* 300ಕ್ಕೂ ಹೆಚ್ಚು ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಿದಾತ ಕಿಲ್ಲರ್ ಕೊರೋನಾಗೆ ಬಲಿ*  ಕಳೆದ ವರ್ಷ ಕೊರೋನಾ ಸೋಂಕು ಕಾಣಿಸಿಕೊಂಡ ಸಂದರ್ಭದಿಂದಲೂ ಅಂತ್ಯ ಸಂಸ್ಕಾರ ನಡೆಸುವಲ್ಲಿ ತೊಡಗಿಸಿಕೊಂಡಿದ್ದ* ಹರಿಯಾಣದ ಹಿಸಾರ್ ನಗರ ಪಾಲಿಕೆ ಅಧಿಕಾರಿ ಆಗಿದ್ದ ಪ್ರವೀಣ್ ಕುಮಾರ್ (43)

ಹಿಸಾರ್ (ಹರಿಯಾಣ), (ಮೇ.18): ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಯಾರು ಮುಂದೆ ಬರಲ್ಲ. ಕಾರಣ ಕೊರೋನಾ ಎನ್ನುವ ಭಯ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದ್ರೆ, ಇಲ್ಲೊಬ್ಬರು ಕೊರೋನಾದಿಂದ ಸಾವನ್ನಪ್ಪಿದ 300ಕ್ಕೂ ಹೆಚ್ಚು ಮಂದಿಯ ಅಂತ್ಯಸಂಸ್ಕಾರವನ್ನು ಮಾಡಿ ಕೊನೆಗೆ ತಾನೇ ಕಿಲ್ಲರ್ ವೈರಸ್‌ಗೆ ಬಲಿಯಾಗಿದ್ದಾರೆ.

ಹೌದು...ಹರಿಯಾಣದ ಹಿಸಾರ್ ನಗರ ಪಾಲಿಕೆ ಅಧಿಕಾರಿ ಆಗಿದ್ದ ಪ್ರವೀಣ್ ಕುಮಾರ್ (43) ಮಂಗಳವಾರ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕಳೆದ ಭಾನುವಾರ ಪ್ರವೀಣ್‌ಗೆ ಕೊರೋನಾ ಸೋಂಕು ದೃಢಪಟ್ಟಿತ್ತು.ಈ ಹಿನ್ನೆಲೆಯಲ್ಲಿ ಅವರನ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದ್ರೆ, ಇಂದು (ಮಂಗಳವಾರ) ಆಮ್ಲಜನಕ ಮಟ್ಟ ಕಡಿಮೆಯಾಗಿ ಅವರು ಸಾವನ್ನಪ್ಪಿರುವುದಾಗಿ ಪಾಲಿಕೆ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

1100 ಮೃತದೇಹ ಅಂತ್ಯಸಂಸ್ಕಾರ: ಪ್ರೀತಿಯ ಮಗಳ ಮದ್ವೆಯನ್ನೇ ಮುಂದೂಡಿದ ತಂದೆ

ಕಳೆದ ವರ್ಷ ಕೊರೋನಾ ಸೋಂಕು ಕಾಣಿಸಿಕೊಂಡ ಸಂದರ್ಭದಿಂದಲೂ ಪ್ರವೀಣ್ ಕುಮಾರ್ ತಂಡ ಸೋಂಕಿನಿಂದ ಸಾವನ್ನಪ್ಪುವವರ ಅಂತ್ಯ ಸಂಸ್ಕಾರ ನಡೆಸುವಲ್ಲಿ ತೊಡಗಿಸಿಕೊಂಡಿತ್ತು. 

ಕೊರೊನಾದಿಂದ ಸಾವನ್ನಪ್ಪಿದ್ದವರ ಅಂತ್ಯಸಂಸ್ಕಾರ ನೆರವೇರಿಸಲು ನಗರ ಪಾಲಿಕೆ ನಿಯೋಜಿಸಿದ್ದ ತಂಡದ ಮುಖ್ಯಸ್ಥರಾಗಿದ್ದ ಪ್ರವೀಣ್ ಅವರು ಕಳೆದ ವರ್ಷದಿಂದ ಇದುವರೆಗೂ ಸುಮಾರು 300ಕ್ಕೂ ಮಂದಿಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ. 

ಮನೆಯವರೇ ಕೊರೋನಾ ರೋಗಿಗಳ ಶವಗಳನ್ನು ಮುಟ್ಟಲು ಹೆದರುತ್ತಿದ್ದ ಸಂದರ್ಭದಲ್ಲಿ ಸತ್ತವರ ಅಂತ್ಯಸಂಸ್ಕಾರವನ್ನು ಗೌರವವಾಗಿ ನೆರವೇರಿಸಿದ್ದರು. ಆದ್ರೆ, ಇದೀಗ ಮಹಾಮಾರಿ ಆತನನ್ನೇ ಬಲಿತೆಗೆದುಕೊಂಡಿದೆ.

ಕೊರೋನಾ ಮಾರ್ಗಸೂಚಿ ಅನ್ವಯ ಅವರ ಅಂತಿಮ ಸಂಸ್ಕಾರವನ್ನು ರಿಷಿ ನಗರದಲ್ಲಿ ನೆರವೇರಿಸಲಾಗಿದೆ. ಪ್ರವೀಣ್ ಕುಮಾರ್ ನಗರ ಪಾಲಿಕೆ ಸಫಾಯಿ ಕರ್ಮಾಚಾರಿ ಸಂಘಟನೆಯ ಅಧ್ಯಕ್ಷ ಕೂಡ ಆಗಿದ್ದರು.