ಗೋವಾದ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಕರ್ನಾಟಕ ಮೂಲದ ದೀಕ್ಷಾ ಪರ್ವಾಡ್ಕರ್ (23) ಸಾವನ್ನಪ್ಪಿದ್ದಾರೆ. ಉದ್ಯಮಿಯೊಬ್ಬರ ಪುತ್ರ ಚಲಾಯಿಸುತ್ತಿದ್ದ ನೋಂದಣಿಯಾಗದ ಹೊಸ ಮಿನಿ ಕೂಪರ್ ಕಾರು, ಕೆಲಸ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ದೀಕ್ಷಾ ಮತ್ತು ಆಕೆಯ ಸಹೋದ್ಯೋಗಿಗೆ ಡಿಕ್ಕಿ ಹೊಡೆದಿದೆ.

ಪಣಜಿ (ಏ.7): ಗೋವಾದ ಬಂಬೋಲಿಮ್-ದೋನಾ ಪೌಲಾ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕ ಮೂಲದ 23 ವರ್ಷದ ಯುವತಿ ಸಾವನ್ನಪ್ಪಿದ್ದು, ಆಕೆಯ ಸಹೋದ್ಯೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಉದ್ಯಮಿಯೊಬ್ಬರ ಪುತ್ರ ಐಷಾರಾಮಿ ಕಾರನ್ನು ಚಾಲನೆ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಮೃತ ಯುವತಿಯನ್ನು ದೀಕ್ಷಾ ಪರ್ವಾಡ್ಕರ್ (23) ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಡಿ. ಅರುಣ್‌ಕುಮಾರ್ (26) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಗೋವಾದ ಐಷಾರಾಮಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಕೆಲಸ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ, ಮಣಿಪಾಲ್ ಆಸ್ಪತ್ರೆಯ ಸಮೀಪ ಮಿನಿ ಕೂಪರ್ ಕನ್ವರ್ಟಿಬಲ್ ಕಾರು ಇವರ ಬೈಕ್‌ಗೆ ವೇಗವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆ ಎಷ್ಟು ಜೋರಾಗಿತ್ತೆಂದರೆ, ದೀಕ್ಷಾ ಮತ್ತು ಅರುಣ್‌ಕುಮಾರ್ ಬೈಕ್‌ನಿಂದ ಸುಮಾರು 50 ಮೀಟರ್ ದೂರಕ್ಕೆ ಎಸೆಯಲ್ಪಟ್ಟರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ದೀಕ್ಷಾ ಕೊನೆಯುಸಿರೆಳೆದಿದ್ದಾರೆ. ಅರುಣ್‌ಕುಮಾರ್ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಉದ್ಯಮಿ ಆಂಡ್ರ್ಯೂ ಡಯಾಸ್ ಪುತ್ರನ ಕಾರು

ಮಿನಿ ಕೂಪರ್ ಚಾಲನೆ ಮಾಡುತ್ತಿದ್ದವನನ್ನು ಗೋವಾದ ಉದ್ಯಮಿ ಆಂಡ್ರ್ಯೂ ಡಯಾಸ್ ಅವರ ಪುತ್ರ ಡಾರಿಯಸ್ ಡಯಾಸ್ (21) ಎಂದು ಗುರುತಿಸಲಾಗಿದೆ. ಆಂಡ್ರ್ಯೂ ಡಯಾಸ್, ಗೋವಾದಲ್ಲಿ ಬೇಕರಿ ಮತ್ತು ಹೋಟೆಲ್ ವ್ಯವಹಾರಗಳನ್ನು ಹೊಂದಿದ್ದಾರೆ. ಅಪಘಾತಕ್ಕೀಡಾದ ಕಾರು ಇನ್ನೂ ನೋಂದಣಿಯಾಗದ ಹೊಸ ಕಾರು ಎಂದು ತಿಳಿದುಬಂದಿದೆ. ಕಾರಿನ ಮೇಲೆ ತಾತ್ಕಾಲಿಕ ನಂಬರ್ ಪ್ಲೇಟ್ ಇದ್ದು, ಹೊಸ ಕಾರುಗಳಿಗೆ ಕಟ್ಟುವ ರಿಬ್ಬನ್ ಕೂಡ ಕಾರಿನ ಬಾಗಿಲುಗಳಿಗೆ ಇತ್ತು. ಪೊಲೀಸರು ಡಾರಿಯಸ್ ಡಯಾಸ್‌ನನ್ನು ವಶಕ್ಕೆ ಪಡೆದಿದ್ದಾರೆ.

Scroll to load tweet…

ತನಿಖೆಯಲ್ಲಿದೆ ಪಾರದರ್ಶಕತೆಯ ಕೊರತೆ?

ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 106ರಡಿ (ನಿರ್ಲಕ್ಷ್ಯದಿಂದ ಸಾವು ಸಂಭವಿಸುವುದು) ಪ್ರಕರಣ ದಾಖಲಿಸಿದ್ದಾರೆ. ಆದರೆ, ಗೋವಾದ 'ಓ ಹೆರಾಲ್ಡ್' ಪತ್ರಿಕೆಯ ವರದಿಯ ಪ್ರಕಾರ, ಅಪಘಾತದ ತನಿಖೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಸಂತ್ರಸ್ತೆಯ ಕುಟುಂಬವು ಗಂಭೀರವಾಗಿ ಆರೋಪಿಸಿದೆ. ಪೊಲೀಸರು ತನಿಖೆಯ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋವಾದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಭೀಕರ ಅಪಘಾತಗಳು ಹೆಚ್ಚುತ್ತಿವೆ. ಕೇವಲ ಎರಡು ತಿಂಗಳ ಹಿಂದೆಯಷ್ಟೇ ಉತ್ತರ ಗೋವಾದಲ್ಲಿ ನಡೆದ ಕಾರು ಅಪಘಾತದಲ್ಲಿ ಭೋಪಾಲ್‌ನ ಪ್ರವಾಸಿ ಭಗತ್‌ರಾಮ್ ಶರ್ಮಾ (65) ಸಾವನ್ನಪ್ಪಿದ್ದರು. ಆ ಪ್ರಕರಣದಲ್ಲಿ ದೆಹಲಿಯ 19 ವರ್ಷದ ಶೌರ್ಯ ಗೋಯಲ್ ಎಂಬಾತ ಮಹೀಂದ್ರಾ ಥಾರ್ ಕಾರನ್ನು ಚಾಲನೆ ಮಾಡುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.