ತಿರುಪತಿಗೆ ತುಪ್ಪ ಸಾಗಿಸುತ್ತಿದ್ದ ಟ್ಯಾಂಕರ್ ಕಡಪಾದಲ್ಲಿ ಪಲ್ಟಿಯಾಗಿದ್ದು, ಸ್ಥಳೀಯರು ತುಪ್ಪವನ್ನು ಸಂಗ್ರಹಿಸಿದ್ದಾರೆ. 'ಕಲ್ಕಿ' ಚಿತ್ರಕ್ಕಾಗಿ ಕಮಲ್ ಹಾಸನ್ 150 ಕೋಟಿ ರೂ. ಸಂಭಾವನೆ ಪಡೆದಿದ್ದರೆ, ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಜಯ್ ಅವರನ್ನು ಸಿಬಿಐ ಮತ್ತೆ ವಿಚಾರಣೆಗೆ ಕರೆದಿದೆ.

ತಿರುಪತಿಗೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ

ಕಡಪಾ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಪುಣೆಯಿಂದ ತೆರಳುತ್ತಿದ್ದ ತುಪ್ಪದ ಟ್ಯಾಂಕರ್ ಆಂಧ್ರಪ್ರದೇಶದ ವೈಎಸ್‌ಆರ್ ಕಡಪಾ ಜಿಲ್ಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ. ಈ ವೇಳೆ ಸ್ಥಳೀಯರು ರಸ್ತೆಗೆ ಬಿದ್ದ ತುಪ್ಪವನ್ನು ಬಕೆಟ್ ಪಾತ್ರೆಗಳಲ್ಲಿ ಬಾಚಿಕೊಂಡು ಹೋಗಿದ್ದಾರೆ.

Add Asianetnews Kannada as a Preferred SourcegooglePreferred

ಪೊಲೀಸರ ಮಾಹಿತಿ ಪ್ರಕಾರ, ತುಪ್ಪದ ಟ್ಯಾಂಕರ್ ಪುಣೆಯಿಂದ ತಿರುಮಲಕ್ಕೆ ತೆರಳುತ್ತಿತ್ತು. ಈ ವೇಳೆ ಚಿತ್ರಾವತಿ ನದಿ ಸೇತುವೆ ದಾಟುವ ವೇಳೆ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಮತ್ತು ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂದರ್ಭದಲ್ಲಿ ಪೊಲೀಸರು ಆಗಮಿಸುವ ಮುನ್ನವೇ ಸ್ಥಳೀಯರು ಟ್ಯಾಂಕರ್‌ನಲ್ಲಿದ್ದ ತುಪ್ಪವನ್ನು ಬಕೆಟ್, ಪಾತ್ರೆಗಳಲ್ಲಿ ತುಂಬಿಸಿಕೊಂಡು ಹೋದಂತಹ ಪ್ರಸಂಗ ನಡೆದಿದೆ. ಬಳಿಕ ಪೊಲೀಸರು ಸ್ಥಳದಲ್ಲಿದ್ದ ಜನರನ್ನು ಚದುರಿಸಿದರು. ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆಯನ್ನು ಆರಂಭಿಸಿದ್ದಾರೆ.

ಕಲ್ಕಿ ಸಿನಿಮಾಗೆ 20 ದಿನದ ಕಾಲ್ ಶೀಟ್‌ಗೆ 150 ಕೋಟಿ ರೂ. ಪಡೆದಿದ್ದ ಕಮಲ್ ಹಸನ್

ನವದೆಹಲಿ: 2024ರಲ್ಲಿ ರಿಲೀಸ್ ಆಗಿ ಭರ್ಜರಿ ಯಶಸ್ಸು ಗಳಿಸಿದ್ದ ನಟ ಕಮಲ್ ಹಾಸನ್ ಅಭಿನಯದ ಕಲ್ಕಿ 2898ಎಡಿ ಸಿನಿಮಾಕ್ಕಾಗಿ ಅವರು ಬರೋಬ್ಬರಿ 150 ಕೋಟಿ ರು. ಸಂಭಾವನೆ ಪಡೆದಿದ್ದರು ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಈ ಬಗ್ಗೆ ನಿರ್ದೇಶಕ, ನಟ ಯುಗಿ ಸೇತು ಸಂದರ್ಶನವೊಂದರಲ್ಲಿ ಮಾತನಾಡಿದ್ದು, 'ಕಮಲ್ ಅವರು ಚಿತ್ರದಲ್ಲಿ ಸಣ್ಣ ಪಾತ್ರಕ್ಕಾಗಿ ದೊಡ್ಡ ಸಂಭಾವನೆ ಪಡೆದಿದ್ದಾರೆ. 20 ದಿನದ ಕಾಲ್‌ಶೀಟ್‌ಗೆ ₹150 ಕೋಟಿ ಪಡೆದುಕೊಂಡಿದ್ದಾರೆ. ಇದು ಇತರ ನಟರಿಗಿಂತ ಹೆಚ್ಚು ಎಂದಿದ್ದಾರೆ.

ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಖ್ಯಾತ ತಾರೆಯರು ಅಭಿನಯಿಸಿದ್ದರು.

ಕರೂರು ಕಾಲ್ತುಳಿತ: ಇಂದು ನಟ ವಿಜಯ್ ಮತ್ತೆ ವಿಚಾರಣೆ

ನವದೆಹಲಿ: ಕಳೆದ ವರ್ಷ ಕರೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ 41 ಮಂದಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್‌ಗೆ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಈ ಹಿಂದೆ ದೆಹಲಿಯ ಪ್ರಧಾನ ಕಚೇರಿಯಲ್ಲಿ ವಿಜಯ್ ಅವರನ್ನು ಸಿಬಿಐ ಜ.12 ಮತ್ತು 19ರಂದು ವಿಚಾರಣೆ ನಡೆಸಿತ್ತು.

ಇದೀಗ ಸ್ಪಷ್ಟೀಕರಣ ಅಗತ್ಯವಿರುವ ಕಾರಣದಿಂದ ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಸಿಬಿಐ ವಿಜಯ್‌ಗೆ ಸೂಚನೆ ನೀಡಿದೆ. ಕಳೆದ ವರ್ಷದ ಸೆ.27ರಂದು ವಿಜಯ್ ಕರೂರಿನಲ್ಲಿ ನಡೆಸಿದ ಸಮಾವೇಶದ ಸಂದರ್ಭದಲ್ಲಿ 41 ಮಂದಿ ಬಲಿಯಾಗಿದ್ದರು. ಬಳಿಕ 2025ರ ಆಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದೆ.

ಇದನ್ನೂ ಓದಿ: ಇರಾನ್ ಇಸ್ರೇಲ್ ಯುದ್ಧದಿಂದ ಷೇರುಪೇಟೆ ಮಹಾಪತನ: 10 ದಿನದಲ್ಲಿ 31 ಲಕ್ಷ ಕೋಟಿ ಸಂಪತ್ತು ನಾಶ