಂದರೂ ಅತ್ತ ಸದ್ದಿಲ್ಲ. ಆತಂಕದಿಂದಲೇ ಪ್ರಭಜೋತ್ ಸಿಂಗ್ ಕೋಚಿಂಗ್ ಸೆಂಟರ್‌ನತ್ತ ಧಾವಿಸಿದ್ದಾರೆ. ಅಷ್ಟರಲ್ಲೇ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿ 13 ಮಂದಿಯ ಮೃತದೇಹ ಹೊರಕ್ಕೆ ತೆಗೆದಿತ್ತು. ಈ ಮೃತದೇಹಳನ್ನು ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿಗೆ ಸಾಗಿಸಲಾಗಿತ್ತು. ಶವಾಗಾರ ಹೊರಗಡೆ ನಿಂತು ಗೋಳಾಡುತ್ತಿದ್ದ ಪ್ರಭಜೋತ್ ಸಿಂಗ್, ನನ್ನ ಮಗ ಕೊನೆಯ ಕರೆ ಮಾಡಿದ್ದ. ಆತನ ಉಳಿಸಲು ಸಾಧ್ಯವಾಗಲಿಲ್ಲ. ಅಳುತ್ತಲೇ ಕಾಪಾಡಲು ಗೋಗರೆದಿದ್ದ. ಅಸಹಾಯಕನಾದೇ ಎಂದು ಪ್ರಭಜೋತ್ ಸಿಂಗ್ ಕಣ್ಣೀರಿಟ್ಟಿದ್ದಾರೆ.

ರಕ್ಷಣಾ ಕಾರ್ಯಾಚರಣೆ ವಿಳಂಬ?

ಸಂತ್ರಸ್ತ್ರ ಕುಟುಂಬಗಳು ರಕ್ಷಣಾ ಕಾರ್ಯಾಚರಣೆ ವಿಳಂಬ ಕುರಿತು ಆರೋಪ ಮಾಡಿದ್ದಾರೆ. ಘಟನೆಯಲ್ಲಿ ಸಜೀವ ದಹನವಾದ ಜೋಯ್ನಿಲ್ ಚಕ್ರವರ್ತಿ ಸಂಬಂಧಿ ವಿಶ್ವಜಿತ್ ಈ ಕುರಿತು ಆರೋಪಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ನಾನು ಸ್ಥಳಕ್ಕೆ ಧಾವಿಸಿದೆ. ಜೋಯ್ನಿಲ್ ನನ್ನ ಜೊತೆ ಫೋನ್‌ನಲ್ಲೇ ಇದ್ದ. ಕಾಪಾಡಲು ಬೇಡಿಕೊಂಡಿದ್ದ. ಆದರೆ ರಕ್ಷಣಾ ಸಿಬ್ಬಂದಿಗಳು ಗೋಡೆ ಒಡೆಯುವ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡಿದರು. ಗೋಡೆ ಒಡೆದು ಒಳಪ್ರವೇಶಿಸುವಾಗ ಎಲ್ಲವೂ ಮುಗಿದಿತ್ತು ಎಂದು ವಿಶ್ವಜಿತ್ ಆರೋಪಿಸಿದ್ದಾರೆ.