* ವಾರಾಣಸಿಯ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡಂತೆ ಇರುವ ಗ್ಯಾನ್‌ವಾಪಿ ಮಸೀದಿ* ಮಸೀದಿಯ ಒಳಾಂಗಣವನ್ನು ಚಿತ್ರೀಕರಣ ಮಾಡಲು ಕೋರ್ಟ್‌ ಆದೇಶ* ಕೋರ್ಟ್‌ ಆದೇಶಕ್ಕೆ ಮಸೀದಿ ವಿರೋಧ

ನವದೆಹಲಿ(ಮೇ.03): ವಾರಾಣಸಿಯ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡಂತೆ ಇರುವ ಗ್ಯಾನ್‌ವಾಪಿ ಮಸೀದಿಯ ಒಳಾಂಗಣವನ್ನು ಚಿತ್ರೀಕರಣ ಮಾಡಲು ಕೋರ್ಚ್‌ ನೀಡಿರುವ ಆದೇಶವನ್ನು ಮಸೀದಿಯ ಆಡಳಿತ ಮಂಡಳಿ ವಿರೋಧಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್‌ ಇದು ನ್ಯಾಯಾಂಗ ನಿಂದನೆ ಎಂದು ಹೇಳಿದೆ.

Add Asianetnews Kannada as a Preferred SourcegooglePreferred

‘ಇದು ನ್ಯಾಯಾಂಗ ನಿಂದನೆಯಾಗಿದೆ. ಕೋರ್ಚ್‌ನ ಆದೇಶವನ್ನು ಹೇಗೆ ತಿರಸ್ಕರಿಸುತ್ತಾರೆ. ಮಸೀದಿಯಲ್ಲಿ ಮುಚ್ಚಿಡುವಂತಹದ್ದೇನಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ವಕ್ತಾರ ವಿನೋದ್‌ ಬನ್ಸಲ್‌ ಹೇಳಿದ್ದಾರೆ. ವಿಶ್ವನಾಥ ಮಂದಿರ ಸಮೀಪ ಇರುವ ಈ ಮಸೀದಿಯ ರಚನೆ ಬಹುತೇಕ ಹಿಂದೂ ದೇವಾಲಯವನ್ನು ಹೋಲುತ್ತದೆ. ದೇವಾಲಯವನ್ನು ಕೆಡವಿ ಈ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪವನ್ನು ಬಹಳ ಹಿಂದಿನಿಂದಲೂ ಹಿಂದೂ ಸಂಘಟನೆಗಳು ಮಾಡುತ್ತಿವೆ.

ಮಸೀದಿಯ ಗೋಡೆಗಳ ಮೇಲಿರುವ ಹಿಂದೂ ದೇವರ ವಿಗ್ರಹಗಳಿಗೆ ನಿತ್ಯ ಪೂಜೆ ಮಾಡಲು ಅನುಮತಿ ನೀಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ, ಮಸೀದಿಯ ಒಳಾಂಗಣವನ್ನು ಚಿತ್ರೀಕರಣ ಮಾಡಬೇಕು ಎಂದು ಕೋರ್ಚ್‌ ಹೇಳಿತ್ತು. ಅಲ್ಲದೇ ಇದಕ್ಕಾಗಿ ವಕೀಲರಾದ ಅಜಯ್‌ ಕುಮಾರ್‌ ನೇತೃತ್ವದಲ್ಲಿ ಏ.18ರಂದು ಸಮಿತಿ ರಚನೆ ಮಾಡಲಾಗಿತ್ತು. ಮೇ 6-7ರಂದು ನಡೆಯಬೇಕಿದ್ದ ಚಿತ್ರೀಕರಣವನ್ನು ಮಸೀದಿಯ ಆಡಳಿತ ಮಂಡಳಿ ವಿರೋಧಿಸಿದೆ.

ಬನಾರಸ್‌ ಹಿಂದೂ ವಿವಿಯಲ್ಲಿ ‘ಹಿಂದೂ ಧರ್ಮ’ ಕೋರ್ಸ್‌ ಶುರು

ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ‘ಹಿಂದೂ ಧರ್ಮ’ ವಿಷಯದ ಮೇಲೆ ಸ್ನಾತಕೋತ್ತರ ಪದವಿ ಕೋರ್ಸ್‌ ಆರಂಭಿಸಿದೆ. ಇದು ದೇಶದಲ್ಲೇ ಮೊದಲು ಎನ್ನಲಾಗಿದೆ.

‘ಹಿಂದೂ ಧರ್ಮದ ಬಗ್ಗೆ ಜನಸಾಮಾನ್ಯರಿಗೆ ಗೊತ್ತಿಲ್ಲದ ಅನೇಕ ಅಂಶಗಳನ್ನು ಜಗತ್ತಿಗೆ ತಿಳಿಸಲು ಹಾಗೂ ಹಿಂದೂ ಧರ್ಮದ ಬೋಧನೆಯನ್ನು ಹೆಚ್ಚು ಹೆಚ್ಚು ಜನರಿಗೆ ತಿಳಿಸಲು ಈ ಕೋರ್ಸ್‌ನ್ನು ಆರಂಭಿಸಲಾಗಿದೆ. ತತ್ವಶಾಸ್ತ್ರ, ಧರ್ಮ, ಸಂಸ್ಕೃತ ಹಾಗೂ ಪ್ರಾಚೀನ ಭಾರತದ ಇತಿಹಾಸ ವಿಭಾಗಗಳ ಸಹಯೋಗದೊಂದಿಗೆ ಭಾರತ ಅಧ್ಯಯನ ಕೇಂದ್ರದ ಕಲಾ ವಿಭಾಗದ ಅಧ್ಯಾಪಕರು ಈ ಕೋರ್ಸ್‌ನ್ನು ನಡೆಸಲಿದ್ದಾರೆ. ವಿದೇಶಿ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಒಟ್ಟು 45 ವಿದ್ಯಾರ್ಥಿಗಳ ಈಗಾಗಲೇ ಈ ಕೋರ್ಸಿಗೆ ಪ್ರವೇಶ ಪಡೆದಿದ್ದಾರೆ’ ಎಂದು ವಿವಿ ಕುಲಪತಿ ಪ್ರೊ| ವಿ.ಕೆ. ಶುಕ್ಲಾ ಹೇಳಿದ್ದಾರೆ.

ಹಿಂದೂ ಧರ್ಮವನ್ನು ಪಠ್ಯಕ್ರಮದಲ್ಲಿ ಅಳವಡಿಸಲು ವಿದ್ವಾಂಸರಾದ ಪಂಡಿತ ಗಂಗಾನಾಥ್‌ ಝಾ, ಮದನ್‌ ಮೋಹನ್‌ ಮಾಳವೀಯ ಸಲಹೆ ನೀಡಿದ್ದರು. ಕೆಲವು ಕಾರಣಗಳಿಂದಾಗಿ ಅಂದು ಅದು ಸಾಧ್ಯವಾಗಲಿಲ್ಲ. ಆದರೆ ಈಗ ಎರಡು ವರ್ಷದ ಸ್ನಾತಕೋತ್ತರ ಪದವಿಯನ್ನು ಆರಂಭಿಸಲಾಗಿದ್ದು, ಇದು ನಾಲ್ಕು ಸೆಮಿಸ್ಟರ್‌ಗಳನ್ನು ಹಾಗೂ 16 ಪತ್ರಿಕೆಗಳನ್ನು ಒಳಗೊಳ್ಳಲಿದೆ ಎಂದಿದ್ದಾರೆ.