ಹಳ್ಳಿಗಳಲ್ಲಿ ಇನ್ನು ಮನೆಮನೆಗೂ ತೆರಳಿ ಕೋವಿಡ್ ಟೆಸ್ಟ್: ಸರ್ಕಾರದ ಹೊಸ ಕ್ರಮ!
* ಮಾರಣಾಂತಿಕ ಸೋಂಕಿನಿಂದ ಗ್ರಾಮೀಣ ಪ್ರದೇಶಗಳನ್ನು ರಕ್ಷಿಸಲೇಬೇಕಿದೆ
* ಹಳ್ಳಿಗಳಲ್ಲಿ ಇನ್ನು ಮನೆಮನೆಗೂ ತೆರಳಿ ಕೋವಿಡ್ ಟೆಸ್ಟ್
* ಹರ್ಯಾಣ ಸರ್ಕಾರದ ಹೊಸ ಕ್ರಮ!
ಚಂಡೀಗಢ(ಮೇ.09): ಹಳ್ಳಿಗಳಲ್ಲಿ ಕೊರೋನಾ ಸೋಂಕು ನಿಗ್ರಹಕ್ಕೆ ಮನೆಮನೆಗೂ ತೆರಳಿ ಕೊರೋನಾ ಪರೀಕ್ಷೆ ನಡೆಸುವ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹರಾರಯಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶನಿವಾರ ತಿಳಿಸಿದ್ದಾರೆ.
ಮಾರಣಾಂತಿಕ ಸೋಂಕಿನಿಂದ ಗ್ರಾಮೀಣ ಪ್ರದೇಶಗಳನ್ನು ರಕ್ಷಿಸಲೇಬೇಕಿದೆ. ಹಾಗಾಗಿ ಈ ಅಭಿಯಾನ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಇದೇ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಬಗ್ಗೆ ಅರಿವು ಕಾರ್ಯಕ್ರಮ, ಸಮಾಲೋಚನೆ ಸಹ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
‘3 ವೈದ್ಯರ ನೇತೃತ್ವದ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ 8000 ತಂಡಗಳನ್ನು ರಾಜ್ಯಾದ್ಯಂತ ನಿಯೋಜಿಸಲಾಗುತ್ತದೆ. ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದವರಿಗೆ ಮನೆಯಲ್ಲಿಯೇ ಕ್ವಾರಂಟೈನ್ ಆಗಲು ಸಲಹೆ ನೀಡಲಾಗುತ್ತದೆ. ಅಂದಾಜು 500 ಮನೆಗಳಿಗೆ 1 ತಂಡ ಎಂದು ನಿಯೋಜಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona