ಸ್ವಿಗ್ಗಿ, ಜೊಮಾಟೊ, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಇತರ ಫ್ಲಾಟ್‌ಫಾರ್ಮ್‌ಗಳ ಕಾರ್ಮಿಕರು ಕುಸಿತದ ಆದಾಯ, ಅಸುರಕ್ಷಿತ ಕೆಲಸದ ಮಾದರಿಗಳು ಮತ್ತು ಸಾಮಾಜಿಕ ಭದ್ರತೆಯ ಕೊರತೆಯ ಸಲುವಾಗಿ ಪ್ರತಿಭಟನೆ ಮಾಡಲಿದ್ದಾರೆ. 

ಬೆಂಗಳೂರು (ಡಿ.24): ಸ್ವಿಗ್ಗಿ, ಜೊಮಾಟೊ, ಜೆಪ್ಟೊ, ಬ್ಲಿಂಕಿಟ್, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಮತ್ತು ಫುಡ್‌ ಡೆಲಿವರಿ ಫ್ಲಾಟ್‌ಫಾರ್ಮ್‌ಗಳೊಂದಿಗೆ ಸಂಬಂಧ ಹೊಂದಿರುವ ಗಿಗ್‌ ಹಾಗೂ ಡೆಲಿವರಿ ಏಜೆಂಟ್‌ಗಳು ಡಿಸೆಂಬರ್ 25 ಮತ್ತು ಡಿಸೆಂಬರ್ 31, 2025 ರಂದು ಅಖಿಲ ಭಾರತ ಮುಷ್ಕರವನ್ನು ಘೋಷಿಸಿದ್ದಾರೆ. ವೇತನ, ಸುರಕ್ಷತೆ, ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ರಕ್ಷಣೆಯ ಬಗ್ಗೆ ಕಳವಳಗಳು ಸೇರಿದಂತೆ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಆರ್ಥಿಕತೆಯಲ್ಲಿ ಹದಗೆಡುತ್ತಿರುವ ಕೆಲಸದ ಪರಿಸ್ಥಿತಿಗಳನ್ನು ಪ್ರತಿಭಟಿಸಲು ಭಾರತೀಯ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟ ಮತ್ತು ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಒಕ್ಕೂಟವು ಮುಷ್ಕರಕ್ಕೆ ಕರೆ ನೀಡಿವೆ.

Add Asianetnews Kannada as a Preferred SourcegooglePreferred

ಡೆಲಿವರಿ ಏಜೆಂಟ್‌ಗಳು ದೀರ್ಘ ಕೆಲಸದ ಸಮಯ, ಕುಸಿಯುತ್ತಿರುವ ಆದಾಯ, ಅಸುರಕ್ಷಿತ ಡೆಲಿವರಿ ಟಾರ್ಗೆಟ್‌ ಗುರಿಗಳು, ಅನಿಯಂತ್ರಿತ ಅಕೌಂಟ್‌ ನಿಷ್ಕ್ರಿಯಗೊಳಿಸುವಿಕೆ ಮತ್ತು ಕಲ್ಯಾಣ ಸವಲತ್ತುಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಗರಿಷ್ಠ ಬೇಡಿಕೆಯ ಅವಧಿಗಳು ಮತ್ತು ಹಬ್ಬಗಳಲ್ಲಿ ಇದು ಹೆಚ್ಚು ಎಂದಿದ್ದಾರೆ.

ಹಲವು ಬೇಡಿಕೆ ಇಟ್ಟ ಅಸೋಸಿಯೇಷನ್‌

ಪಾರದರ್ಶಕ ಮತ್ತು ನ್ಯಾಯಯುತ ವೇತನ ರಚನೆಗಳು, ಸುರಕ್ಷತಾ ಕಾಳಜಿಗಳನ್ನು ಉಲ್ಲೇಖಿಸಿ "10 ಮಿನಿಟ್ಸ್‌ ಡೆಲಿವರಿ" ಮಾದರಿಗಳನ್ನು ಹಿಂತೆಗೆದುಕೊಳ್ಳುವುದು, ಸರಿಯಾದ ಪ್ರಕ್ರಿಯೆಯಿಲ್ಲದೆ ಖಾತೆ ನಿರ್ಬಂಧಿಸುವಿಕೆಯನ್ನು ಕೊನೆಗೊಳಿಸುವುದು, ಸುಧಾರಿತ ಸುರಕ್ಷತಾ ಸಾಧನಗಳು ಮತ್ತು ಅಪಘಾತ ವಿಮೆ ಮತ್ತು ಅಲ್ಗಾರಿದಮಿಕ್ ತಾರತಮ್ಯವಿಲ್ಲದೆ ಕೆಲಸದ ಹಂಚಿಕೆಯನ್ನು ಖಚಿತಪಡಿಸುವುದು ಇವು ಬೇಡಿಕೆಗಳಲ್ಲಿ ಸೇರಿವೆ ಎಂದು ಒಕ್ಕೂಟಗಳ ಹೇಳಿಕೆ ತಿಳಿಸಿದೆ.

ಇತರ ಬೇಡಿಕೆಗಳಲ್ಲಿ ಕಡ್ಡಾಯ ವಿಶ್ರಾಂತಿ ವಿರಾಮಗಳು, ಸಮಂಜಸವಾದ ಕೆಲಸದ ಸಮಯ, ಅಪ್ಲಿಕೇಶನ್‌ಗಳಲ್ಲಿ ಉತ್ತಮ ತಾಂತ್ರಿಕ ಮತ್ತು ಕುಂದುಕೊರತೆ ಬೆಂಬಲ ಮತ್ತು ಆರೋಗ್ಯ ವಿಮೆ, ಅಪಘಾತ ವ್ಯಾಪ್ತಿ ಮತ್ತು ಪಿಂಚಣಿ ನಿಬಂಧನೆಗಳಂತಹ ಸಾಮಾಜಿಕ ಭದ್ರತಾ ಪ್ರಯೋಜನಗಳಿಗೆ ಪ್ರವೇಶ ಸೇರಿವೆ.

ನ್ಯಾಯ, ಘನತೆಗಾಗಿ ಮುಷ್ಕರ

ಇಂಥ ಕಂಪನಿಗಳನ್ನು ನಿಯಂತ್ರಿಸಲು, ಕಾರ್ಮಿಕ ರಕ್ಷಣೆಯನ್ನು ಜಾರಿಗೊಳಿಸಲು, ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಚೌಕಟ್ಟುಗಳನ್ನು ಜಾರಿಗೆ ತರಲು ಒಕ್ಕೂಟಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿವೆ.

ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್‌ನ ಸ್ಥಾಪಕ ಅಧ್ಯಕ್ಷ ಮತ್ತು ಭಾರತೀಯ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟದ ಸಹ-ಸಂಸ್ಥಾಪಕ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶೇಕ್ ಸಲಾವುದ್ದೀನ್ ಮುಷ್ಕರವನ್ನು ಘೋಷಿಸುತ್ತಾ, ಡೆಲಿವರಿ ಏಜೆಂಟ್‌ಗಳು ಅಸುರಕ್ಷಿತ ಕೆಲಸದ ಮಾದರಿಗಳು, ಕುಸಿಯುತ್ತಿರುವ ಆದಾಯ ಮತ್ತು ಸಾಮಾಜಿಕ ರಕ್ಷಣೆಯ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

"ಈ ಮುಷ್ಕರವು ನ್ಯಾಯ, ಘನತೆ ಮತ್ತು ಹೊಣೆಗಾರಿಕೆಗಾಗಿ ಸಾಮೂಹಿಕ ಕರೆಯಾಗಿದೆ. ಕಾರ್ಮಿಕರ ಜೀವಗಳನ್ನು ಬಲಿಕೊಟ್ಟು ಪ್ಲಾಟ್‌ಫಾರ್ಮ್ ಕಂಪನಿಗಳು ಲಾಭ ಗಳಿಸುತ್ತಿರುವಾಗ ಸರ್ಕಾರವು ಇನ್ನು ಮುಂದೆ ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತಾವಿತ ಮುಷ್ಕರವು ಎರಡು ದಿನಗಳಲ್ಲಿ ಹಲವು ನಗರಗಳಲ್ಲಿ ಡೆಲಿವರಿ ಸರ್ವೀಸ್‌ಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದ್ದು, ಮುಷ್ಕರದಲ್ಲಿ ಎಷ್ಟು ವಿತರಣಾ ಪಾಲುದಾರರು ಭಾಗವಹಿಸುತ್ತಾರೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ.