ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ನಿಷೇಧಿತ ವಲಯವಾದ ಪಶ್ಚಿಮ ನಾಡಾದಲ್ಲಿ ವೀಡಿಯೊ ಚಿತ್ರೀಕರಿಸಿದ ಆರೋಪದ ಮೇಲೆ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಜಸ್ನಾ ಸಲೀಂ ವಿರುದ್ಧ ಎರಡನೇ ಬಾರಿಗೆ ಪ್ರಕರಣ ದಾಖಲಾಗಿದೆ.

ತ್ರಿಶೂರ್‌ (ನ.9): ಕೇರಳ ಹೈಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಿ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ಪಶ್ಚಿಮ ನಾಡಾದ ವೀಡಿಯೊಗಳನ್ನು ಚಿತ್ರೀಕರಿಸಿ ಹಂಚಿಕೊಂಡ ಆರೋಪದ ಮೇಲೆ ಗುರುವಾಯೂರು ದೇವಸ್ಥಾನ ಪೊಲೀಸರು ಕೋಝಿಕ್ಕೋಡ್ ಮೂಲದ ಜಸ್ನಾ ಸಲೀಂ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಕೂಡ ಆಗಿರುವ ಜಸ್ನಾ ಸಲೀಂ, ಕೃಷ್ಣನ ವರ್ಣಚಿತ್ರಗಳನ್ನು ಬಿಡಿಸುವ ಮೂಲಕ ಕಲಾವಿದೆಯಾಗಿಯೂ ಪ್ರಸಿದ್ಧಿಯಾಗಿದ್ದಾರೆ.

Add Asianetnews Kannada as a Preferred SourcegooglePreferred

ದೇವಸ್ಥಾನದ ಆಡಳಿತ ಮಂಡಳಿ ನೀಡಿದ ದೂರಿನನ್ವಯ ಪೊಲೀಸರು ಜಸ್ನಾ ಹಾಗೂ ಅವರ ಇನ್‌ಸ್ಟಾಗ್ರಾಮ್ ಖಾತೆ ನಿರ್ವಹಣೆ ಮಾಡುವ ವ್ಯಕ್ತಿ ವಿರುದ್ಧ ಬಿಎನ್‌ಎಸ್‌ ಕಾನೂನಿನಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ತ್ರಿಶೂರ್ ಭೇಟಿ ವೇಳೆ ಶ್ರೀಕೃಷ್ಣನ ಚಿತ್ರವನ್ನು ಬಿಡಿಸಿ ಉಡುಗೊರೆ ನೀಡುವ ಮೂಲಕ ಜಸ್ನಾ ಸುದ್ದಿಯಾಗಿದರು.

ಗುರುವಾಯೂರು ದೇವಸ್ವಂ ಆಡಳಿತಾಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ಗೊಂದಲ ಸೃಷ್ಟಿಸುವುದು ಮತ್ತು ಹೆಚ್ಚಿನ ಭದ್ರತಾ ವಲಯಕ್ಕೆ ಅತಿಕ್ರಮಣಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಆಕೆಯ ವಿರುದ್ಧ ಆರೋಪ ಹೊರಿಸಿದ್ದಾರೆ. ದೂರಿನ ಪ್ರಕಾರ, ಛಾಯಾಗ್ರಹಣ ಮತ್ತು ವಿಡಿಯೋಗ್ರಫಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುವ ಪಶ್ಚಿಮ ನಾಡದಲ್ಲಿ ಆಕೆ ರೀಲ್‌ಗಳನ್ನು ಚಿತ್ರೀಕರಿಸಿದ್ದಾಳೆ.

ಜಸ್ನಾ ವಿರುದ್ಧ 2ನೇ ಕೇಸ್‌

ಏಪ್ರಿಲ್ ಆರಂಭದಲ್ಲಿ, ಫೋಟೋಗ್ರಫಿ ಮತ್ತು ಮಾಧ್ಯಮ ಪ್ರವೇಶದ ಮೇಲಿನ ನಿರ್ಬಂಧಗಳ ಹೊರತಾಗಿಯೂ ದೇವಾಲಯದ ಪೂರ್ವ ನಾಡದಲ್ಲಿ ವೀಡಿಯೊಗಳನ್ನು ಚಿತ್ರೀಕರಿಸಿದ ನಂತರ ಜಸ್ನಾ ವಿರುದ್ಧ ಇದೇ ರೀತಿಯ ಅಪರಾಧಕ್ಕಾಗಿ ಪ್ರಕರಣ ದಾಖಲಿಸಲಾಗಿತ್ತು. ದೇವಾಲಯದ ನಿಯಮಗಳನ್ನು ಅವರು ಪದೇ ಪದೇ ಉಲ್ಲಂಘಿಸಿರುವುದು ಪೂಜಾ ಸ್ಥಳಗಳಲ್ಲಿ ಭದ್ರತಾ ಕ್ರಮಗಳು ಮತ್ತು ನ್ಯಾಯಾಲಯದ ನಿರ್ದೇಶನಗಳನ್ನು ಗೌರವಿಸುವ ಬಗ್ಗೆ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.

ಇದೇ ರೀತಿಯ ಪ್ರಕರಣವನ್ನು ಮತ್ತೊಬ್ಬ ಇನ್‌ಸ್ಟಾಗ್ರಾಮ್ ಬಳಕೆದಾರ R1_Bright ವಿರುದ್ಧವೂ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.