ಹರ್ಯಾಣದಲ್ಲಿ ಭುಗಿಲೆದ್ದಿರುವ ಕೋಮು ಗಲಭೆಗೆ ಸಂಬಂಧಿಸಿದಂತೆ ಈವರೆಗೂ 176 ಜನರನ್ನು ಬಂಧಿಸಲಾಗಿದ್ದು, 78 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಹಾಗೂ 93 ಎಫ್‌ಐಆರ್‌ ದಾಖಲಿಸಲಾಗಿದೆ.

ಚಂಡೀಗಢ: ಹರ್ಯಾಣದಲ್ಲಿ ಭುಗಿಲೆದ್ದಿರುವ ಕೋಮು ಗಲಭೆಗೆ ಸಂಬಂಧಿಸಿದಂತೆ ಈವರೆಗೂ 176 ಜನರನ್ನು ಬಂಧಿಸಲಾಗಿದ್ದು, 78 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಹಾಗೂ 93 ಎಫ್‌ಐಆರ್‌ ದಾಖಲಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ರಾಜ್ಯ ಗೃಹ ಇಲಾಖೆ ಮುಖ್ಯಕಾರ್ಯದರ್ಶಿ ಪ್ರಸಾದ್‌, ಗಲಭೆಗೆ ಸಂಬಂಧಿಸಿದಂತೆ ನೂಹ್‌ನಲ್ಲಿ 46, ಗುರುಗ್ರಾಮದಲ್ಲಿ 23, ಪಲ್ವಾಲ್‌ನಲ್ಲಿ 18, ಫರೀದಾಬಾದ್‌ ಹಾಗೂ ರೇವಾರಿಯಲ್ಲಿ ತಲಾ 3 ಎಫ್‌ಐಆರ್‌ ದಾಖಲಾಗಿದೆ. 176 ಜನರನ್ನು ಬಂಧಿಸಿ, 78 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನೂಹ್‌ನಲ್ಲಿ ಮೀಸಲು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೇವಾತ್‌ನಲ್ಲಿ ಕ್ಷಿಪ್ರ ಪ್ರತಿಕ್ರಿಯೆ ಪಡೆಯ ಕೇಂದ್ರವನ್ನು ಸ್ಥಾಪಿಸಲಾಗಿದೆ’ ಎಂದು ತಿಳಿಸಿದರು.

ಹರ್ಯಾಣದಲ್ಲಿ ಮತ್ತೆರಡು ಮಸೀದಿಗೆ ಬೆಂಕಿ

ನೂಹ್‌: ಕೋಮು ಸಂಘರ್ಷಕ್ಕೆ ತುತ್ತಾಗಿರುವ ಹರ್ಯಾಣದ ನೂಹ್‌ನಲ್ಲಿ ಬುಧವಾರ ತಡರಾತ್ರಿ ಮತ್ತೆ ದಾಳಿ ಮತ್ತು ಬೆಂಕಿ ಹಚ್ಚುವ ಘಟನೆಗಳು ನಡೆದಿವೆ. ಆದರೆ ಈ ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ ಕಾರಣ ಅನಾಹುತ ತಪ್ಪಿದೆ.

ಹರಿಯಾಣ ಕೋಮುಗಲಭೆಯಲ್ಲಿ ನಾಲ್ವರ ಸಾವು, ನುಹ್‌ ಜಿಲ್ಲೆಯಲ್ಲಿ ಎರಡು ದಿನ ಕರ್ಫ್ಯೂ!

ನೂಹ್‌ ಜಿಲ್ಲೆಯ ತೌರುನಲ್ಲಿ ದುಷ್ಕರ್ಮಿಗಳ ಗುಂಪು ಎರಡು ಮಸೀದಿಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿವೆ. ಬೈಕ್‌ನಲ್ಲಿ ಬಂದ 10 ರಿಂದ 15 ಜನರ ಗುಂಪು ಪೆಟ್ರೋಲ್‌ ಬಾಂಬ್‌ ಎಸೆದು ಬೆಂಕಿ ಹಚ್ಚಿವೆ ಎಂದು ಮೊದಲಿನ ವರದಿಗಳು ಹೇಳಿದ್ದವಾದರೂ, ಘಟನಾ ಸ್ಥಳದಲ್ಲಿ ಅಂಥ ವಾದಕ್ಕೆ ಪುಷ್ಟಿನೀಡುವ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಜೊತೆಗೆ ಬೆಂಕಿ ಬಿದ್ದ ತಕ್ಷಣವೇ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಬೆಂಕಿಯಿಂದ ಮಸೀದಿಗೆ ಯಾವುದೇ ಹಾನಿಯಾಗಿಲ್ಲ. ಮಸೀದಿಗೆ ಹಾನಿ ಮಾಡುವ ದುಷ್ಕರ್ಮಿಗಳ ಯತ್ನವನ್ನು ಪೊಲೀಸರು ತಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪಲ್ವಾಲ್‌ ಜಿಲ್ಲೆಯ ಮಿನಾರ್‌ಗೇಟ್‌ ಮಾರುಕಟ್ಟೆಯಲ್ಲಿ ಬಳೆ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿ ದುಷ್ಕೃತ್ಯ ಎಸಗಿದ್ದಾರೆ. ಹಿಂಸಾಕೃತ್ಯಗಳ ಹಿನ್ನೆಲೆಯಲ್ಲಿ ನೂಹ್‌ ಮತ್ತು ಪಲ್ವಾಲ್‌ ಜಿಲ್ಲೆಯಲ್ಲಿ ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.

ವಿಶ್ವ ಹಿಂದು ಪರಿಷತ್‌ ಶೋಭಾಯಾತ್ರೆಯ ವೇಳೆ ಕಲ್ಲುತೂರಾಟ, 40ಕ್ಕೂ ಅಧಿಕ ವಾಹನಗಳಿಗೆ ಬೆಂಕಿ!

3 ತಾಸು ಮೊಬೈಲ್‌ ಇಂಟರ್ನೆಟ್‌ಗೆ ಅಸ್ತು

ಈ ನಡುವೆ ನೂಹ್‌ ಸೇರಿದಂತೆ ಹರ್ಯಾಣದ ಇತರೆ ಪ್ರದೇಶಗಳಲ್ಲಿ ಗುರುವಾರ 3 ಗಂಟೆಗಳ ಕಾಲ ಮೊಬೈಲ್‌ ಇಂಟರ್ನೆಟ್‌ ಮತ್ತು ಎಸ್‌ಎಂಎಸ್‌ ಸೇವೆಗಳನ್ನು ಪುನರ್‌ ಸ್ಥಾಪಿಸಲಾಗಿತ್ತು. ಕಳೆದ ಸೋಮವಾರ ವಿಶ್ವಹಿಂದೂ ಪರಿಷತ್‌ (ವಿಎಚ್‌ಪಿ) ಆಯೋಜಿಸಿದ್ದ ರಾರ‍ಯಲಿಯನ್ನು ತಡೆದು, ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ವೇಳೆ ಭುಗಿಲೆದ್ದ ಹಿಂಸಾಚಾರಕ್ಕೆ 3 ದಿನಗಳಲ್ಲಿ 6 ಜನರು ಸಾವನ್ನಪ್ಪಿದ್ದಾರೆ. 116 ಜನರನ್ನು ಬಂಧಿಸಲಾಗಿದೆ. ಈ ಹಿಂಸಾಚಾರವೂ ಹರ್ಯಾಣದೊಂದಿಗೆ ಗಡಿ ಹಂಚಿಕೊಂಡಿರುವ ದೆಹಲಿ, ಉತ್ತರಪ್ರದೇಶ, ರಾಜಸ್ಥಾನಕ್ಕೂ ಹಬ್ಬುವ ಭೀತಿ ಇರುವ ಹಿನ್ನೆಲೆಯಲ್ಲಿ ಗಡಿ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.