* ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಳ್ಳಿಯಲ್ಲಿ ಅಮಾನವೀಯ ಘಟನೆ* ಮೂಢನಂಬಿಕೆಗೆ ಮಾರುಹೋದ ಜನರು* ದೇವರನ್ನು ಒಲಿಸಲು ಹೆಣ್ಮಕ್ಕಳನ್ನು ಬೆತ್ತಲೆಗೊಳಿಸಿ ಊರಿಡೀ ಮೆರವಣಿಗೆ

ಭೋಪಾಲ್(ಸೆ.07): ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಬರಗಾಲವನ್ನು ದೂರ ಮಾಡಿ, ಮಳೆ ಬರುವಂತೆ ದೇವತೆಗಳನ್ನು ಸಂತೃಪ್ತಿಗೊಳಿಸಲು ಆರು ಹೆಣ್ಮಕ್ಕಳನ್ನು ಬೆತ್ತಲೆಯಾಗಿ ಊರಿಡೀ ಮರವಣಿಗೆ ಮಾಡಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮೂಢನಂಬಿಕೆಗೆ ಬಲಿಯಾಗಿ, ಇಂತಹದ್ದೊಂದು ಆಚರಣೆ ನಡೆದಿದೆ ಎಂಬ ಮಾಹಿತಿ ಪಡೆದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಈ ಬಗ್ಗೆ ಕ್ರಮ ವಹಿಸಲು ದಾಮೋಹ್ ಜಿಲ್ಲಾಡಳಿತಕ್ಕೆ ಕರೆ ನೀಡಿದೆ. ಬುಂಡೇಲ್‌ಖಂಡ್ ಪ್ರದೇಶದ ದಮೋಹ್ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಮೀ ದೂರದಲ್ಲಿರುವ ಜಬೇರಾ ಪೊಲೀಸ್ ಠಾಣೆ ಪ್ರದೇಶದ ಬನಿಯಾ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿಯನ್ನು ಎನ್‌ಸಿಪಿಸಿಆರ್‌ಗೆ ಸಲ್ಲಿಸಲಾಗುವುದು ಎಂದು ದಾಮೋಹ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಸ್ ಕೃಷ್ಣ ಚೈತನ್ಯ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಪ್ರದೇಶದ ಜನರು ಮಳೆಯ ಕೊರತೆ ಎದುರಾದಾಗ ದೇವರನ್ನು ಮೆಚ್ಚಿಸಲು ಕೆಲವು ಅಪ್ರಾಪ್ತ ಬಾಲಕಿಯರನ್ನು ಬೆತ್ತಲೆಯನ್ನಾಗಿ ಮಾಡುವ ಸಂಪ್ರದಾಯ ಈ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆಂಬ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಿಆರ್ ಟೆನಿವಾರ್ ತಿಳಿಸಿದ್ದಾರೆ. "ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು," ಎಂದೂ ತಿಳಿಸಿದ್ದು, ಇದೆಲ್ಲವನ್ನೂ ಅವರು ಮಳೆಗಾಗಿ ಮಾಡಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮಾಹಿತಿಯನ್ವಯ, ಬರಗಾಲದಿಂದ ಹಾಗೂ ಮಳೆ ಕೊರತೆಯಿಂದ, ಹಳೆಯ ನಂಬಿಕೆಯಂತೆ, ಹಳ್ಳಿಯ ಚಿಕ್ಕ ಮಕ್ಕಳನ್ನು ಬೆತ್ತಲೆಯಾಗಿಸಿ ಅವರ ಭುಜದ ಮೇಲೆ ಗೂಡನ್ನು ಇರಿಸಿ ಕಪ್ಪೆಯನ್ನು ಈ ಗೂಡಿಗೆ ಕಟ್ಟಲಾಗುತ್ತದೆ. ಬಳಿಕ ಹಳ್ಳಿಯ ಉದ್ದಕ್ಕೂ ಹುಡುಗಿಯರನ್ನು ಮೆರವಣಿಗೆ ಮಾಡಿಸಲಾಗುತ್ತದೆ. ಮಹಿಳೆಯರು ಪ್ರಾರ್ಥಿಸುತ್ತಾ ಮುಂದೆ ಹೋಗುತ್ತಾರೆ. ದಾರಿಯಲ್ಲಿ ಸಿಗುವ ಮನೆಗಳಿಂದ, ಈ ಮಹಿಳೆಯರು ಹಿಟ್ಟು, ದ್ವಿದಳ ಧಾನ್ಯಗಳು ಅಥವಾ ಇತರ ಆಹಾರ ಪದಾರ್ಥಗಳನ್ನು ಪಡೆಯುತ್ತಾರೆ. ಈ ಆಹಾರ ಪದಾರ್ಥಗಳನ್ನು ಹಳ್ಳಿಯ ದೇವಸ್ಥಾನಕ್ಕೆ ನೀಡಲಾಗುತ್ತದೆ. ಬಳಿಕ ಪೂಜೆಯನ್ನು ಮಾಡಲಾಗುತ್ತದೆ. ಇದರಿಂದ ಮಳೆ ಬರುತ್ತದೆ ಎಂದು ನಂಬಲಾಗಿದೆ.

ಈ ಇಡೀ ಪ್ರಕ್ರಿಯೆ ವೇಳೆ ಈ ಮಕ್ಕಳ ಪೋಷಕರು ಕೂಡಾ ಭಾಗಿಯಾಗಿದ್ದು, ಮೂಢನಂಬಿಕೆಯಲ್ಲಿ ವಿಶ್ವಾಸವಿರಿಸಿದ್ದಾರೆ. ಯಾವುದೇ ಗ್ರಾಮಸ್ಥರು ಈ ಬಗ್ಗೆ ಯಾವುದೇ ದೂರು ನೀಡಿಲ್ಲ. "ಹೀಗಿರುವಾಗ ಆಡಳಿತವು ಇಂತಹ ಮೂಢನಂಬಿಕೆ ತಪ್ಪು ಎಂಬ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಿದೆ.