ಕಾಶಿ ವಿಶ್ವನಾಥ ಮಂದಿರ ಆವರಣದಲ್ಲಿರುವ ಗ್ಯಾನವಾಪಿ ಮಸೀದಿ ಕುರಿತು ಎಎಸ್ಐ ಸಮೀಕ್ಷಾ ವರದಿ ಭಾರಿ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಕೆಯಾಗಿದೆ. ಮಸೀದಿಯ ವಝುಖಾನ ಸ್ಥಳದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಈ ಸ್ಥಳದ ಸಂಪೂರ್ಣ ಸಮೀಕ್ಷೆ ನಡೆಸಲು ಕೋರ್ಟ್ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ.

ನವದೆಹಲಿ(ಜ.29) ಆಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡ ಬಳಿಕ ಇದೀಗ ಕಾಶಿ ಹಾಗೂ ಮಥುರಾ ದೇವಸ್ಥಾನದ ಹೋರಾಟ ತೀವ್ರಗೊಂಡಿದೆ. ದೇವಸ್ಥಾನದ ಆವರಣದಲ್ಲಿರುವ ಮಸೀದಿಗಳು ಹಿಂದೂ ದೇಗುಲ ಮೇಲೆ ನಿರ್ಮಿಸಲಾಗಿದೆ ಅನ್ನೋ ವಾದ ವಿವಾದ ಜೋರಾಗಿದೆ. ಈಗಾಗಲೇ ಕಾಶಿ ವಿಶ್ವನಾಥ ಮಂದಿರದ ಆವರಣದಲ್ಲಿರುವ ಗ್ಯಾನವಾಪಿ ಮಸೀದಿ ಸರ್ವೆ ವರದಿ ಬಹಿರಂಗಗೊಂಡಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಗ್ಯಾನವಾಪಿ ಮಸೀದಿಯಲ್ಲಿ ಮುಸ್ಲಿಮರು ವಝುಖಾನ ಆಗಿ ಬಳಕೆ ಮಾಡುತ್ತಿದ ಸ್ಥಳ ಹಾಗೂ ಪತ್ತೆಯಾಗಿರುವ ಶಿವಲಿಂಗದ ಕುರಿತು ಭಾರತೀಯ ಪುರಾತತ್ವ ಇಲಾಖೆಯಿಂದ ಸುದೀರ್ಘ ಸಮೀಕ್ಷೆ ನಡೆಸಬೇಕು. ಇದಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಕೆಯಾಗಿದೆ.

Add Asianetnews Kannada as a Preferred SourcegooglePreferred

ಮೆ 19, 2023ರಲ್ಲಿ ಸುಪ್ರೀಂ ಕೋರ್ಟ್, ಶಿವಲಿಂಗ ಪತ್ತೆಯಾದ ಸ್ಥಳ ಸರ್ವೆಗೆ ತಡೆ ನೀಡಿತ್ತು. ಈ ತಡೆಯನ್ನು ತೆರವುಗೊಳಿಸಿ ಸರ್ವೆಗೆ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ವೈಜ್ಞಾನಿಕ ಸಮೀಕ್ಷೆಗೆ ತಡೆ ನೀಡಿದ್ದ ಆದೇಶವನ್ನು ಮರುಪರಿಶೀಲಿಸಿ, ಸಮೀಕ್ಷೆಗೆ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಹಿಂದೂ ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಜ್ಞಾನವಾಪಿ ಶಿವಲಿಂಗ ಸ್ಥಳದ ಶುಚಿತ್ವ ಕಾಪಡಲು ಸೂಚನೆ!

ಗ್ಯಾನವಾಪಿ ಮಸೀದಿ ಕುರಿತು ಪುರಾತತ್ವ ಇಲಾಖೆ ಸಮೀಕ್ಷಾ ವರದಿಯಲ್ಲಿ ಕೆಲ ಮಹತ್ವದ ಅಂಶಗಳನ್ನು ಉಲ್ಲೇಖಿಸಿದೆ. ಇದು ಕಾಶಿ ವಿಶ್ವನಾಥ ಮಂದಿರ ಧ್ವಂಸಗೊಳಿಸಿ ನಿರ್ಮಾಣ ಮಾಡಲಾಗಿದೆ ಅನ್ನೋದನ್ನು ಸ್ಪಷ್ಟಪಡಿಸಿದೆ. 17ನೇ ಶತಮಾನದಲ್ಲಿ ಔರಂಗಾಜೇಬ್‌ ಕಾಲದಲ್ಲಿ ದೇಗುಲವನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಲಾಗಿದೆ ಅನ್ನೋದನ್ನು ದಾಖಲೆ ಸಮೇತ ನೀಡಿದೆ. ಮಸೀದಿಯ ಪಶ್ಚಿಮ ಭಾಗದ ಗೋಡೆ ದೇಗುಲಕ್ಕೆ ಸೇರಿದ್ದು. ಹಾಲಿ ಇರುವ ಮಸೀದಿ ಸಮುಚ್ಚಯದ ಕೆಳಗೆ ಬೃಹತ್‌ ಹಿಂದೂ ಮಂದಿರದ ಕುರುಹುಗಳು ಸಿಕ್ಕಿವೆ. ಹಳೆಯ ಕಟ್ಟಡದ ಮೇಲೆ ಈಗಿನ ಕಟ್ಟಡವನ್ನು ನಿರ್ಮಿಸಲಾಗಿದೆ. ಹಳೆಯ ಕಟ್ಟಡದ ಕಂಬಗಳನ್ನೇ ಬಳಸಿಕೊಳ್ಳಲಾಗಿದೆ. ಕೆಲವೊಂದು ಕಡೆ ಹಿಂದೂ ದೇಗುಲದ ಕಂಬಗಳಿಗೆ ಬದಲಾವಣೆ ಮಾಡುವ ಮೂಲಕ ಹೊಸ ಕಟ್ಟಡ ನಿರ್ಮಿಸಲಾಗಿದೆ. ಕೆಲವೊಂದು ಕಡೆ ಕಂಬದ ಮೇಲಿನ ಕೆತ್ತನೆಗಳನ್ನು ಅಳಿಸಿ ಹಾಕುವ ಪ್ರಯತ್ನಗಳನ್ನೂ ಮಾಡಲಾಗಿದೆ.

ಜೊತೆಗೆ, ಪುರಾತನ ಹಿಂದೂ ದೇಗುಲದ ಕುರಿತಾಗಿ ದೇವನಾಗರಿ, ಕನ್ನಡ, ತೆಲುಗು ಹಾಗೂ ಇನ್ನಿತರೆ ಭಾಷೆಗಳಲ್ಲಿ ಬರೆಯಲಾದ 34 ಶಾಸನಗಳು ಕಂಡುಬಂದಿವೆ. ಈ ಶಾಸನಗಳು ಹಾಲಿ ಇರುವ ಕಟ್ಟಡಗಳಲ್ಲಿ ಕಾಣಸಿಕ್ಕಿದೆ. ಈ ಶಾಸನಗಳಲ್ಲಿ ಜನಾರ್ದನ, ರುದ್ರ, ಉಮೇಶ್ವರ ಮೊದಲಾದ ಹೆಸರುಗಳಿವೆ. 

Gyanvapi Case: ಪೂಜೆ, ಸಮೀಕ್ಷೆ ವಿರುದ್ಧ ಮುಸ್ಲಿಮರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ!