ಶರದ್ ಪವಾರ್ ಹೆಸರು, ಚಿತ್ರ ಬಳಸಿಕೊಳ್ಳಬೇಡಿ, ಅಜಿತ್ ಪವಾರ್ಗೆ ಸೂಚಿಸಿದ ಸುಪ್ರೀಂ ಕೋರ್ಟ್!
ಎನ್ಸಿಪಿ ವಿಭಜನೆಯ ಹೊರತಾಗಿಯೂ ಶರದ್ ಪವಾರ್ ಅವರ ಚಿತ್ರ ಹಾಗೂ ಹೆಸರನ್ನು ಅಜಿತ್ ಪವಾರ್ ಬಣ ಬಳಸುತ್ತಿರುವ ಸಂಬಂಧ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ನವದೆಹಲಿ (ಮಾ.14): ಸುಪ್ರೀಂ ಕೋರ್ಟ್ ಗುರುವಾರ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣಕ್ಕೆ ಚಾಟಿ ಬೀಸಿದೆ. ಚುನಾವಣಾ ಪ್ರಚಾರದಲ್ಲಿ ಎನ್ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ಹೆಸರು ಹಾಗೂ ಚಿತ್ರವನ್ನು ಬಳಕೆ ಮಾಡಿಕೊಳ್ಳುತ್ತಿರುವ ವಿಚಾರದಲ್ಲಿ ಅಜಿತ್ ಪವಾರ್ ಬಣವನ್ನು ಪ್ರಶ್ನೆ ಮಾಡಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಶನಿವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಅಜಿತ್ ಪವಾರ್ ಬಣಕ್ಕೆ ಸೂಚಿಸಿದ್ದು, ಪಕ್ಷದ ವಿಭಜನೆಯ ಹೊರತಾಗಿಯೂ ಶರದ್ ಪವಾರ್ ಅವರ ಚಿತ್ರವನ್ನು ಬಳಸುವುದನ್ನು ಮುಂದುವರಿಸುವುದರ ಹಿಂದಿನ ವಿಚಾರವೇನು ಎಂದು ಪ್ರಶ್ನೆ ಮಾಡಿದೆ. ನೀವೀಗ ಭಿನ್ನ ರಾಜಕೀಯ ಪಕ್ಷ. ಅವರೊಂದಿಗೆ ಇರಬಾರದು ಎಂದು ನೀವು ತೀರ್ಮಾನ ಮಾಡಿದ್ದೀರಿ. ಹೀಗಿದ್ದಾಗ ಅವರ ಚಿತ್ರ ಹಾಗೂ ಹೆಸರನ್ನೇಕೆ ಬಳಸುತ್ತಿದ್ದೀರಿ. ನಿಮ್ಮದೇ ಹೊಸ ಗುರುತಿನೊಂದಿಗೆ ಚುನಾವಣೆಗೆ ಹೋಗಿ ಎಂದು ಪೀಠ ತಿಳಿಸಿದೆ.
"ಶರದ್ ಪವಾರ್ ಅವರ ಹೆಸರು, ಚಿತ್ರಗಳನ್ನು ಬಳಸಲಾಗುವುದಿಲ್ಲ ಎಂದು ನಮಗೆ ನಿರ್ದಿಷ್ಟ ಮತ್ತು ಬೇಷರತ್ತಾದ ಒಪ್ಪಂದದ ಅಗತ್ಯವಿದೆ" ಎಂದು ಪೀಠ ತಿಳಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 19 ರಂದು ನಡೆಸುವುದಾಗಿ ಕೋರ್ಟ್ ತಿಳಿಸಿದೆ.
ಅಜಿತ್ ಪವಾರ್ ಬಣ ಮತದಾರರನ್ನು ಓಲೈಸಲು ಶರದ್ ಪವಾರ್ ಅವರ ಹೆಸರು ಮತ್ತು ಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಶರದ್ ಪವಾರ್ ಗುಂಪು ಸಲ್ಲಿಸಿದ ಅರ್ಜಿಯನ್ನು ಅನುಸರಿಸಿ ಸುಪ್ರೀಂ ಕೋರ್ಟ್ ಈ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಲ್ಲಿ ಬಿರುಕು ಉಂಟಾಗಿ ಅಜಿತ್ ಪವಾರ್ ಹೆಚ್ಚಿನ ಶಾಸಕರನ್ನು ಕರೆದುಕೊಂಡು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಆ ಬಳಿಕ ನಿಜವಾದ ಎನ್ಸಿಪಿ ಪಕ್ಷ ತಮ್ಮದೆಂದು ಅವರು ವಾದಿಸಿದ್ದರು. ಸುದೀರ್ಘ ಸುಪ್ರೀಂ ಕೋರ್ಟ್ ಹೋರಾಟದಲ್ಲಿ ಕೊನೆಗೆ ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯೇ ನಿಜವಾದ ಪಕ್ಷ ಎಂದು ತೀರ್ಪು ನೀಡಲಾಗಿತ್ತು. ಹೆಸರು ಹಾಗೂ ಪಕ್ಷದ ಚಿಹ್ನೆಯನ್ನೂ ಪಡೆಯಲು ಅವರು ಯಶಸ್ವಿಯಾಗಿದ್ದರು. ಭಾರತೀಯ ಚುನಾವಣಾ ಆಯೋಗವು "ಶಾಸಕ ಬಹುಮತದ ಪರೀಕ್ಷೆ" ಆಧಾರದ ಮೇಲೆ ಅಜಿತ್ ಬಣವನ್ನು ನಿಜವಾದ NCP ಎಂದು ಗುರುತಿಸಿತ್ತು.
“ಅಜಿತ್ ಪವಾರ್ ಬಣವು ಶಾಸಕರ ಬಹುಮತದ ಬೆಂಬಲವನ್ನು ಹೊಂದಿದ್ದು. ಆಯೋಗವು ಅಜಿತ್ ಪವಾರ್ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಎಂದು ಹೇಳುತ್ತದೆ ಮತ್ತು ಅದರ ಹೆಸರು ಮತ್ತು 'ಗಡಿಯಾರ'ದ ಚಿಹ್ನೆಯನ್ನು ಬಳಸಲು ಅರ್ಹರಾಗಿದ್ದಾರೆ" ಎಂದು ಇಸಿಐ ತಿಳಿಸಿತ್ತು. ಶರದ್ ಪವಾರ್ ಬಣಕ್ಕೆ 'ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ಚಂದ್ರ ಪವಾರ್' ಅನ್ನು ಪಕ್ಷದ ಹೆಸರಾಗಿ ನಿಗದಿ ಮಾಡಿದೆ.
ಕೈತಪ್ಪಿ ಹೋದ ಎನ್ಸಿಪಿ, ಹೊಸ ಹೆಸರು ಪಡೆದುಕೊಂಡ ಶರದ್ ಪವಾರ್ ಬಣ!
ಇದಕ್ಕೂ ಮುನ್ನ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ನೇತೃತ್ವದ ಗುಂಪನ್ನು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಎಂದು ಗುರುತಿಸುವ ಚುನಾವಣಾ ಆಯೋಗದ ಫೆಬ್ರವರಿ 6 ರ ಆದೇಶದ ವಿರುದ್ಧ ಶರದ್ ಪವಾರ್ ಅವರ ಮನವಿಯ ಮೇಲೆ ಸುಪ್ರೀಂ ಕೋರ್ಟ್ ಅಜಿತ್ ಪವಾರ್ ನೇತೃತ್ವದ ಬಣದಿಂದ ಪ್ರತಿಕ್ರಿಯೆ ಕೇಳಿತ್ತು.
Breaking: ಶರದ್ ಪವಾರ್ಗೆ ಬಿಗ್ ಶಾಕ್, 'ಗಡಿಯಾರ' ಕಳೆದುಕೊಂಡ ಎನ್ಸಿಪಿ ನಾಯಕ!