ರೈಲ್ವೇ ಹಳಿಯಲ್ಲಿ ಮರಿಗೆ ಜನ್ಮ ನೀಡುತ್ತಿದ್ದ ತಾಯಿ ಆನೆಗಾಗಿ ಬರೋಬ್ಬರಿ 2 ಗಂಟೆ ರೈಲು ನಿಲ್ಲಿಸಿದ ಘಟನೆ ನಡೆದಿದೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಈ ವಿಡಿಯೋ ಹಂಚಿಕೊಂಡು ಮಾನವ ಹಾಗೂ ಪ್ರಾಣಿಗಳ ನಡುವೆ ಹೃದಯಸ್ಪರ್ಶಿ ಘಟನೆ ಎಂದಿದ್ದಾರೆ. 

ರಾಂಚಿ (ಜು.09) ಮಾನವ ಹಾಗೂ ಪ್ರಾಣಿ ನಡುವೆ ಸಂಘರ್ಷದ ಘಟನೆಗಳು ಪದೇ ಪದೆ ವರದಿಯಾಗುತ್ತಲೇ ಇದೆ. ಇದರ ನಡುವೆ ಮಾನವ ಹಾಗೂ ಪ್ರಾಣಿ ನಡುವೆ ಹೃದಯ ಸ್ಪರ್ಶಿ ಘಟನೆಯೊಂದು ವರದಿಯಾಗಿದೆ. ಜಾರ್ಖಂಡ್‌ನ ಬರ್ಕಾಕನ ಹಾಗೂ ಹಾಜಿರ್‌ಬಾಗ್ ರೈಲು ನಿಲ್ದಾಣಗಳ ನಡುವಿನ ಕಾಡು ಪ್ರದೇಶದಲ್ಲಿ ಗರ್ಭಿಣಿ ಆನೆಯೊಂದು ಮರಿಗೆ ಜನ್ಮ ನೀಡಲು ಮುಂದಾಗಿತ್ತು. ಕಾಡಿನಿಂದ ಹಳಿ ದಾಟಲು ಬಂದಿದ್ದ ಆನೆಗೆ ಪ್ರಸವ ವೇದನೆ ಶುರುವಾಗಿದೆ. ಹೀಗಾಗಿ ಹಳಿ ಪಕ್ಕದಲ್ಲೇ ಮರಿಗೆ ಜನ್ಮ ನೀಡಲು ಮುಂದಾಗಿದೆ. ಇದೇ ಹಳಿ ಮೂಲಕ ರೈಲು ಕೂಡ ಆಗಮಿಸಿದೆ. ಆದರೆ ಅರಣ್ಯಾಧಿಕಾರಿಗಳ ದಿಟ್ಟ ನಡೆಯಿಂದ ರೈಲನ್ನು ಬರೋಬ್ಬರಿ 2 ಗಂಟೆ ಕಾಲ ನಿಲ್ಲಿಸಿದ ಘಟನೆ ನಡೆದಿದೆ. ಮರಿ ಆನೆಗೆ ಜನ್ಮ ನೀಡಿದ ಬಳಿಕವಷ್ಟೇ ರೈಲು ಸಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಜಾನೆ 3 ಗಂಟೆ ಸಮಯಕ್ಕೆ ಗಜ ಪ್ರಸವ

ಸರಿಸುಮಾರು ಮುಂಜಾನೆ 3 ಗಂಟೆ ಸಮಯ. ವೈಗವಾಗಿ ಗೂಡ್ಸ್ ರೈಲು ಬರ್ಕಾಕಾನ ಹಾಗೂ ಹಜರಿಬಾಗ್ ರೈಲು ನಿಲ್ದಾಣಗಳ ನಡುವೆ ಸಾಗಿತ್ತು. ಕಲ್ಲಿದ್ದಲು ತುಂಬಿಕೊಂಡು ರೈಲು ಸಾಗಿತ್ತು. ಆದರೆ ಇದೇ ಕಾಡು ಪ್ರದೇಶದಲ್ಲಿ ಗರ್ಭಿಣಿ ಆನೆ ಪ್ರಸವ ವೇದನೆಯಿಂದ ತಿರುಗಾಡುತ್ತಿರುವುದನ್ನು ಅರಣ್ಯಾಧಿಕಾರಿಗಳು ಗಮಿನಿಸಿದ್ದಾರೆ. ಹೀಗಾಗಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಇತ್ತ ಕಾಡಾನೆ ಅತ್ತಿಂದಿತ್ತ ಓಡಾಡಿ ಕೊನೆಗೆ ರೈಲು ಹಳಿಯತ್ತ ಆಗಮಿಸಿದೆ.

Scroll to load tweet…

ರೈಲು ಅಧಿಕಾರಿಗಳಿಂದ ಲೋಕೋ ಪೈಲೆಟ್‌ಗೆ ಸೂಚನೆ

ತಕ್ಷಣವೇ ಅರಣ್ಯಾಧಿಕಾರಿಗಳು ರೈಲು ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಈ ರೈಲು ಹಳಿ ಮೂಲಕ ಸಾಗುವ ರೈಲನ್ನು ನಿಲ್ಲಿಸಲು ಸೂಚಿಸಿದ್ದಾರೆ. ರೈಲು ಹಳಿ ಪಕ್ಕದಲ್ಲೇ ಹೆಣ್ಣಾನೆ,ಮರಿಗೆ ಜನ್ಮ ನೀಡಲಿದೆ. ಹೀಗಾಗಿ ರೈಲು ಸಾಗಿದರೆ ಸಮಸ್ಯೆ ಹೆಚ್ಚಾಗಲಿದೆ. ಇದರಿಂದ ಆನೆ ಹಾಗೂ ಗರ್ಭದಲ್ಲಿರುವ ಮರಿ ಆನೆಗೂ ಸಮಸ್ಯೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣವೇ ಇದೇ ಮಾರ್ಗದಲ್ಲಿ ಸಾಗುತ್ತಿದ್ದ ಗೂಡ್ಸ್ ರೈಲಿಗೆ ಮಾಹಿತಿ ನೀಡಿದ್ದಾರೆ.

ಈ ಮಾರ್ಗದಲ್ಲಿನ ಎಲ್ಲಾ ರೈಲು ತಡೆ ಹಿಡಿದ ಅಧಿಕಾರಿಗಳು

ಗರ್ಭಿಣಿ ಆನೆ ಪ್ರಸವ ವೇದನೆಯಿಂದ ರೈಲು ಹಳಿಯಲ್ಲಿ ನಿಂತಿದ್ದರೆ ಗೂಡ್ಸ್ ರೈಲನ್ನು ಆಗಾಗಲೇ ನಿಲ್ಲಿಸಲಾಗಿತ್ತು. ಇಷ್ಟೇ ಅಲ್ಲ ಈ ರೈಲು ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲು ಸಂಚಾರವನ್ನು ತಡೆ ಹಿಡಿಯಲು ಸೂಚಿಸಲಾಗಿತ್ತು. ಹೀಗಾಗಿ ರೈಲು ಅಧಿಕಾರಿಗಳು ಅರಣ್ಯಾಧಿಕಾರಿಗಳ ಮುಂದಿನ ಸೂಚನೆವರೆಗೆ ರೈಲು ತಡೆ ಹಿಡಿಯಲು ಸೂಚನೆ ನೀಡಿದ್ದಾರೆ.

ಮರಿಗೆ ಜನ್ಮ ನೀಡಿದ ಕೆಲ ಹೊತ್ತಿನ ಬಳಿಕ ರೈಲು ಸಂಚಾರಕ್ಕೆ ಮುಕ್ತ

ಪ್ರಸವ ವೇದನೆಯಿಂದ ರೈಲು ಹಳಿ ಬಳಿ ನಿಂತಿದ್ದ ಗರ್ಭಿಣಿ ಆನೆ 2 ಗಂಟೆ ಕಾಲ ಅಲ್ಲೆ ಇದ್ದು ಮರಿಗೆ ಜನ್ಮ ನೀಡಿದೆ. ಇದೇ ವೇಳೆ ಅರಣ್ಯಾಧಿಕಾರಿಗಳು ಸುತ್ತುವರೆದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದ್ದಾರೆ. ಮರಿಗೆ ಜನ್ಮ ನೀಡಿದ ಅರ್ಧ ಗಂಟೆಯಲ್ಲಿ ಮರಿ ಆನೆ ಹಾಗೂ ತಾಯಿ ಆನೆ ಸ್ಥಳದಿಂದ ನಿಧಾನವಾಗಿ ತೆರಳಿದೆ. ಈ ವೇಳೆ ಅರಣ್ಯಾಧಿಕಾರಿಗಳು ತಾಯಿ ಆನೆ ಹಾಗೂ ಮರಿ ಆನೆಯನ್ನು ಮೆಲ್ಲನೆ ಕಾಡಿನತ್ತ ಸಾಗಿಸುವ ಪ್ರಯತ್ನ ಮಾಡಿದ್ದಾರೆ.

2 ಗಂಟೆಗಳ ಕಾಲ ಕಲ್ಲಿದ್ದಲ್ಲು ತುಂಬಿದ್ದ ರೈಲು ಈ ಗಜ ಪ್ರಸವದ ಹಳಿಯಿಂದ ಕೆಲವೇ ದೂರದಲ್ಲಿ ನಿಲ್ಲಿಸಲಾಗಿತ್ತು. 2 ಗಂಟೆಗಳ ಬಳಿಕ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಈ ವಿಡಿಯೋವನ್ನು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಹಂಚಿಕೊಂಡಿದ್ದಾರೆ. ಭಾರಿ ಮೆಚ್ಚುಗೆ ಸೂಚಿಸಿದ್ದಾರೆ.