ದೇಶಾದ್ಯಂತ ಸುಭಿಕ್ಷ ಮುಂಗಾರು: ಅಸ್ಸಾಂನಲ್ಲಿ ಪ್ರವಾಹಕ್ಕೆ 58 ಬಲಿ
ಕಳೆದ ತಿಂಗಳಷ್ಟೇ ಭಾರಿ ಉಷ್ಣಹವೆ ಹಾಗೂ ಬಿಸಿಲಿನಿಂದ ಸುಡುತ್ತಿದ್ದ ಉತ್ತರಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಸ್ಸಾಂ, ಮಣಿಪುರದಲ್ಲಿ ವರುಣನ ಕೃಪೆ ಜೋರಾಗಿದೆ.
ನವದೆಹಲಿ: ಕಳೆದ ತಿಂಗಳಷ್ಟೇ ಭಾರಿ ಉಷ್ಣಹವೆ ಹಾಗೂ ಬಿಸಿಲಿನಿಂದ ಸುಡುತ್ತಿದ್ದ ಉತ್ತರಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಸ್ಸಾಂ, ಮಣಿಪುರದಲ್ಲಿ ವರುಣನ ಕೃಪೆ ಜೋರಾಗಿದೆ. ಈ ರಾಜ್ಯಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಸಾಮಾನ್ಯ ಜನಜೀವನ ಅಸ್ತವ್ಯಸ್ಥಗೊಂಡಿರುವುದರ ಜೊತೆಗೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಹಲವು ರಾಜ್ಯಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಭಾರೀ ಮಳೆಯ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಇನ್ನೊಂದೆಡೆ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ.
ಉತ್ತರಾಖಂಡ, ಮಹಾರಾಷ್ಟ್ರ, ಪಂಜಾಬ್ನಲ್ಲಿ ಮುಂದಿನ 2-3 ದಿನಗಳ ಕಾಲ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇನ್ನು ಭಾರಿ ಮಳೆ ಪ್ರವಾಹದಿಂದ ಅಕ್ಷರಶಃ ನಲುಗುತ್ತಿರುವ ಅಸ್ಸಾಂಗೆ ಸದ್ಯದ ಮಟ್ಟಿಗೆ ಯಾವುದೇ ಉತ್ತಮ ವಾತಾವರಣ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಮಹಾರಾಷ್ಟ್ರದ ಹಲವೆಡೆ ಭಾರೀ ಮಳೆಯಿಂದ ಭೂಕುಸಿತ, ಗುಡ್ಡ ಕುಸಿತ ಸಂಭವಿಸಿದ್ದು, ರೈಲು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಮೈದುಂಬಿದ ತುಂಗಭದ್ರೆ ನದಿಯಂಗಳದಲ್ಲಿ ಅಪರೂಪದ ನೀರುನಾಯಿಗಳ ಚಿನ್ನಾಟ
ಭಾರತದಲ್ಲಿ ಸುಭಿಕ್ಷ ಮಳೆ
ನವದೆಹಲಿ: ಮೇ 30ಕ್ಕೇ ದೇಶದ ಕರಾವಳಿ ಪ್ರವೇಶಿಸಿದರೂ ಕೊನೆಗೆ ಉತ್ತರ ಮತ್ತು ವಾಯುವ್ಯ ಭಾರತದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಸದ ಮುಂಗಾರು ಮಾರುತಗಳು ಕೊನೆಗೂ ಭಾರತದಲ್ಲಿ ಸುಭಿಕ್ಷ ಮಳೆ ಸುರಿಸಿವೆ. ಜೂನ್ ತಿಂಗಳಿನಲ್ಲಿ ದೇಶದಲ್ಲಿ ಶೇ.11ರಷ್ಟು ಮಳೆ ಕೊರತೆ ದಾಖಲಾಗಿದ್ದರೆ, ಜುಲೈ ಮೊದಲ ವಾರದಲ್ಲಿ ಸುರಿದ ಭರ್ಜರಿ ಮಳೆಯ ಪರಿಣಾಮ ಕೊರತೆಯನ್ನೂ ಮೀರಿ ಅಧಿಕ ಮಳೆ ದಾಖಲಾಗಿದೆ.
ಜೂನ್ ತಿಂಗಳಲ್ಲಿ ವಾಯುವ್ಯ ಭಾರತದಲ್ಲಿ ಶೇ.33, ಮಧ್ಯಭಾರತದಲ್ಲಿ ಶೇ.14, ಈಶಾನ್ಯ ಭಾರತದಲ್ಲಿ ಶೇ.13ರಷ್ಟು ಮಳೆ ಕೊರತೆಯಾಗಿದ್ದರೆ, ದಕ್ಷಿಣ ಭಾರತದಲ್ಲಿ ಮಾತ್ರವೇ ಶೇ.14ರಷ್ಟು ಅಧಿಕ ಮಳೆ ಸುರಿದಿತ್ತು. ಅಂದರೆ ಜೂನ್ ತಿಂಗಳ ನಿರೀಕ್ಷಿತ 165.3 ಮಿ.ಮೀ ಬದಲಾಗಿ 147.2 ಮಿ.ಮೀ ನಷ್ಟು ಮಾತ್ರವೇ ಮಳೆ ಸುರಿದಿತ್ತು. ಪರಿಣಾಮ ಶೇ.11ರಷ್ಟು ಮಳೆ ಕೊರತೆ ದಾಖಲಾಗಿತ್ತು.
ಆದರೆ ಜುಲೈ ತಿಂಗಳ ಮೊದಲ ವಾರದಲ್ಲಿ ಈ ಹಿಂದೆ ಕೊರತೆಯಾಗಿದ್ದ ಪ್ರದೇಶಗಳೂ ಸೇರಿದಂತೆ ದೇಶವ್ಯಾಪಿ ಉತ್ತಮ ಮಳೆ ಸುರಿದಿದೆ. ಜೂ.1ರ ಬಳಿಕ ಇದುವರೆಗೂ 213.3 ಮಿ.ಮೀ ಮಳೆಗೆ ಬದಲಾಗಿ 214.9 ಮಿ.ಮೀನಷ್ಟು ಮಳೆ ಸುರಿದೆ. ಈ ಪೈಕಿ ವಾಯುವ್ಯ ಭಾರತದಲ್ಲಿ ಶೇ.3ರಷ್ಟು ಮತ್ತು ದಕ್ಷಿಣ ದ್ವೀಪಕಲ್ಪ ಪ್ರದೇಶದಲ್ಲಿ ಶೇ.13ರಷ್ಟು ಹೆಚ್ಚು ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜುಲೈ ತಿಂಗಳ ಆರಂಭದಲ್ಲೇ ತುಂಬಿ ಹರಿದ ಮಿನಿ ನಯಾಗರ ಖ್ಯಾತಿಯ ಚಿಕ್ಲಿಹೊಳೆ ಜಲಾಶಯ
ಮೇ 30ರಂದು ಕೇರಳ ಮತ್ತು ಈಶಾನ್ಯ ರಾಜ್ಯಗಳ ದೇಶ ಪ್ರವೇಶಿಸಿದ್ದ ಮುಂಗಾರು ಮಾರುತಗಳು ಮಹಾರಾಷ್ಟ್ರ ಪ್ರವೇಶ ಮಾಡುವವವರೆಗೂ ಸಾಮಾನ್ಯವಾಗಿತ್ತು. ಆದರೆ ನಂತರದಲ್ಲಿ ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಬಿಹಾರ, ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯದಲ್ಲಿ ಸೂಕ್ತ ಮಳೆ ಸುರಿಸುವಲ್ಲಿ ವಿಫಲವಾಗಿತ್ತು.ಭಾರತ ವಿಶ್ವದಲ್ಲೇ ಅತ್ಯಧಿಕ ಭತ್ತ, ಗೋಧಿ ಮತ್ತು ಕಬ್ಬು ಬೆಳೆಯುವ ದೇಶವಾಗಿದ್ದು, ಮುಂಗಾರಿನಲ್ಲಿ ಉಂಟಾಗುವ ಯಾವುದೇ ಕೊರತೆ ಜಾಗತಿಕ ಪರಿಣಾಮಗಳಿಗೆ ಕಾರಣವಾಗುತ್ತದೆ.