Asianet Suvarna News Asianet Suvarna News

ಉಕ್ರೇನ್‌ನಲ್ಲಿ MBBS ಮಾಡ್ತಿದ್ದ ಗ್ರಾ.ಪಂ. ಅಧ್ಯಕ್ಷೆ: ಯುದ್ಧದ ಬಳಿಕ ಬಯಲಾದ ರಹಸ್ಯ

  • ಪಂಚಾಯತ್‌ ಅಧ್ಯಕ್ಷೆಯಾದ ಬಳಿಕ ಉಕ್ರೇನ್‌ಗೆ ಹಾರಿದ ವಿದ್ಯಾರ್ಥಿನಿ
  • ಈಕೆ ಉತ್ತರಪ್ರದೇಶ ತೆರಪುರ್ಸಾಲಿ ಗ್ರಾ.ಪಂ. ಅಧ್ಯಕ್ಷೆ
  • ಯುದ್ಧ ಘೋಷಣೆಯಾದ ಬಳಿಕ ಬಯಲಾದ ಪ್ರಕರಣ
hardoyi village gram pradhan student trapped ukraine  watch her viral video akb
Author
Bangalore, First Published Mar 2, 2022, 7:21 PM IST

ಲಕ್ನೋ(ಮಾ.2): ರಷ್ಯಾ ಉಕ್ರೇನ್ ಸಂಘರ್ಷವು ಈಗ ಉತ್ತರ ಪ್ರದೇಶದ ಗ್ರಾಮ ಪಂಚಾಯತ್‌ನ ಅಧ್ಯಕ್ಷರ ಸ್ಥಾನಕ್ಕೆ ಕುತ್ತು ತಂದಿದೆ. ಇದೆಂಥಾ ವಿಚಿತ್ರ ಎಲ್ಲಿಯ ಉಕ್ರೇನ್‌ ಎಲ್ಲಿಯ ಉತ್ತರಪ್ರದೇಶ ಎಂದು ಗಾಬರಿಯಾಗ್ತಿದ್ದೀರಾ. ಇಲ್ಲೇ ಇರೋದು ನೋಡಿ ಮಸಲತ್ತು. ಉಕ್ರೇನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ನಿಯೊಬ್ಬಳು ಕಳೆದ ವರ್ಷ ಉತ್ತರಪ್ರದೇಶ ಗ್ರಾಮವೊಂದರ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಆದಾದ ನಂತರ ಆಕೆ ವೈದ್ಯಕೀಯ ಶಿಕ್ಷಣ ವ್ಯಾಸಂಗಕ್ಕಾಗಿ ಉಕ್ರೇನ್‌ಗೆ ಹಾರಿದ್ದಾಳೆ. ಆದರೆ ಆಕೆ ಊರಿನಲ್ಲೇ ಇಲ್ಲ ಎಂಬುದು ಉಕ್ರೇನ್‌ ರಷ್ಯಾ ಯುದ್ಧ ಆರಂಭವಾದ ನಂತರವಷ್ಟೇ ಗ್ರಾಮಸ್ಥರಿಗೆ ತಿಳಿದಿದೆ. ಘಟನೆ ಬಯಲಾದ ಬಳಿಕ ಈಗ ಈಕೆಗೆ ಪಂಚಾಯತ್‌ ರಾಜ್ ಇಲಾಖೆ ಉತ್ತರಿಸುವಂತೆ ನೋಟೀಸ್ ಜಾರಿ ಮಾಡಿದೆ. 

 24 ವರ್ಷದ ವೈಶಾಲಿ ಯಾದವ್‌( Vaishali  Yadav) ಎಂಬಾಕೆಯ ಹೀಗೆ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ನಂತರ ದೇಶ ಬಿಟ್ಟು ಹೋಗಿ ಎಂಬಿಬಿಎಸ್‌ ಮಾಡುತ್ತಿರುವಾಕೆ. ಉಕ್ರೇನ್‌ನಲ್ಲಿ ವ್ಯಾಸಂಗ ಮಾಡಿದರೆ ಯುರೋಪಿಯನ್ ಯೂನಿಯನ್‌ನಾದ್ಯಂತ ತನ್ನ ಪದವಿ ಸ್ವೀಕಾರಾರ್ಹವಾಗಿರುವುದರಿಂದ MBBS ಗೆ ಉಕ್ರೇನ್ ಅನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಆಕೆ ಹೇಳಿದ್ದಾಳೆ. ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿದಾಗ ಈ ವೈಶಾಲಿ ಯಾದವ್‌ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅಲ್ಲಿನ ಪರಿಸ್ಥಿತಿಯನ್ನು ಆಕೆ ವಿವರಿಸಿ ತಮ್ಮನ್ನು ರಕ್ಷಿಸುವಂತೆ ಕೇಳುತ್ತಿರುವ ವಿಡಿಯೋ ಇದಾಗಿತ್ತು. ಯಾದವ್ ಪ್ರಸ್ತುತ ಇವಾನೊ ಫ್ರಾಂಕಿವ್ಸ್ಕ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ (Ivano Frankivsk National Medical University)ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು.

ಇತ್ತ ಈಕೆ ಗ್ರಾಮದ ಅಧ್ಯಕ್ಷೆಯಾಗಿ ಚುನಾಯಿತರಾದ ನಂತರ ಉಕ್ರೇನ್‌ಗೆ ಮರಳಿದ್ದಾರೆ ಎಂಬುದು ಗ್ರಾಮಸ್ಥರಿಗೆ ತಿಳಿದಿರಲಿಲ್ಲ. ಅಲ್ಲದೇ ಈಗ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆಕೆಯ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಅಲ್ಲದೇ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ಚುನಾಯಿತರಾದ ನಂತರ ಅವರು ಉಕ್ರೇನ್‌ಗೆ ತೆರಳಿದ್ದೇಕೆ ಎಂದು ಕಾರಣವನ್ನು ವಿವರಿಸುವಂತೆ ಯಾದವ್ ಅವರಿಗೆ ಪಂಚಾಯತ್ ರಾಜ್ (Panchayat Raj)ನೋಟಿಸ್ ನೀಡಿದೆ ಎಂದು ವರದಿಯಾಗಿದೆ. ಕಳೆದ ವರ್ಷ, ಯಾದವ್ ಉಕ್ರೇನ್‌ನಲ್ಲಿದ್ದಾಗ, ಆಕೆಯ ಗ್ರಾಮದಲ್ಲಿ ಗ್ರಾಮಕ್ಕೆ ಸಂಬಂಧಪಟ್ಟ ಕೆಲಸಗಳು ನಡೆದಿದ್ದವು. ಅಲ್ಲದೇ ಅದಕ್ಕಾಗಿ ಗ್ರಾಮ ಪಂಚಾಯತ್‌ನ ಹಣವನ್ನು ಬಳಸಲಾಯಿತು. ಆದರೆ ಗ್ರಾಮ ಪಂಚಾಯತ್ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಅವರ ಸಹಿ ಇಲ್ಲದೇ ಹಣವನ್ನು ಬಳಸಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. 

Russia Ukraine War: ಉಕ್ರೇನ್ ಮೇಲೆ ವ್ಯಾಕ್ಯೂಮ್  ಬಾಂಬ್ ದಾಳಿ.. ಟಿವಿ ಟವರ್ ಬ್ಲಾಸ್ಟ್!

ನಾನು ಉಕ್ರೇನ್ ಅಲ್ಲಿ ವೈದ್ಯಕೀಯ ಶಿಕ್ಷಣವನ್ನು ಆಯ್ಕೆ ಮಾಡಿದ್ದೇನೆ ಏಕೆಂದರೆ ಅಲ್ಲಿ ಪಡೆಯುವ ಪದವಿಗೆ ಯುರೋಪ್‌ನಾದ್ಯಂತ ಅರ್ಹತೆ ಇದೆ. ಆದರೆ ನಾನು ಇಲ್ಲಿ ಬಂದು ಈ ಗುಂಡಿನ ದಾಳಿ ಮಧ್ಯೆ ಸಿಲುಕಿಕೊಳ್ಳುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ನನಗೆ ಈಗ ಮನೆಗೆ ಹಿಂತಿರುಗಲು ವಿಮಾನ ಮಾತ್ರ ಬೇಕು ಎಂದು ಆಕೆ ಹೇಳಿಕೊಂಡಿದ್ದಾಳೆ. ಡಿಸೆಂಬರ್ 2021ರಲ್ಲಿ, ಗ್ರಾಮ ಪಂಚಾಯತ್‌ ಸಭೆಯೊಂದಕ್ಕೆ ವೀಡಿಯೊ ಕರೆಗಳ ಮೂಲಕ ಅವರು ಭಾಗಿಯಾಗಿದ್ದರು ಎಂದು ಅಮರ್ ಉಜಾಲ ಪತ್ರಿಕೆಯೂ ವರದಿ ಮಾಡಿತ್ತು. ಅಲ್ಲದೇ ಯಾದವ್ ತನ್ನ ಗ್ರಾಮ ತೇರಾ ಪುರ್ಸಾಲಿಯನ್ನು (Tera Pursali) ಉಕ್ರೇನ್‌ನ ಹಳ್ಳಿಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಬಯಸಿದ್ದಾರೆ ಎಂದು ವರದಿಯಲ್ಲಿ ಹೊಗಳಲಾಗಿತ್ತು. ಹರ್ದೋಯ್ ಜಿಲ್ಲೆ(Hardoi) ಮತ್ತು ಲಕ್ನೋದಲ್ಲಿ(Lucknow) ಶಾಲಾ ಶಿಕ್ಷಣ ಪಡೆದಿರುವ ವೈಶಾಲಿ ಕಳೆದ ಮೂರು ವರ್ಷಗಳಿಂದ ಉಕ್ರೇನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.

Russia Ukraine War: ಖಾರ್ಖಿವ್ ಮೇಲೆ ಭೀಕರ ದಾಳಿ ಸಾಧ್ಯತೆ.. ಈ ಕೂಡಲೇ ಅಲ್ಲಿಂದ ಹೊರಡಿ
 

ಕಳೆದ ವರ್ಷ, ವೈಶಾಲಿ ಯಾದವ್‌ ಅವರು ತಮ್ಮ ತಂದೆ ಮತ್ತು ಮಾಜಿ ಬ್ಲಾಕ್ ಅಧ್ಯಕ್ಷ ಮಹೇಂದ್ರ ಸಿಂಗ್ ಯಾದವ್ (Mahendra Singh Yadav) ಅವರಿಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದರೆ ತನ್ನ ಅಧ್ಯಯನವನ್ನು ಪೂರ್ಣಗೊಳಿಸಲು ಉಕ್ರೇನ್‌ಗೆ ಮರಳಬೇಕಾಗಿರುವುದರಿಂದ ಆಕೆಯ ತಂದೆ ಇದಕ್ಕೆ ಒಪ್ಪಿರಲಿಲ್ಲ.ಆದರೆ ಅವಳು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಗ್ರಾಮ ಪಂಚಾಯತ್ ಸಭೆಗಳಿಗೆ ಹಾಜರಾಗಬಹುದು ಮತ್ತು ಉಕ್ರೇನ್‌ನಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸಬಹುದು ಎಂದು ಅವರನ್ನು ಒಪ್ಪಿಸಿದ್ದಳು.

ಅಮರ್ ಉಜಾಲಾ ಅವರ ವರದಿಯು ಆಕೆ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಹಿಂತಿರುಗಿ ತನ್ನ ಹಳ್ಳಿಯ ಸುಧಾರಣೆಗಾಗಿ ಕೆಲಸ ಮಾಡಲು ಬಯಸಿದ್ದಾಳೆ ಎಂದು ಸೂಚಿಸಿದ್ದರೂ, ಟೈಮ್ಸ್‌ ಆಪ್‌ ಇಂಡಿಯಾ ವರದಿಯ ಪ್ರಕಾರ ಆಕೆ ಯುರೋಪಿಯನ್ ಯೂನಿಯನ್‌ನಲ್ಲಿ ತನ್ನ ಪದವಿ ಸ್ವೀಕಾರಾರ್ಹವಾಗಿರುವುದರಿಂದ ಉಕ್ರೇನ್ ಅನ್ನು ಆಯ್ಕೆ ಮಾಡಿದೆ ಎಂದು ಹೇಳಿದ್ದಾಳೆ. 

Follow Us:
Download App:
  • android
  • ios