ಗೋವಾಕ್ಕೆ ಹೊರಟಿದ್ದ ವಿಮಾನ ಬೆಂಗ್ಳೂರಲ್ಲಿ ತುರ್ತು ಭೂಸ್ಪರ್ಶ
ಚೆನ್ನೈನಿಂದ ಗೋವಾಗೆ ಹೊರಟಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂ ಸ್ಪರ್ಷ ಮಾಡಿದೆ. ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.
ಬೆಂಗಳೂರು [ಜ.03]: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾರ ಚೆನ್ನೈ-ಗೋವಾ ನಡುವೆ ಹಾರಾಟ ಮಾಡುತ್ತಿದ್ದ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
68 ಮಂದಿ ಪ್ರಯಾಣಿಕರನ್ನು ಹೊತ್ತ ಸ್ಪೈಸ್ ಜೆಟ್ ಎಸ್ಜಿ-3105 ವಿಮಾನ ಬೆಳಗ್ಗೆ 11.04ಕ್ಕೆ ಚೆನ್ನೈನಿಂದ ಹೊರಟು ಮಧ್ಯಾಹ್ನ 12.10ಕ್ಕೆ ಗೋವಾ ತಲುಪಬೇಕಿತ್ತು. ಆದರೆ, ಚೆನ್ನೈನಿಂದ ಹೊರಟ ನಂತರ ವಿಮಾನದ ಕಾಕ್ಪಿಟ್ನ ವಿಂಡ್ಶೀಲ್ಡ್ನಲ್ಲಿ ಬಿರುಕು ಕಾಣಿಸಿಕೊಂಡಿದೆ. ತಕ್ಷಣ ವಿಮಾನದ ಪೈಲೆಟ್ 11.56ಕ್ಕೆ ತುರ್ತು ಭೂಸ್ಪರ್ಶಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂದೇಶ ಕಳುಹಿಸಿದ್ದರು.
ಪೈಲೆಟ್ ಕಳುಹಿಸಿದ ಸಂದೇಶ ಪಡೆದ ಕೆಐಎ ಅಧಿಕಾರಿಗಳು ಸ್ಪೈಸ್ಜೆಟ್ ಎಸ್ಜಿ-3105 ವಿಮಾನದ ಭೂಸ್ಪರ್ಶಕ್ಕಾಗಿ ವ್ಯವಸ್ಥೆ ಮಾಡಿಕೊಂಡು ಸಂದೇಶ ರವಾನಿಸಿದ್ದರು. ಇದರಿಂದಾಗಿ ಮಧ್ಯಾಹ್ನ 12.17ಕ್ಕೆ ವಿಮಾನ ಅತ್ಯಂತ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದು, ವಿಮಾನದಲ್ಲಿದ್ದ 68 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಫಾಸ್ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ಟೋಲ್ ಕಟ್ಟಬೇಕಿಲ್ಲ...
ವಿಂಡ್ಶೀಲ್ಡ್ ದುರಸ್ತಿ ನಂತರ ಸಂಜೆ 4.30ಕ್ಕೆ ಪ್ರಯಾಣಿಕರೊಂದಿಗೆ ವಿಮಾನ ಗೋವಾಕ್ಕೆ ತೆರಳಿತು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಖಚಿತ ಪಡಿಸಿದ್ದಾರೆ.